ಹೊನ್ನಾವರ : ಅಳ್ಳಂಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ.ಎಂ.ಪಿ.ನಾಡಕರ್ಣಿ ಸ್ಮರಣಾರ್ಥ ತಾಲೂಕಾ ಮಟ್ಟದ ಭಾಷಣ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲೋಕಮಾನ್ಯ ತಿಲಕರ ಪಾತ್ರ ಈ ವಿಷಯದ ಬಗ್ಗೆ ಹೊನ್ನಾವರ ತಾಲೂಕಿನ ವಿವಿಧ ಕಾಲೇಜುಗಳ ಹತ್ತು ಸ್ಪರ್ಧಾಳುಗಳು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಸುಬ್ರಹ್ಮಣ್ಯ ಹೆಗಡೆ ಅವರು, ಲೇಖನವನ್ನೇ ಅಸ್ತ್ರವಾಗಿಸಿ ಬ್ರಿಟಿಷರ ವಿರುದ್ಧ ಪ್ರಬಲವಾಗಿ ಹೋರಾಡಿದ ಲೋಕಮಾನ್ಯ ತಿಲಕರ ಬಹುಮುಖ ವ್ಯಕ್ತಿತ್ವದ ವೀರಚರಿತ್ರೆಯ ಕುರಿತು ಮಾತನಾಡಿ, " ಇಂದಿನ ವಿದ್ಯಾರ್ಥಿಗಳು ಭಾರತದ ಸ್ವಾತಂತ್ರ್ಯ ಚಳವಳಿಯ ಕತೆಗಳಿಂದ ಸ್ಫೂರ್ತಿ ಪಡೆದು ದೇಶಪ್ರೇಮ ಬೆಳೆಸಿಕೊಳ್ಳಬೇಕು. ತರಗತಿಯಲ್ಲಿ ಆಗದ್ದನ್ನು ಇಂತಹ ಕಾರ್ಯಕ್ರಮಗಳ ಮೂಲಕ ಕಟ್ಟಿಕೊಡಬಹುದು " ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ ಎಸ್ ಹೆಗಡೆಯವರು , ಉತ್ತರ ಕನ್ನಡ ಜಿಲ್ಲೆಯ ಉಪ್ಪಿನ ಸತ್ಯಾಗ್ರಹ, ಕಾನಗೋಡು ಜಂಗಲ್ ಸತ್ಯಾಗ್ರಹ, ಬೋಸ್ಟನ್ ಟೀ ಪಾರ್ಟಿ ನೆನಪಿಸುವ ಹೈಗುಂದದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಅಳ್ಳಂಕಿಯ ದಿ. ಎಂ.ಪಿ. ನಾಡಕರ್ಣಿಯವರ ತ್ಯಾಗ ಗುಣಗಳನ್ನು ಸ್ಮರಿಸಿ, ಈ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.
ಇಡಗುಂಜಿ ಕಾಲೇಜಿನ ಕಾವ್ಯಾ ನಾಯ್ಕ ಪ್ರಥಮ, ಎಸ್.ಡಿ.ಎಮ್ ಕಾಲೇಜಿನ ವೈಷ್ಣವಿ ನಾಯ್ಕ ದ್ವಿತೀಯ, ಕಾಂತಿ ಹೆಗಡೆ ತೃತೀಯ ಸ್ಥಾನ ಪಡೆದರು. ಮಾಜಿ ಸೈನಿಕ ವಿನಾಯಕ ನಾಯ್ಕ ಹಾಗೂ ಅಂಬೇಡ್ಕರ್ ವಸತಿ ಶಾಲಾ ಪ್ರಾಚಾರ್ಯ ಶ್ರೀನಿವಾಸ ನಾಯ್ಕ , ಚಂದ್ರಶೇಖರ ಮಡಿವಾಳ ಮುಂತಾದವರು ಉಪಸ್ಥಿತರಿದ್ದರು.
ಸ್ವಾತಿ ಮುಕ್ರಿ ಸ್ವಾಗತಿಸಿದರು. ಕಿಶೋರ್ ನಾಯ್ಕ ವಂದಿಸಿದರು ಮಹೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ