March 2, 2026

ಲೋಕಕಲ್ಯಾಣಾರ್ಥವಾಗಿ 7ನೇ ವರ್ಷದ ಪಾದಯಾತ್ರೆ

ಭಟ್ಕಳ:  ತಾಲ್ಲೂಕಿನ ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ಮಹಾವಿಷ್ಣು ಗಣಪತಿ ದೇವಸ್ಥಾನದಿಂದ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯ ಶಿವಶಾಂತಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಮಹಾಶಿವರಾತ್ರಿಯ ಅಂಗವಾಗಿ ಸ್ಥಳೀಯರು ಲೋಕಕಲ್ಯಾಣಾರ್ಥವಾಗಿ 7ನೇ ವರ್ಷದ ಪಾದಯಾತ್ರೆ ನಡೆಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.


ದೇವಿಮನೆಯಲ್ಲಿ ಭಕ್ತರನ್ನುದ್ಧೇಶಿಸಿ ಮಾತನಾಡಿದ ದೇವಿಮನೆ ಪ್ರಧಾನ ಅರ್ಚಕ ವೆ.ಮೂ.ಬಾಲಚಂದ್ರ ಭಟ್ಟ ಅವರು, ಶಿವರಾತ್ರಿಯಂದು ಪಾದಯಾತ್ರೆ ನಡೆಸುವುದು ಪುಣ್ಯ ಕಾರ್ಯ. ಶಿವನ ಸ್ಮರಣೆಯಿಂದ ನಮ್ಮಲ್ಲಿರುವ ಪಾಪತ್ವ, ಕೊಳೆ, ಕಲ್ಮಶ ನಾಶವಾಗಿ ಮನಸ್ಸು ಶುದ್ದೀಕರಣ ಆಗುತ್ತದೆ. ಇಂತಹ ಪುಣ್ಯ ಕಾರ್ಯಗಳು ಹೆಚ್ಚಾಗಬೇಕು. ಪಾದಯಾತ್ರೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು ಎಂದರು. ಧನ್ವಂತರಿ ವಿಷ್ಣುಮೂರ್ತಿ ಗಣಪತಿ ದೇವಸ್ಥಾನದಲ್ಲಿ ಅರ್ಚಕ ಶಂಕರ ಭಟ್ಟ ಅವರು ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪಾದಯಾತ್ರೆ ಸಂದರ್ಭದಲ್ಲಿ ಮತ್ತು ದೇವಸ್ಥಾನದಲ್ಲಿ ಪಂಚಾಕ್ಷರಿ ಜಪ, ಭಜನೆ ಹಾಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತಾಧಿಗಳಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪಾದಯಾತ್ರೆಗೆ ನಾಗರಾಜ ಭಟ್ಟ ನೇತೃತ್ವದ ತಂಡದ ಚಂಡೆ ಮೆರಗು ನೀಡಿತು.

ಪಾದಯಾತ್ರೆ ಮುಗಿಸಿ ವಾಪಾಸ್ ಹೋಗಲು ಸಂತೋಷ ಲಕ್ಷ್ಮಣ ನಾಯ್ಕ ವಾಹನ ವ್ಯವಸ್ಥೆ ಮಾಡಿದ್ದರು. ಪಾದಯಾತ್ರೆ ಸಮಿತಿಯ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಸ್ವಾಗತಿಸಿ, ಪಾದಯಾತ್ರೆ ಯಶಸ್ವಿಗೆ ಎಲ್ಲರ ಸಹಕಾರವೇ ಕಾರಣ ಎಂದರು. ಕಾರ್ಯದರ್ಶಿ ಕೃಷ್ಣಮೂರ್ತಿ ಹೆಗಡೆ ವಂದಿಸಿದರು. ಪಾದಯಾತ್ರೆಯಲ್ಲಿ ಪುಟ್ಟ ಮಕ್ಕಳು, ಮಹಿಳೆಯರು ಸೇರಿದಂತೆ 150ಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.

About The Author

error: Content is protected !!