March 11, 2026

ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಭಟ್ಕಳ: ನಿವೃತ್ತ ಸರ್ಕಾರಿ ನೌಕರರ ಸಂಘ, ಭಟ್ಕಳ ತಾಲೂಕ ಇದರ ವಾರ್ಷಿಕ ಮಹಾಸಭೆ ಭಟ್ಕಳ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಸಂಘದ ಅಧ್ಯಕ್ಷ ವಿ.ಡಿ. ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷೆ ಮೆಹಬೂಬಿ ಬಿ. ಪಟೇಲ್ ಉದ್ಘಾಟಿಸಿ ಮಾತನಾಡಿ, ನಿವೃತ್ತ ನೌಕರರು ಸಮಾಜಕ್ಕೆ ನೀಡಿರುವ ಸೇವೆ ಅಮೂಲ್ಯ. ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆಯಬೇಕು. ಹಿರಿಯರನ್ನು ಪ್ರೋತ್ಸಾಹಿಸಿ ಗೌರವಿಸುವುದು ಎಲ್ಲರ ಕರ್ತವ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಟ್ಕಳ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಮಾತನಾಡಿ, ನಿವೃತ್ತ ನೌಕರರಿಗೆ ತಮ್ಮ ಸಂಘದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು. ಮತ್ತೋರ್ವ ಅತಿಥಿಯಾಗಿ ನಿವೃತ್ತ ಅಧಿಕಾರಿ ಎ.ಎನ್. ಶೆಟ್ಟಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಸಂಘದ 75 ವರ್ಷ ಮೇಲ್ಪಟ್ಟ ಎಂಟು ಮಂದಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ 70 ಸದಸ್ಯರಲ್ಲಿ 25 ಮಂದಿಯನ್ನು ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಸಮಿತಿಯ ಪದಾಧಿಕಾರಿಗಳನ್ನು ಈ ತಿಂಗಳ ಕೊನೆಯೊಳಗೆ ಆಯ್ಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಆರಂಭದಲ್ಲಿ ರೋಹಿಣಿ ವೆರ್ಣೇಕರ ಪ್ರಾರ್ಥನೆ ಸಲ್ಲಿಸಿದರು. ನಿವೃತ್ತ ತಹಶೀಲ್ದಾರ ಎ.ಎ. ಘನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಆರ್. ನಾಯ್ಕ ವಾರ್ಷಿಕ ವರದಿ ವಾಚಿಸಿದರು. ಜಿ.ಎನ್. ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಎಂ.ಡಿ. ನಾಯ್ಕ ವಂದಿಸಿದರು. ಸಂಘದ ವತಿಯಿಂದ ಸದಸ್ಯರಿಗೆ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

About The Author

error: Content is protected !!