ಬಿಲ್ಲವಾಸ್ ಕತಾರ್ ಸಂಸ್ಥೆಯು ದೋಹಾದ “ದಿ ಹ್ಯಾಮಿಲ್ಟನ್ ಇಂಟರ್ನ್ಯಾಷನಲ್ ಸ್ಕೂಲ್”ನ ಭವ್ಯವಾದ ಒಳ ಕ್ರೀಡಾಂಗಣದಲ್ಲಿ ತನ್ನ ಚೊಚ್ಚಲ ತ್ರೋಬಾಲ್ ಟೂರ್ನಮೆಂಟ್ ನ್ನು ಯಶಸ್ವಿಯಾಗಿ ಆಯೋಜಿಸಿತು. ಪುರುಷರು, ಮಹಿಳೆಯರು ಹಾಗೂ ಮಿಶ್ರ ವಿಭಾಗಗಳಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಕತಾರ್ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಈ ಪಂದ್ಯಾಟ ಕ್ರೀಡಾಸ್ಫೂರ್ತಿ, ಕ್ರೀಡಾ ಚಾಕಚಕ್ಯತೆ , ದೈಹಿಕ ಕ್ಷಮತೆ ಮತ್ತು ವಿಶೇಷವಾಗಿ ಸಾಮೂಹಿಕ ಒಗ್ಗಟ್ಟನ್ನು ಬಿಂಬಿಸುವ ಕೇಂದ್ರ ಬಿಂದುವಾಗಿತ್ತು.
ಈ ಪಂದ್ಯಾಟವನ್ನು ಕತಾರ್ನ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ಶಿಕ್ಷಣ, ಸಂಸ್ಕೃತಿ ಮತ್ತು ವೀಸಾ) ಶ್ರೀ ಹರೀಶ್ ಪಾಂಡೆ ಅವರು ಉದ್ಘಾಟಿಸಿದರು. ಸಮಾರಂಭದಲ್ಲಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಾದ ಎಂ. ಪಲ್ಲೊಂಜಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಚಿದಾನಂದ ನಾಯಕ್, ಐ.ಎಸ್.ಸಿ ಸಲಹಾ ಸದಸ್ಯರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಐ.ಸಿ.ಸಿ, ಐ.ಸಿ.ಬಿ.ಎಫ್, ಐ.ಎಸ್.ಸಿ. ಪ್ರತಿನಿಧಿಗಳು ಹಾಗೂ ವಿವಿಧ ಸಂಘಗಳ ಅಧ್ಯಕ್ಷರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆಯಾದ ಶ್ರೀಮತಿ ಅಪರ್ಣ ಶರತ್ ಅವರು ಸಭೆಯನ್ನು ಸ್ವಾಗತಿಸಿ, ಕ್ರೀಡೆಯ ಮೂಲಕ ಸಮುದಾಯದ ಸಾಮರಸ್ಯ, ಸಹಬಾಳ್ವೆ ಮತ್ತು ಪರಸ್ಪರ ಅಭಿವೃದ್ಧಿಗೆ ತಮ್ಮ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ಆರ್.ಜೆ. ಅಷ್ಟಮಿ ನಿರೂಪಿಸಿದರು.
ಶ್ರೀಮತಿ ಪೂಜಾ ಜಿತಿನ್ ಹಾಗೂ ಶ್ರೀ ಮಂಜು ಕರಿಗಾರ್ ಕಾರ್ಯಕ್ರಮವನ್ನು ಮುಂದುವರಿಸಿದರು. ಪುಟಾಣಿಗಳು ಮತ್ತು ಪೋಷಕರು ಒಟ್ಟು ಸೇರಿ ನಡೆಸಿದ ಗುಂಪು ನೃತ್ಯ ಜನರಲ್ಲಿ ಮಿಂಚಿನ ಸಂಚಾರವನ್ನು ಮೂಡಿಸಿತು.
ಕ್ರೀಡಾ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕಲಾ, ಫ್ಯಾಷನ್ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯ ಸ್ಥಾಪಕ ಹಾಗೂ ಪೋಷಕರಾದ ಫರ್ಹಾನ್ ಅಲ್ ಶೇಖ್ ಅಲ್ ಸಯೀದ್ ಭಾಗವಹಿಸಿದ್ದರು. ಟೂರ್ನಮೆಂಟ್ ಯಶಸ್ವಿಯಾಗಿ ಆಯೋಜಿಸಿದ ಬಿಲ್ಲವಾಸ್ಇ ಕತಾರ್ ತಂಡವನ್ನು ಅಭಿನಂದಿಸಿ, ಕ್ರೀಡೆಗಳು ಶಿಸ್ತು, ಏಕತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವಕಪ್ ಕಬಡ್ಡಿ 2025 ಚಾಂಪಿಯನ್, ಕುಮಾರಿ ಧನಲಕ್ಷ್ಮೀ ಪೂಜಾರಿಯವರ ಅತ್ಯುತ್ತಮ ಸಾಧನೆಗಾಗಿ “ಬಿರುವ ಬೊಲ್ಪು” (ಬಿಲ್ಲವಾಸ್ ನ ಉದಯೋನ್ಮುಖ ತಾರೆ) ಎಂಬ ಬಿರುದು ನೀಡಿ ಎಲ್ಲರ ಸಮ್ಮುಖದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷರು ಡಾ. ಎಂ. ರವಿಶೆಟ್ಟಿ ಮತ್ತು ಕಾರ್ಯಕಾರಿ ಮಂಡಳಿಯವರು ಕರ್ನಾಟಕ ಸಂಘ ಕತಾರ್ ನ ಪರವಾಗಿ ಕುಮಾರಿ ಧನಲಕ್ಷ್ಮೀ ಪೂಜಾರಿಯವರನ್ನು ಸನ್ಮಾನಿಸಿದರು.
ಶ್ರೀ ಸಲಾಂ ಶೇಖ್ ಅವರು ತಮ್ಮ ಅನುಭವದ ಮಾತಿನಿಂದ ಜನರಿಗೆ ಕ್ರೀಡಾ ವಾರ್ತೆಯನ್ನು ತಲುಪಿಸಿ ತಮ್ಮ ಕ್ರೀಡಾ ಸ್ಫೂತಿಯನ್ನು ತುಂಬಿಸಿ ಕ್ರೀಡಾಭಿಮಾನಿಗಳ ಮನಸೂರೆಗೊಂಡರು. ಶ್ರೀ ಚಿದಾನಂದ ರೈ ಅವರು ತಮ್ಮ ಕಂಚಿನ ಕಂಠದಿಂದ ಕ್ರೀಡಾ ವಾರ್ತೆಯನ್ನು ಜನರಿಗೆ ತಲುಪಿಸುವುದರೊಂದಿಗೆ ಸಮಾರೋಪ ಕಾರ್ಯಕ್ರಮವಾದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.
ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸೀಮಾ ಪೂಜಾರಿ ಪ್ರಾಯೋಜಕರು, ತಂಡಗಳು, ಸ್ವಯಂಸೇವಕರು ಮತ್ತು ಸದಸ್ಯರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು
ಪಂದ್ಯಾಟಗಳ ಫಲಿತಾಂಶಗಳು:
ಪುರುಷರ ವಿಭಾಗ: ತುಳುಕೂಟ 1 (ಚಾಂಪಿಯನ್ಸ್); ಸ್ಟಾರ್ ಸ್ಟ್ರೈಕರ್ಸ್ (ರನ್ನರ್ಸ್-ಅಪ್)
ಮಹಿಳಾ ವಿಭಾಗ: ಎಂಸಿಸಿ (ಚಾಂಪಿಯನ್ಸ್); ತುಳುಕೂಟ 1 (ರನ್ನರ್ಸ್-ಅಪ್); ತುಳುಕೂಟ 2 (ದ್ವಿತೀಯ ರನ್ನರ್ಸ್-ಅಪ್)
ಮಿಶ್ರ ವಿಭಾಗ: ತುಳುಕೂಟ 1 (ಚಾಂಪಿಯನ್ಸ್); ಆಲ್ಫಾ ಸ್ಕ್ವಾಡ್ (ರನ್ನರ್ಸ್-ಅಪ್)

More Stories