ಕೃಷ್ಣರಾಜ ಪೇಟೆ : ಕಾವೇರಿ ತಂತ್ರಾಂಶ 3.0 ಅನುಷ್ಠಾನದಿಂದ ಪತ್ರ ಬರಹಗಾರರ ಬದುಕು ಸಂಕಷ್ಟಕ್ಕೆ ಸಿಗಲಿದೆ. ಪತ್ರ ಬರಹಗಾರರ ಆತಂಕ ಅನಿರ್ದಿಷ್ಟಾವಧಿ ಲೇಖನಿ ಸ್ಥಗಿತ ಮುಷ್ಕರಕ್ಕೆ ಚಾಲನೆ ನೀಡಿ ಪ್ರತಿಭಟನೆಯ ಹಾದಿ ಹಿಡಿದ ಕೃಷ್ಣರಾಜಪೇಟೆ ತಾಲೂಕಿನ ಪತ್ರ ಬರಹಗಾರರು. ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಪರವಾನಗಿ ಪಡೆದ (ದಸ್ತು) ಪತ್ರ ಬರಹಗಾರರ ಒಕ್ಕೂಟದ ವತಿಯಿಂದ ಇಂದು ಕೃಷ್ಣರಾಜಪೇಟೆ ತಾಲೂಕಿನ ಪತ್ರ ಬರಹಗಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಪರವಾನಗಿ ಪಡೆದ ದಸ್ತಾವೇಜು ಬರಹಗಾರರಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ – 02 ತಂತ್ರಾಂಶದಲ್ಲಿ ದಸ್ತಾವೇಜು ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವುದು ಮತ್ತು ಮುಂದಿನ ದಿನಗಳಲ್ಲಿ ನೋಂದಣಿ ಇಲಾಖೆಯು ಜಾರಿಗೆ ತರಲು ಉದ್ದೇಶಿಸಿರುವ ಕಾವೇರಿ- 03 ತಂತ್ರಾಂಶವನ್ನು ರದ್ದು ಪಡಿಸುವಂತೆ ಆಗ್ರಹಿಸಿ ಕೃಷ್ಣರಾಜಪೇಟೆ ತಾಲೂಕಿನ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರರು ಉಪನೊಂದಣಾಧಿಕಾರಿ ಕಚೇರಿಯ ಮುಂದೆ ಲೇಖನಿ ಸ್ಥಗಿತ ಮುಷ್ಕರ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಾದ್ಯಂತ 16,000ಕ್ಕೂ ಹೆಚ್ಚಿನ ಪತ್ರ ಬರಹಗಾರರು ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಸಿಟಿಜನ್ ಲಾಗಿನ್ ಕಾವೇರಿ ತಂತ್ರಾಂಶ 03ರಿಂದ ಪತ್ರ ಬರಹಗಾರರ ಕೆಲಸಕ್ಕೆ ಸಂಚಕಾರ ಉಂಟಾಗಲಿದೆ. ಕಳೆದ 20-25 ವರ್ಷಗಳಿಂದ ಕೇವಲ ಶೇಕಡ 10 ರಷ್ಟು ಬಿಕ್ಲo ಸಂಭಾವನೆಯನ್ನು ಪಡೆದುಕೊಂಡು ಕೆಲಸ ಮಾಡುತ್ತಿರುವ ಪತ್ರ ಬರಹಗಾರರ ಬದುಕು ಇಂದು ತೀವ್ರವಾದ ಸಂಕಷ್ಟದಲ್ಲಿದೆ. ರೈತ ಬಾಂಧವರು 11ಬಿ ಸ್ಕೆಚ್ ಪ್ರಕಾರ ವಿಭಾಗ ಪತ್ರಗಳನ್ನು ನೋಂದಣಿ ಮಾಡಿಸಿಕೊಳ್ಳಲು ತೊಂದರೆ ಯಾಗುತ್ತಿರುವುದರಿಂದ ರಾಜ್ಯ ಸರ್ಕಾರವು ಕೂಡಲೇ ಮಧ್ಯ ಪ್ರವೇಶಿಸಿ ಕಾವೇರಿ 02ರ ತಂತ್ರಾಂಶದಲ್ಲಿರುವ ಗೊಂದಲಗಳು ಹಾಗೂ ಲೋಪ ದೋಷಗಳನ್ನು ಮೊದಲು ಸರಿಪಡಿಸಬೇಕು. ಪರವಾನಗಿ ಪಡೆದಿರುವ ಪತ್ರ ಬರಹಗಾರರಿಗೆ ಲೈಸನ್ಸ್ ಪಡೆದಿರುವ ಸರ್ವೆಯರ್ ಗಳಿಗೆ ನೀಡಿರುವಂತೆ ಪ್ರತ್ಯೇಕ ಲಾಗಿನ್ ಸೌಲಭ್ಯವನ್ನು ಪತ್ರ ಬರಹಗಾರರಿಗೂ ನೀಡಬೇಕು ಈ ಬಗ್ಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ರಾಜ್ಯದಾದ್ಯಂತ ಎಲ್ಲಾ ಉಪನೊಂದಣಾಧಿಕಾರಿ ಗಳ ಕಚೇರಿಗಳ ಮುಂದೆ ಅನಿರ್ದಿಷ್ಟಾವಧಿ ಲೇಖನಿ ಸ್ಥಗಿತ ಮುಷ್ಕರ ನಡೆಸಿ ಬೆಳಗಾವಿ ಚಲೋ ಮುಷ್ಕರವನ್ನು ಹಮ್ಮಿಕೊಂಡಿದ್ದೇವೆ. ಈ ಹೋರಾಟದಲ್ಲಿ ನಾಡಿನ ಎಲ್ಲಾ ಪತ್ರ ಬರಹಗಾರರು ಭಾಗವಹಿಸುವ ಮೂಲಕ ನಮ್ಮ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಕೃಷ್ಣರಾಜಪೇಟೆ ತಾಲೂಕು ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ಪಿ.ಎಸ್. ಶಿವಲಿಂಗೇಗೌಡ ಹಾಗೂ ಕಾರ್ಯದರ್ಶಿ ಕೆ.ಆರ್.ಹರೀಶ್ ಕುಮಾರ್ ಮನವಿ ಮಾಡಿದರು. ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚಿನ ಲಾಭವನ್ನು ತಂದು ಕೊಡುತ್ತಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡು ಪರವಾನಗಿ ಪಡೆದ ಪತ್ರ ಬರಹಗಾರರು ನಾಡಿನ ರೈತರ ವಿಶ್ವಾಸಕ್ಕೆ ಧಕ್ಕೆ ಬರೆದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸಾರ್ವಜನಿಕರ ಆಸ್ತಿಪಾಸ್ತಿ ಸಂರಕ್ಷಣೆಯಲ್ಲಿ ನಿರ್ಣಾಯಕವಾಗಿದ್ದಾರೆ. ರಾಜ್ಯ ಸರ್ಕಾರವು ಮುದ್ರಾಂಕ ಇಲಾಖೆಯ ಮೂಲಕ ಕಾವೇರಿ ತಂತ್ರಾಂಶ 3.0 ನ್ನು ಜಾರಿಗೊಳಿಸಿದರೆ ಪತ್ರ ಬರಹಗಾರರು ತೀವ್ರವಾದ ಸಂಕಷ್ಟಕ್ಕೆ ಒಳಗಾಗುವುದಲ್ಲದೆ ತಮ್ಮ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಮಾನವೀಯ ನೆಲೆಗಟ್ಟಿನಲ್ಲಿ ರಾಜ್ಯ ಸರ್ಕಾರವು ಕೂಡಲೇ ಸೂಕ್ತ ನಿರ್ಧಾರವನ್ನು ಕೈಗೊಂಡು ಕೂಡಲೇ ಕಾವೇರಿ 3.0 ತಂತ್ರಾಂಶವನ್ನು ರದ್ದುಪಡಿಸಿ ಕಾವೇರಿ 2.0 ತಂತ್ರಾಂಶವನ್ನೇ ಮತ್ತಷ್ಟು ಅಭಿವೃದ್ಧಿಪಡಿಸಿ ಸುಧಾರಣೆ ಮಾಡುವ ಮೂಲಕ ಪತ್ರ ಬರಹಗಾರರು ಹಾಗೂ ನಾಡಿನ ರೈತಪಿ ವರ್ಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕೃಷ್ಣರಾಜಪೇಟೆ ತಾಲ್ಲೂಕು ಪತ್ರ ಬರಹಗಾರರ ಒಕ್ಕೂಟವು ಆಗ್ರಹಿಸಿತು. ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟದ ನೇತೃತ್ವದಲ್ಲಿ ಕೃಷ್ಣರಾಜಪೇಟೆ ತಾಲೂಕಿನ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಪಿ. ಎಸ್.ಶಿವಲಿಂಗೇಗೌಡ, ಕಾರ್ಯದರ್ಶಿ ಕೆ.ಆರ್.ಹರೀಶ್ ಕುಮಾರ್, ಉಪಾಧ್ಯಕ್ಷ ಕೆ.ಎಸ್.ನಾಗರಾಜು, ಖಜಾಂಚಿ ಮದುಗೆರೆ ಶಂಕರ್ ನಾಗ್, ಸಹಕಾರ್ಯದರ್ಶಿ ಟಿ. ನರಸಿಂಹಮೂರ್ತಿ, ಸಂಘಟನಾ ಕಾರ್ಯದರ್ಶಿ ಮುರುಗೇಶ್, ನಿರ್ದೇಶಕರುಗಳಾದ ಕೆ.ಸಿ. ವೆಂಕಟರಾಮ, ಎಂ.ಎಸ್. ಮಹದೇವು, ಕೆ.ಟಿ. ಮಂಜುನಾಥ್, ಎಂ.ಎಸ್.ಮಹದೇವಸ್ವಾಮಿ, ಕೆ. ಎಸ್.ಬಸವರಾಜು, ಅಕ್ಕಿಹೆಬ್ಬಾಳು ರಮೇಶ್, ಡಿ.ಜೆ.ರೇವಣ್ಣ, ಚಿಕ್ಕಗಾಡಿಗನಹಳ್ಳಿ ಸಣ್ಣಸ್ವಾಮಿ, ಮಾದಾಪುರ ಕೊಪ್ಪಲಿನ ಎಂ.ಕೆ. ಯತಿರಾಜು, ಕಿಕ್ಕೇರಿ ಎಂ.ಎನ್. ಶ್ರೀನಿವಾಸಮೂರ್ತಿ, ಸಾವಿತ್ರಿ ಹೆಗಡೆ, ಸಂತೆಪಾಚಹಳ್ಳಿ ಎಸ್ ಆರ್.ನಾಗರಾಜು ಸೇರಿದಂತೆ ಕಂಪ್ಯೂಟರ್ ಆಪರೇಟರ್ ಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪತ್ರ ಬರಹಗಾರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಲೇಖನ ಸ್ಥಗಿತ ಮುಷ್ಕರಕ್ಕೆ ಬೆಂಬಲ ನೀಡಿದರು.
ವರದಿ ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ವಿದ್ಯಾರ್ಥಿಗಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಗಣಿತ ಹಾಗೂ ವಿಜ್ಞಾನ ಶಿಕ್ಷಣವು ದಾರಿ ದೀಪವಾಗಿದೆ. ಮುಖ್ಯ ಶಿಕ್ಷಕಿ ನಾಗರತ್ನ.
ಸದೃಢ, ಸಶಕ್ತ ರಾಷ್ಟ್ರದ ನಿರ್ಮಾಣಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಮಲ್ಲಿಕಾರ್ಜುನ
ಬಾಲಯೇಸು ದೇವಾಲಯದ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್