March 4, 2026

ಭಟ್ಕಳದಲ್ಲಿ ನಾಮಧಾರಿ ಸಮಾಜದ ಧಾರ್ಮಿಕ ಕಾರ್ಯಕ್ರಮಕ್ಕೆ ವೈಭವ

ಭಟ್ಕಳ : ಭಟ್ಕಳ ನಾಮಧಾರಿ ಸಮಾಜದವರು ಆಧ್ಯಾತ್ಮಿಕವಾಗಿ, ಸಂಸ್ಕಾರವಂತರಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಘಟಿತರಾಗುತ್ತಿದ್ದಾರೆ. ಇದು ಹೀಗೆ ಮುಂದುವರೆಯಲಿ ಸಮಾಜ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಧರ್ಮಸ್ಥಳ ಶ್ರೀ ರಾಮ ಕ್ಷೇತ್ರದ ಮಠಾಧೀಶ ನಾಮಧಾರಿ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆರ್ಶೀವದಿಸಿದರು.


ಅವರು ಪಟ್ಟಣದ ಆಸರಕೇರಿ ನಿಚ್ಛಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ಥಾನದಲ್ಲಿ ನಡದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಭಕ್ತರಿಗೆ ಆರ್ಶೀವಚನ ನೀಡಿದರು. ಭಗವಂತನ ಕಲ್ಯಾಣೋತ್ಸವವು ಮನುಷ್ಯನ ಆತ್ಮಕಲ್ಯಾಣ ಹೇಗೆ ಮಾಡಿಕೊಳ್ಳಬೇಕು ಎಂದು ಕಲಿಸುತ್ತದೆ. ಇಂತಹ ಧಾರ್ಮಿಕ ಸತ್ಸಂಗಗಳು ಆಗಾಗ ನಡೆಯುವುದರಿಂದ ಮನುಷ್ಯನು ಅಂಧಕಾರರಿಂದ ಬೆಳಕಿನ ಕಡೆಗಡೆಗೆ ಸಾಗಲು ದಾರಿದೀಪವಾಗುತ್ತದೆ ಎಂದರು.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್‌ ವೈದ್ಯ ಮಾತನಾಡಿ ತನ್ನ 21 ವರ್ಷದ ರಾಜಕೀಯ ಜೀವನದಲ್ಲಿ ಕ್ಷೇತ್ರದ ಅತೀ ದೊಡ್ಡ ನಾಮಧಾರಿ ಸಮಾಜದವರು ಇನ್ನೂ ತನಕ ಸಮಾಜಕ್ಕಾಗಿ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ನಾಮಧಾರಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ, ಗುರುಮಠಕ್ಕೆ ಬರುವ ಯಾತ್ರಿಗಳು ತಂಗಲು ಯಾತ್ರಿ ನಿವಾಸ ಹಾಗೂ ಪುರವರ್ಗದಲ್ಲಿ ಸಮಾಜದ ಸಭಾಭವನ ನಿರ್ಮಿಸಲು 5 ಕೋಟಿ ವೆಚ್ದ ನೀಲನಕ್ಷೆ ರೂಪಿಸಿ ಮನವಿ ನೀಡಿದ್ದಾರೆ. ಸರ್ಕಾರದಿಂದ ಸಾಧ್ಯವಾದರೆ ಅನುದಾನ ಇಲ್ಲವಾದಲ್ಲಿ ವೈಯಕ್ತಿವಾಗಿಯೂ ಧನಸಹಾಯ ನೀಡಲು ಸಿದ್ದನಿದ್ದೇನೆ. ಮುಂಬರುವ ವರ್ಷದಲ್ಲಿ ಈ ಮೂರು ಕಟ್ಟಡಗಳು ಪೂರ್ಣಗೊಂಡು ಉದ್ಘಾಟನೆ ಸಿದ್ದವಾಗುವಂತೆ ಆಡಳಿತ ಕಮೀಟಿಯವರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.


ಗುರುಮಠ ಅಧ್ಯಕ್ಷ ಅರುಣ ನಾಯ್ಕ ಪ್ರಾಸ್ತಾವಿಕ ಮಾತನಾಡಿ ನಂತರ ಸಚಿವರಿಗೆ ಮನವಿ ಅರ್ಪಿಸಿದರು. ಭಟ್ಕಳ ನಾಮಧಾರಿ ಸಮಾಜದ ವತಿಯಿಂದ ಇದೇ ಸಂದರ್ಭದಲಿ ಸಚಿವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಡಿ.ಎಲ್.ನಾಯ್ಕಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು. ಕೊನೆಯಲಿ ಉಪಾಧ್ಯಕ್ಷ ಎಂ.ಕೆ ನಾಯ್ಕ ವಂದಿಸಿದರು.

About The Author

error: Content is protected !!