ಕೃಷ್ಣರಾಜಪೇಟೆ ತಾಲೂಕಿನ ಬಂಡಬೋಯನ ಹಳ್ಳಿ ಗ್ರಾಮದ ಮಲೆ ಮಹದೇಶ್ವರ ಸುಕ್ಷೇತ್ರಕ್ಕೆ ಮಹಾಶಿವರಾತ್ರಿಯ ಅಂಗವಾಗಿ ಭಕ್ತ ಸಾಗರವೇ ಹರಿದು ಬಂದಿತ್ತು. ಹರ ಹರ ಮಹಾದೇವ ಶಂಭೋ ಶಂಕರ ಎಂಬ ಶಿವ ಮಂತ್ರಘೋಷಗಳು ಪ್ರತಿಧ್ವನಿಸುತ್ತಿದ್ದವು. ಮಲೆ ಮಹದೇಶ್ವರ ಸುಕ್ಷೇತ್ರದ ಪೂಜ್ಯ ಸ್ವಾಮೀಜಿಗಳಾದ ಪ್ರಕಾಶ್ ಗುರೂಜಿಯವರು ಸುಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳಿಗೆ ವಿಭೂತಿ ಧರಿಸಿ, ಬಿಲ್ವಪತ್ರೆಯನ್ನು ನೀಡಿ ಹರಸಿ ಆಶೀರ್ವದಿಸಿದರು ಭಕ್ತಾದಿಗಳಿಗೆ ಸಾಮೂಹಿಕ ಅನ್ನ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು. ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಕರುಣಿಸಿ ಆಶೀರ್ವದಿಸುತ್ತಿರುವ ಮಲೆ ಮಹದೇಶ್ವರ ಸುಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಮುಂಜಾನೆ ಆರಂಭವಾದ ಪೂಜೆ ಪುರಸ್ಕಾರಗಳಿಗೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಶಿವಲಿಂಗದ ಮೇಲೆ ಹಾಲಿನ ಅಭಿಷೇಕವನ್ನು ಮಾಡಿ ಧನ್ಯತಾ ಭಾವವನ್ನು ಪ್ರದರ್ಶಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಪ್ರಕಾಶ್ ಗುರೂಜಿ ಮಹಾಶಿವರಾತ್ರಿಯು ಶಿವನನ್ನು ಆರಾಧಿಸುವ ಪವಿತ್ರ ದಿನವಾಗಿರುವುದರಿಂದ ಭಕ್ತರು ತಮ್ಮ ಮನದ ಕೋರಿಕೆಗಳನ್ನು ನೆರವೇರಿಸುವಂತೆ ಭಕ್ತಿಯಿಂದ ಶುಭ ನಾಮ ಸ್ಮರಣೆಯನ್ನು ಮಾಡಿ ಜಾಗರಣೆ ಮಾಡುವ ಮೂಲಕ ಪರಶಿವನ ಕೃಪ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಹೇಳಿದರು. ಅಗ್ರಹಾರ ಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವೀಕುಮಾರ್, ಮುಖಂಡರಾದ ರಾಮಕೃಷ್ಣೇಗೌಡ, ಆರ್. ಶ್ರೀನಿವಾಸ್ ಸಜ್ಜನ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಜೇಂದ್ರ ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ತೋಟಪ್ಪ ಶೆಟ್ಟಿ, ಬ್ಯಾಂಕ್ ಪರಮೇಶ್ವರ್, ಮಂಡ್ಯ ಜಿಲ್ಲಾ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಸುಬ್ರಮಣ್ಯ, ಉದ್ಯಮಿ ಹರೀಶ್ ಸಂಜೀವಯ್ಯ ಸೇರಿದಂತೆ ಸಾವಿರಾರು ಭಕ್ತಾದಿಗಳು ಪವಿತ್ರ ಜಾಗರಣೆ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ
ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿಯ ಅಮಾವಾಸ್ಯೆ ಜಾಗರಣೆ ಕಾರ್ಯಕ್ರಮ