ಭಟ್ಕಳ: ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ನ 2026 ನೇ ಸಾಲಿನ ರಾಜ್ಯದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿಯಾದ “ಕರ್ನಾಟಕ ಸೇವಾರತ್ನ” ಪ್ರಶಸ್ತಿಗೆ ಕವಿ,ಸಾಹಿತಿ,ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಪ್ರೆಸ್ ಕ್ಲಬ್ 2026ರ ಹೊಸ ವರ್ಷದ ಸುವರ್ಣ ಸಮಯದಲ್ಲಿ ಕನ್ನಡ ನಾಡು, ನುಡಿ ಮತ್ತು ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸುತ್ತಾ ವಿವಿಧ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿ, ಸಮಾಜಕ್ಕೂ ಮತ್ತು ಈ ನಾಡಿಗೆ ಮಾದರಿ ಆಗಿರುವ ಕೆಲ ಸಾಧಕರನ್ನು ಸನ್ಮಾನಿಸಿ, ಅಭಿನಂಧಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ಅಸಾಧಾರಣ ಸೇವೆಗಾಗಿ ಶ್ರೀಧರ ಶೇಟ್ ಶಿರಾಲಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಪ್ರೆಸ್ ಕ್ಲಬ್ ನ ರಾಜ್ಯಾಧ್ಯಕ್ಷ ಎಸ್. ರಾಮಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ ಎಸ್.ಜಿ. ತಿಳಿಸಿದ್ದಾರೆ.
ಭಟ್ಕಳ ತಾಲೂಕಿನ ಜಾಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿರುವ ಇವರು ಕವಿ, ಲೇಖಕ, ಅಂಕಣಕಾರ,ಚಿತ್ರ ಕಲಾವಿದ, ವಾಗ್ಮಿ,ವ್ಯಂಗ್ಯಚಿತ್ರಕಾರ,ಕಾರ್ಯಕ್ರಮ ನಿರೂಪಕ,ಸಂಘಟನಾಕಾರ,ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ,
ಸಂಪನ್ಮೂಲ ವ್ಯಕ್ತಿ ಹೀಗೆ ಬಹುಮುಖ ಪ್ರತಿಭೆಯ ಸಂಗಮವಾಗಿ ಜನಮನ್ನಣೆ ಗಳಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳಲ್ಲಿ ಒಟ್ಟು 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.ಇವರು ನಿರಂತರ ಎಂಟು ವರ್ಷಗಳಿಂದ ಎಸ್. ಎಸ್. ಎಲ್. ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸುತ್ತಾ ಬಂದಿದ್ದಾರೆ.ಇವರ ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದಲ್ಲಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಸರಾಸರಿ ಅಂಕ ಗಳಿಸುವ ಹಾಗೆ ಬೋಧಿಸಿರುವುದಕ್ಕಾಗಿ ಎರಡು ಬಾರಿ ಧಾರವಾಡದ ಡಾ.ಎಚ್.ಎಫ್.ಕಟ್ಟೀಮನಿ ಪ್ರತಿಷ್ಠಾನದ ‘ಶಿಕ್ಷಕ ಪರಿಶ್ರಮ ಹಿರಿಮೆಗೆ ಗೌರವ’ ಪ್ರಶಸ್ತಿಯಿಂದ ಪುರಸ್ಕರಿಸಲ್ಪಟ್ಟಿದ್ದಾರೆ.
ಶಿಕ್ಷಣ ಇಲಾಖೆಯ ಹಲವು ತರಬೇತಿಗಳ ರಾಜ್ಯ- ಜಿಲ್ಲೆ- ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಮಾಸ್ಟರ್ ಟ್ರೇನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರ ಶೈಕ್ಷಣಿಕ ಸಾಧನೆಗಾಗಿ ಕರ್ನಾಟಕ ಸರ್ಕಾರವು 2025ನೇ ಸಾಲಿನ “ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ” ನೀಡಿ ಪುರಸ್ಕರಿಸಿರುವುದನ್ನು ಸ್ಮರಿಸಿಕೊಳ್ಳಬಹುದು.
ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಇವರು ಹಸಿವು ಸಾಯುವುದಿಲ್ಲ, ಬೇಲಿಯ ಹೂವು, ಬೆರಳ ಸಂಧಿಯಿಂದ, ಕಾವ್ಯ ಜ್ಯೋತಿ ಇತ್ಯಾದಿ ಕವನ ಸಂಕಲಗಳು ಸೇರಿದಂತೆ ಒಟ್ಟು ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಭಟ್ಕಳ ತಾಲೂಕಿನ ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಬನವಾಸಿಯಲ್ಲಿ ನಡೆದ ರಾಜ್ಯಮಟ್ಟದ ಕದಂಬೋತ್ಸವ ಕವಿಗೋಷ್ಠಿ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ
ಕವನ ವಾಚನ ಮಾಡಿ ಸನ್ಮಾನಿಸಲ್ಪಟ್ಟಿದ್ದಾರೆ. ಇವರ ‘ಬೇಲಿಯ ಹೂವು’ ಎಂಬ ಪ್ರಖ್ಯಾತ ಮಕ್ಕಳ ಕವನವು ಐಸಿಎಸ್ಸಿ ಪಠ್ಯಕ್ರಮದ ಐದನೇ ತರಗತಿಯ “ಕನ್ನಡ ಚಂದನ” ಪಠ್ಯಪುಸ್ತಕದಲ್ಲಿ ಪ್ರಕಟಿತವಾಗಿ ಅಪಾರ ಜನ ಮೆಚ್ಚುಗೆ ಗಳಿಸಿದೆ.”ಕರಾವಳಿ ಪ್ರಭ” ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ವ್ಯಕ್ತಿತ್ವ ವಿಕಸನ ಲೇಖನಗಳ “ಕಾವ್ಯ ಜ್ಯೋತಿ” ಎಂಬ ಅಂಕಣ ಜನಪ್ರಿಯತೆ ಗಳಿಸಿದೆ.ತಮ್ಮ ಕವನಗಳಿಗಾಗಿ ಎರಡು ಬಾರಿ ರಾಜ್ಯಮಟ್ಟದ ‘ಸಂಕ್ರಮಣ ಕಾವ್ಯ ಪ್ರಶಸ್ತಿ’ಯಿಂದ ಪುರಸ್ಕರಿಸಲ್ಪಟ್ಟಿರುವ,
ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಭಟ್ಕಳ ತಾಲೂಕ ಆಡಳಿತವು ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಮಾಸ್ಕೇರಿ ಸಾಹಿತ್ಯಾರಾಧನಾ ವೇದಿಕೆ ಮತ್ತು ಸಾಹಿತ್ಯ ಸಂಚಯ ಶಿರಸಿಯವರು “ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ”ಯನ್ನು ನೀಡಿ ಪುರಸ್ಕರಿಸಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಜ್ಞಾನ ಭಾರತಿಯ ಕಲಾಗ್ರಾಮದಲ್ಲಿ ಇದೇ ಜನವರಿಯ 13 ನೇ ತಾರೀಕಿನ ಮಂಗಳವಾರ ಸಂಜೆ 4.00 ಗಂಟೆಗೆ ಜರುಗಲಿದೆ.
ಇವರಿಗೆ ಈ ಪ್ರಶಸ್ತಿ ಸಂದಿರುವುದಕ್ಕೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಗಣ್ಯರು ಶುಭ ಹಾರೈಸಿದ್ದಾರೆ.


More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ