April 4, 2026

ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ: ವಡ್ನಾಳ್ ಜಗದೀಶ್

‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ 2026’

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ಪ್ರತಿಯೊಂದು ಗ್ರಾಮ ಪಂಚಾಯತ್ ನಲ್ಲಿ ಪಾರ್ಕ್ ನಿರ್ಮಿಸಿ ಅದರಲ್ಲಿ ಅರ್ಧದಷ್ಟು ಪ್ರಾಚೀನ ವೈದ್ಯ ಪದ್ಧತಿಗೆ ಸಹಕಾರಿಯಾಗುವ ಗಿಡಗಳನ್ನು ನೆಡಲು ಚಿಂತಿಸಲಾಗಿದ್ದು ಈಗಾಗಲೇ ಅದು ಕಾರ್ಯರೂಪಕ್ಕೆ ಬಂದಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ತಿಳಿಸಿದ್ದಾರೆ‌.

ಉತ್ತರ‌ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ – 2026’ ಆರನೇ ದಿನವಾದ ಬುಧವಾರ ನಡೆದ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ್ ನಿಂದ ಒಂದೆರಡು ಎಕರೆ ಸ್ಥಳಾವಕಾಶ ಒದಗಿಸಿದರೆ ಪಾರ್ಕ್ ನಿರ್ಮಾಣಕ್ಕೆ ಸಂಪೂರ್ಣ ಅನುದಾವನ್ನು ಜೀವವೈವಿಧ್ಯ ಮಂಡಳಿಯಿಂದ ಒದಗಿಸಲಾಗುವುದು. ಬಳಿಕ ಪಾರ್ಕ್ ನ ನಿರ್ವಹಣೆಯ ಜವಾಬ್ದಾರಿ ಗ್ರಾಮ ಪಂಚಾಯತ್ ನದ್ದಾಗಿರುತ್ತದೆ ಎಂದು ಅವರು ಹೇಳಿದರು.

ಅಲೋಪತಿಯ ಕಾಲದಲ್ಲೂ ನಮ್ಮ ದೇಶದಲ್ಲಿ ಪುರಾತನ ಕಾಲದ ಪರಂಪರಾ ಚಿಕಿತ್ಸಾ ಪದ್ಧತಿ ಇನ್ನೂ ಜೀವಂತವಾಗಿದೆ‌. ಮುಂದಿನ ಪೀಳಿಗೆ ಇದನ್ನು ಮುಂದುವರಿಸಬೇಕಾದರೆ ಚಿಕಿತ್ಸೆಗೆ ಬೇಕಾದ ಗಿಡ ಮೂಲಿಕೆಗಳು ಉಳಿಯಬೇಕು. ಇದಕ್ಕಾಗಿ ಪ್ರತಿಯೊಂದು ಗ್ರಾಮದಲ್ಲಿ ಪಾರ್ಕ್ ನಿರ್ಮಿಸಿ ಅದರಲ್ಲಿ ಔಷಧಿ ಗಿಡಗಳನ್ನು ನೆಡಲಾಗುವುದು ಎಂದು ಅವರು ತಿಳಿಸಿದರು.

ಪಶ್ಚಿಮ ಘಟ್ಟ ಔಷಧಿ ಗುಣವಿರುವ ಗಿಡಗಳ ಮೂಲಸ್ಥಾನವಾಗಿದೆ. ಪಶ್ಚಿಮ ಘಟ್ಟ ಉಳಿದರೆ ಔಷಧಿ ಗಿಡಗಳನ್ನು ಉಳಿಸಬಹುದು. ಔಷಧಿ ಗಿಡಗಳು ಉಳಿದರೆ ಪ್ರಾಚೀನ ಚಿಕಿತ್ಸಾ ವಿಧಾನ ಉಳಿಯುತ್ತದೆ. ಈ ಶ್ರೇತ್ರದಿಂದ ಪಶ್ಚಿಮ ಘಟ್ಟವನ್ನು ಉಳಿಸುವ ಆಂದೋಲನದ ಜೊತೆಗೆ ಮುಂದಿನ ಪೀಳಿಗೆಗೆ ಪರಂಪರಿಕ ಚಿಕಿತ್ಸಾ ಪದ್ಧತಿಯನ್ನು ತಲುಪಿಸಲು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಡ್ನಾಳ್‌ ಜಗದೀಶ್‌ ಅವರಿಗೆ, ಬಂಗಾರಮಕ್ಕಿಯಲ್ಲಿ ಸಂಜೀವಿನಿ ಸ್ಥಾಪನೆ, ಔಷಧೀಯ ಸಸ್ಯಗಳ ನರ್ಸರಿ, ಪಶ್ಚಿಮ ಘಟ್ಟ ಜೀವವೈವಿಧ್ಯ ಸಂಶೋಧನೆ ಮತ್ತು ಡಾಕ್ಯುಮೆಂಟೇಶನ್‌ ಕೇಂದ್ರ, ಸಾಂಪ್ರದಾಯಿಕ ಜ್ಞಾನ ಸಂಪಾದನೆ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಯಿತು.

ಬಾಲ ವಿಕಾಸ ಅಕಾಡಮಿಯ ಅಧ್ಯಕ್ಷ ಶ್ರೀ ಅಡಿವೇಶ್‌ ಇಟಗಿ ಅವರಿಗೆ, ಬಂಗಾರಮಕ್ಕಿಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜನೆ, ಮಕ್ಕಳಿಗೆ ಪಶ್ಚಿಮಘಟ್ಟದ ಮಹತ್ವ ಮತ್ತು ಪರಿಸರದೊಂದಿಗೆ ಬದುಕುವ ಕಾರ್ಯಾಗಾರ, ಇಕೊ ಕ್ಲಬ್‌ ಸೇರಿದಂತೆ ವಿವಿಧ ಬೇಡಿಕೆಗಳಿರುವ ಮನವಿ ಪತ್ರವನ್ನು ಸಲ್ಲಿಸಲಾಯಿತು.

ರಾಜ್ಯ ಬಾಲ ವಿಕಾಸ ಅಕಾಡಮಿಯ ಅಧ್ಯಕ್ಷ ಅಡಿವೇಶ್‌ ಇಟಗಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ಮೂಲ ಶಾರದಾ ಪೀಠಮ್‌ ಶ್ರೀ ಕ್ಷೇತ್ರ ಕೂಡಲಿ ಮಠದ ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ, ಶ್ರೀ ಸಿದ್ಧರೂಢ ಮಿಷನ್‌ ಬೆಂಗಳೂರಿನ ಶ್ರೀ ಆರೂಢ ಭಾರತಿ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಚಾಮರಾಜನಗರ ವಿವಿ ಉಪ ಕುಲಪತಿ ಡಾ. ಗಂಗಾಧರ್, ಧಾರವಾಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರ ಗೌಡ, ಶಿರಸಿ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಡಾ. ರೂಪಾ ಪಾಟೀಲ್, ಮರಾಠಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್ ಪಾಗೋಜಿ, ಹೊನ್ನಾವರ ಡಿಎಫ್ಒ ಯೋಗೀಶ್ ಸಿ.ಕೆ., ಸಿದ್ಧ ವಿಭಾಗ ಸಿಇಎಂಆರ್ ಮುಖ್ಯಸ್ಥ ಡಾ. ಅರುಲ್ ಅರ್ವಮುದನ್, ಪ್ರಕೃತಿ ಚಿಕಿತ್ಸಾ ತಜ್ಞಾ ಡಾ. ಶಾಮರಾಜ್ ನಿಡುಗಳ, ರಾಯಚೂರು ಯೋಗಾಚಾರ್ಯ ಸುರೇಶ್ ಕುಮಾರ್, ಗೇರುಸೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ನಾಯ್ಕ, ಚಿಂತಕ ಸುಬ್ರಹ್ಮಣ್ಯ ಭಾರತಿ ಕೊಣಾಲೆ, ಪ್ರಾಚೀನ ಆರೋಗ್ಯ ಪರಂಪರಾ ಸಂರಕ್ಷಣಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ.ಸಾದಿಕ್, ಮ್ಯಾನೇಜಿಂಗ್ ಟ್ರಸ್ಟಿ ಕೆ.ಉಮೇಶ್ ಉಪಸ್ಥಿತರಿದ್ದರು.

ಮಂಜುನಾಥ್ ಸ್ವಾಗತಿಸಿದರು. ನೂರ್ ಅಹ್ಮದ್ ಪ್ರಾಸ್ತಾವಿಸಿದರು. ಶಿಕ್ಷಕಿ ಪ್ರಾರ್ಥನಾ ಗೀತೆ ಹಾಡಿ ಕಾರ್ಯಕ್ರಮ ನಿರೂಪಿಸಿದರು.

About The Author

error: Content is protected !!