ಭಟ್ಕಳ: ರಿಷಭ್ ಶೆಟ್ಟಿಯವರ ಸಂಚಲನ ಮೂಡಿಸಿದ ಕಾಂತಾರ ಚಿತ್ರದ ಅಧ್ಯಾಯ-1ರಲ್ಲಿ ಭಟ್ಕಳ ಮೂಲದ ಯುವತಿ ನಟಿಯಾಗಿ ಅವಕಾಶ ಪಡೆದಿರುವುದು ತಾಲೂಕಿನಲ್ಲಿ ಸಂತಸದ ಸಂಗತಿಯಾಗಿದೆ.

ಮೂಡಭಟ್ಕಳದ ನಿವಾಸಿ ರಮ್ಯಾ ಕೃಷ್ಣ ನಾಯ್ಕ ಅವರು ಈ ಚಿತ್ರದಲ್ಲಿ ರಾಣಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ಲಚ್ಮಯ್ಯ ನಾಯ್ಕ ಕಾಟಿಮನೆ ಹಾಗೂ ಪ್ರಭಾವತಿ ನಾಯ್ಕ ದಂಪತಿಗಳ ಪುತ್ರಿಯಾದ ಅವರು ಪ್ರಾಥಮಿಕ ಶಿಕ್ಷಣವನ್ನು ಆನಂದಾಶ್ರಮ ಹೈಸ್ಕೂಲ್ನಲ್ಲಿ ಪೂರ್ಣಗೊಳಿಸಿ, ಪಿಯು ಶಿಕ್ಷಣವನ್ನು ಉಡುಪಿಯ ಎಂ.ಜಿ.ಎ. ಕಾಲೇಜಿನಲ್ಲಿ ಪಡೆದರು. ನಂತರ ಬೆಂಗಳೂರಿನ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಬಿ.ಇ ಪದವಿ ಪಡೆದಿದ್ದಾರೆ.

2016ರಲ್ಲಿ ಬೆಂಗಳೂರಿನಲ್ಲಿ ನಡೆದ ಟಾಪ್ ಮಾದರಿ ಹಂಟ್ ಸ್ಪರ್ಧೆಯಲ್ಲಿ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ನಂತರ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ಲಿಸ್ಟ್ನಲ್ಲೂ ಸ್ಥಾನ ಪಡೆದರು.

ಈ ಹಿಂದೆ ಅವರು ಕನ್ನಡದ ದರಣಿ ಮಂಡಳ ಮಧ್ಯದೊಳಗೆ, ನೋಡಿದವರು ಏನೆಂತಾರೆ, ಲಾಸ್ಟ್ ಆರ್ಡರ್ ಹಾಗೂ ಆಶ್ವಿನಿ ಪುನೀತ್ ರಾಜಕುಮಾರ ನಿರ್ದೇಶಿಸಿದ ದ ಬೆಲ್ ಕಿರುಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದರು. ತಮಿಳು ಚಿತ್ರ ನಿರಮ್ ಮಾರುಮ್ ಉಳಗಿಲ್ನಲ್ಲಿ ನಾಯಕಿಯಾಗಿ ನಟಿಸಿರುವ ಅವರು, ಟ್ಯಾಲಿ, ಎ.ವಿ.ಟಿ. ಚಹಾ, ಅಮುಲ್ ಇಂಡಿಯಾ, ಹಿಮಾಲಯ, ಪೀಟರ್ ಇಂಗ್ಲೆAಡ್ ಮುಂತಾದ ಸಂಸ್ಥೆಗಳ ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನೇಮಾದ ಮೇಲೆ ಬಾಲ್ಯದಿಂದಲೇ ಆಸಕ್ತಿ ಹೊಂದಿದ್ದ ರಮ್ಯಾ, ಹೊಂಬಾಳೆ ಫಿಲ್ಮ್ಸ್ ನಡೆಸಿದ ಸ್ಕ್ರೀನ್ ಟೆಸ್ಟ್ನಲ್ಲಿ ಉತ್ತೀರ್ಣರಾಗಿ ಕಾಂತಾರ-ಅಧ್ಯಾಯ 1 ಮೂಲಕ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ