March 2, 2026

ಭಟ್ಕಳದಿಂದ ಮುರುಡೇಶ್ವರ ದೇವಸ್ಥಾನಗೆ ತಹಶೀಲ್ದಾರರ ಪಾದಯಾತ್ರೆ

ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನಿಂದ ಸಾವಿರಾರು ಶಿವಭಕ್ತರು ವಿಶ್ವ ಪ್ರಸಿದ್ಧ ಮುರುಡೇಶ್ವರದ ಶಿವನ ದೇಗುಲಕ್ಕೆ ಬರಿಗಾಲಿನಲ್ಲಿ ಸುಮಾರು 18 ಕಿಲೋಮೀಟರ್ ಪಾದಯಾತ್ರೆ ನಡೆಸಿದರು. ನಸುಕಿನ ಜಾವದಿಂದಲೇ ‘ಓಂ ನಮಃ ಶಿವಾಯ’ ಘೋಷಣೆಗಳ ನಡುವೆ ಭಕ್ತರು ಮುರುಡೇಶ್ವರದತ್ತ ಹೆಜ್ಜೆ ಹಾಕಿದರು.
ತಹಶೀಲ್ದಾರ ನಾಗ್ರೇಂದ್ರ ಕೋಳ ಶೆಟ್ಟಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಬೆಳಗಿನ ನಾಲ್ಕು ಗಂಟೆ ಸುಮಾರಿಗೆ ಭಟ್ಕಳದಿಂದ ಪಾದಯಾತ್ರೆ ಆರಂಭಿಸಿ, ಏಳು ಗಂಟೆ ವೇಳೆಗೆ ಶಿವ ಪಂಚಕ್ಷೇತ್ರಗಳಲ್ಲಿ ಒಂದಾದ ಮುರುಡೇಶ್ವರ ದೇವಸ್ಥಾನಕ್ಕೆ ತಲುಪಿ ದೇವರ ದರ್ಶನ ಪಡೆದರು. ಅಧಿಕಾರಿಗಳ ಈ ಧಾರ್ಮಿಕ ಹೆಜ್ಜೆಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.


ಈ ಕುರಿತು ಮಾತನಾಡಿದ ತಹಶೀಲ್ದಾರರು, “ಶಿವರಾತ್ರಿ ಪ್ರಯುಕ್ತ ಮೊದಲ ಬಾರಿಗೆ ಸಿಬ್ಬಂದಿಗಳೊಂದಿಗೆ ಪಾದಯಾತ್ರೆ ಬಂದು ದರ್ಶನ ಪಡೆದಿದ್ದೇನೆ. ಮಹಾ ಮುರುಡೇಶ್ವರನು ಎಲ್ಲಾ ಭಕ್ತರಿಗೆ ಆಯುಷ್ಯ, ಆರೋಗ್ಯ ನೀಡಲಿ” ಎಂದು ಪ್ರಾರ್ಥಿಸಿದರು.


ಇನ್ನೊಂದೆಡೆ, ಲೋಕಕಲ್ಯಾಣಾರ್ಥವಾಗಿ ಸತತ 16ನೇ ವರ್ಷದ ರಂಜನ್ ಗ್ಯಾಸ್ ಏಜೆನ್ಸಿಯ ಆಶ್ರಯದಲ್ಲಿ ಈ ಭಾರಿ ಪಾದಯಾತ್ರೆ ನಡೆಯಿತು. ರಂಜನ್ ಇಂಡೇನ್ ಏಜೆನ್ಸಿಯ ಮಾಲೀಕರಾದ ಶಿವಾನಿ ಶಾಂತಾರಾಮ, ಶಾಂತಾರಾಮ ಭಟ್ಕಳ, ಕಿರಣ ಚಂದಾವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

About The Author

error: Content is protected !!