November 19, 2025

ಭಟ್ಕಳದಲ್ಲಿ ಟ್ರಾಫಿಕ್ ನಿಯಂತ್ರಣ ತರಬೇತಿ: ಪೊಲೀಸರಿಗೆ ವಿಶೇಷ ಮಾರ್ಗದರ್ಶನ

ಸಂಚಾರ ನಿಯಂತ್ರಣ ಬಲಪಡಿಸಲು ಮುಂದಾದ ಪೊಲೀಸ್ ಇಲಾಖೆ
ಸಂಚಾರ ಶಿಸ್ತು ಸುರಕ್ಷತೆ ಬಲಪಡಿಸಲು ಕಾರ್ಯೋನ್ಮುಖ ಪೊಲೀಸರು

ಭಟ್ಕಳ: ತಾಲೂಕಿನೊಳಗೆ ವಾಹನ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಅಪಘಾತಗಳ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಉದ್ದೇಶದಿಂದ ಭಟ್ಕಳ ನಗರ ಪೊಲೀಸ್ ಠಾಣೆಯ ವತಿಯಿಂದ ವಿಶೇಷ ಟ್ರಾಫಿಕ್ ತರಬೇತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ನಿರ್ದೇಶನದ ಮೇರೆಗೆ, ಡಿವೈಎಸ್‌ಪಿ ಮಹೇಶ್ ಎಂ.ಕೆ. ಅವರ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ್ ಪಿ.ಎಂ. ಮತ್ತು ಪಿಎಸ್‌ಐ ನವೀನ್ ನಾಯ್ಕ ಅವರ ನೇತೃತ್ವದಲ್ಲಿ ಹತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಹೊಸ ಟ್ರಾಫಿಕ್ ಸಮವಸ್ತ್ರದಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಯಿತು.

ಈ ತರಬೇತಿ ಸಂಶುದ್ದೀನ್ ಸರ್ಕಲ್, ಪ್ರವಾಸಿ ಮಂದಿರ ಮತ್ತು ಪಿ.ಎಲ್.ಡಿ. ಬ್ಯಾಂಕ್ ಮುಂಭಾಗದಲ್ಲಿ ನಡೆಯಿತು. ಪಿಎಸ್‌ಐ ನವೀನ್ ನಾಯ್ಕ ಅವರು ಸಂಚಾರ ನಿಯಂತ್ರಣದ ತಾಂತ್ರಿಕ ವಿಧಾನಗಳು, ಟ್ರಾಫಿಕ್ ಶಿಸ್ತು, ಅಪಘಾತ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು ಹಾಗೂ ಜನರ ಜೀವ ಸುರಕ್ಷತೆಯ ದೃಷ್ಟಿಯಿಂದ ನಿಯಮ ಪಾಲನೆಯ ಅಗತ್ಯತೆ ಕುರಿತು ಮಾರ್ಗದರ್ಶನ ನೀಡಿದರು.

ತರಬೇತಿಯಲ್ಲಿ ನಿಯಂತ್ರಣ ವ್ಯವಸ್ಥೆ, ಅಪಘಾತ ವಿಶ್ಲೇಷಣೆ ಹಾಗೂ ತುರ್ತು ಕ್ರಮಗಳ ಕುರಿತಂತೆ ನುರಿತ ಟ್ರಾಫಿಕ್ ಸಿಬ್ಬಂದಿ ಮಾಹಿತಿ ನೀಡಲಾಯಿತು. ಪಿಎಸ್‌ಐ ತಿಮ್ಮಪ್ಪ ಎಸ್. ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

error: Content is protected !!