March 2, 2026

ಸಂಸ್ಕೃತಾರಾಧಕ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗೌರವ


ಕುಮಟಾ : ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅನುಪಮವಾದ ಸೇವೆಯನ್ನು ಸಲ್ಲಿಸಿ , ಡಯಟಿಗೆ ವರ್ಗಾವಣೆಗೊಂಡಿರುವ, ತಾಲ್ಲೂಕಾ ಪಂಚಾಯತದ ಕಾರ್ಯ ನಿರ್ವಹಣಾಧಿಕಾರಿಗಳ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿರುವ ರಾಜೇಂದ್ರ ಲಕ್ಷ್ಮೀನಾರಾಯಣ ಭಟ್ಟರವರನ್ನು ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕುಮಟಾ ಡಯಟಿನಿಂದ ಕರ್ನಾಟಕ ಸಂಸ್ಕೃತ ಪರಿಷತ್ ಹಾಗೂ ತುಮಕೂರಿನ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಸಹಯೋಗದಿಂದ ಆಯೋಜಿಸಲಾದ ಜಿಲ್ಲಾಮಟ್ಟದ ಇಲಾಖಾ ಸಂಸ್ಕೃತ ಕಾರ್ಯಾಗಾರದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಗೌರವಿಸಲಾಯಿತು.


ಬರ್ಗಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು ಅಭಿನಂದನಾ ನುಡಿಯನ್ನಾಡುತ್ತಾ, ಆರ್.ಎಲ್. ಭಟ್ ರವರ ಸಂಸ್ಕೃತದ ಕುರಿತಾದ ಅರಿವು – ಅಭಿಮಾನಗಳೆರಡೂ ಶ್ಲಾಘ್ಯವಾಗಿದ್ದು, ಬರ್ಗಿ ಪ್ರೌಢ ಶಾಲೆಯಲ್ಲಿ ಹಾಗೂ ತಾಲ್ಲೂಕಿನಲ್ಲಿಯ ಸಂಸ್ಕೃತ ಮತ್ತು ಸಂಸ್ಕೃತಿ ಪರವಾದ ರಚನಾತ್ಮಕ ಚಟುವಟಿಕೆಗಳಲ್ಲೆಲ್ಲಾ ಜೊತೆಯಾಗಿ ಬೆಂಬಲವನ್ನು ನೀಡುತ್ತಲೇ ಬಂದಿರುವ ಅವರನ್ನು, ಬರ್ಗಿಯಲ್ಲಿ ಆಯೋಜಿಸಲ್ಪಟ್ಟ ಸಂಸ್ಕೃತ ಕಾರ್ಯಾಗಾರದಲ್ಲಿ ಸಂಘಟಕರು ನೈತಿಕ ಬದ್ಧತೆಯಿಂದಲೇ ಸಮ್ಮಾನಿಸಿದ್ದಾಗಿದೆ ಎಂದರು.


ಈ ಸಂದರ್ಭದಲ್ಲಿ ಡಯಟ್ ಪ್ರಾಚಾರ್ಯರಾದ ಶಾಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿಯ ಉಪ ನಿರ್ದೇಶಕರಾಗಿರುವ ಎನ್. ಆರ್. ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯ ನಾಯ್ಕ, ಸ್ಥಳೀಯರಾದ ವಾಮನ ಪಟಗಾರ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ ವಿದ್ಯಾಭಿಮಾನಿಗಳಾದ ನಾರಾಯಣ ನಾಗು ನಾಯಕ್ ಮೊದಲಾದವರಿದ್ದರು.

About The Author

error: Content is protected !!