October 4, 2025

ಭಟ್ಕಳ ಶಿಕ್ಷಕರಿಗೆ ಗಣತಿ ಕಾರ್ಯದಲ್ಲಿ ಅನ್ಯಾಯ: ಸಂಘಗಳ ಜಂಟಿ ಮನವಿ

ಭಟ್ಕಳ: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಕಾರ್ಯದಲ್ಲಿ ಶಿಕ್ಷಕರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ಶಾಖೆ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಭಟ್ಕಳ ಶಾಖೆಗಳು ಜಂಟಿಯಾಗಿ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಸೆ.22ರಿಂದ ಆರಂಭವಾದ ಸಮೀಕ್ಷಾ ಕಾರ್ಯದಲ್ಲಿ ಹಲವು ನ್ಯೂನತೆಗಳು ಕಂಡುಬAದಿರುವುದನ್ನು ಮನವಿಯಲ್ಲಿ ಸಂಘಗಳು ಸ್ಪಷ್ಟಪಡಿಸಿವೆ. ಮನೆ ಪಟ್ಟಿ ನೀಡದೇ ಶಿಕ್ಷಕರನ್ನು ಗಣತಿಗೆ ನಿಯೋಜಿಸಿರುವುದು, ಪ್ರದೇಶದ ವ್ಯಾಪ್ತಿ ಸ್ಪಷ್ಟವಾಗಿಲ್ಲದಿರುವುದು, ಗಣತಿ ಆಪ್‌ನಲ್ಲಿ ತೋರಿಸುವ ಮನೆಗಳ ವಿವರಗಳು ಮತ್ತು ವಾಸ್ತವ ಮನೆಗಳ ಮಾಹಿತಿ ಹೊಂದಿಕೆಯಾಗದಿರುವುದು ಶಿಕ್ಷಕರಿಗೆ ದೊಡ್ಡ ತೊಂದರೆ ಉಂಟುಮಾಡುತ್ತಿದೆ ಎಂದು ಸಂಘಗಳು ತಿಳಿಸಿವೆ.
ಗ್ರಾಮೀಣ ಭಾಗದ ಶಿಕ್ಷಕರನ್ನು ಭಟ್ಕಳ ಪಟ್ಟಣಕ್ಕೆ ನಿಯೋಜಿಸಿರುವುದರಿಂದ ವಿಶೇಷವಾಗಿ ಮಹಿಳಾ ಶಿಕ್ಷಕರಿಗೆ ಅಪರಿಚಿತ ಪ್ರದೇಶದಲ್ಲಿ ಗಣತಿ ನಡೆಸುವುದು ಕಷ್ಟಕರವಾಗಿದೆ. ಅನಾರೋಗ್ಯ ಪೀಡಿತರು, ನಿವೃತ್ತಿ ಅಂಚಿನಲ್ಲಿರುವವರು, ಮೊಬೈಲ್ ಆಪ್ ಬಳಕೆ ತಿಳಿಯದವರಿಗೂ ಗಣತಿ ಜವಾಬ್ದಾರಿ ನೀಡಿರುವುದು ಅಸಮಂಜಸವಾಗಿದೆ ಎಂದು ಸಂಘಗಳ ಅಸಮಾಧಾನ ವ್ಯಕ್ತಪಡಿಸಿದೆ.

ಅದೇ ರೀತಿ ಗಣತಿದಾರರಿಗೆ ಅಗತ್ಯ ಪರಿಕರಗಳು ಹಾಗೂ ಬ್ಯಾಗ್ ಒದಗಿಸದೆ ಇರುವುದರ ಜೊತೆಗೆ 150 ಕ್ಕಿಂತ ಹೆಚ್ಚು ಮನೆಗಳನ್ನು ಹಂಚಿಕೆ ಮಾಡಿರುವುದು ಶಿಕ್ಷಕರಿಗೆ ಹೆಚ್ಚುವರಿ ಹೊರೆ ತಂದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವವರೆಗೆ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಂಘಗಳು ತಹಶೀಲ್ದಾರರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

About The Author

error: Content is protected !!