ಶಿಸ್ತು ಮತ್ತು ಸೌಂದರ್ಯದ ಸಂಗಮವಾಗಿ ಮೂಡಿಬಂದ ಭರತನಾಟ್ಯ ರಂಗಪ್ರವೇಶ
ಭಟ್ಕಳ: ನಗರದ ಝೇಂಕಾರ್ ಆರ್ಟ್ ಅಸೋಸಿಯೇಷನ್ನ ವಿದ್ಯಾರ್ಥಿನಿ ನೃತ್ಯ ವಿದುಷಿ ಧನಲಕ್ಷ್ಮೀ ಮೊಗೇರ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಶನಿವಾರ ಸಂಜೆ ನಗರದ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ಹುಬ್ಬಳ್ಳಿಯ ನೃತ್ಯ ವಿದ್ವಾನ್ ಸುಜಯ ಶ್ಯಾನಭಾಗ್ ಅವರು ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನೃತ್ಯವು ಮಕ್ಕಳಲ್ಲಿ ಶಿಸ್ತು, ಸಮಯಪ್ರಜ್ಞೆ ಹಾಗೂ ಮಾನಸಿಕ–ದೈಹಿಕ ಸಾಮರ್ಥ್ಯವನ್ನು ಬೆಳೆಸುವ ಅತ್ಯಂತ ಮಹತ್ವದ ಕಲೆ ಎಂದು ಹೇಳಿದರು. ಪರೀಕ್ಷೆಗಳ ಒತ್ತಡದ ನಡುವೆಯೂ ವಿದ್ಯಾಭ್ಯಾಸಕ್ಕೆ ಧಕ್ಕೆಯಾಗದಂತೆ ನೃತ್ಯಾಭ್ಯಾಸವನ್ನು ಸಮತೋಲನದಿಂದ ಮುಂದುವರಿಸಿಕೊಂಡು ಶಾಸ್ತ್ರಾಧಾರಿತವಾಗಿ ಪರಿಪೂರ್ಣತೆಯನ್ನು ಸಾಧಿಸಿರುವ ಧನಲಕ್ಷ್ಮೀ ಅವರ ಪ್ರಯತ್ನ ಶ್ಲಾಘನೀಯ ಎಂದರು. ಮಕ್ಕಳನ್ನು ರಂಗಪ್ರವೇಶದ ಹಂತಕ್ಕೆ ತಲುಪಿಸುವುದು ಪಾಲಕರಿಗೆ ಪುಣ್ಯದ ಕಾರ್ಯವಾಗಿದ್ದು, ನೃತ್ಯವು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅಮೂಲ್ಯ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ನಾಲ್ಕನೇ ವಯಸ್ಸಿನಲ್ಲೇ ಭರತನಾಟ್ಯ ಕಲಿಸಲು ಪ್ರೇರೇಪಿಸಿದ ಪಾಲಕರ ಸಹಕಾರ ಹಾಗೂ ಇಪ್ಪತ್ತು ವರ್ಷಗಳ ಪರಿಶ್ರಮದಿಂದ ಧನಲಕ್ಷ್ಮೀ ಸಾಧನೆ ಮಾಡಿದಾಳೆ ಎಂದು ಶ್ಲಾಘಿಸಿದರು. ಝೇಂಕಾರ್ ಸಂಸ್ಥೆಯ ನಿರಂತರ ಶ್ರಮ ಮತ್ತು ಜನರ ಸಹಕಾರದಿಂದ ಸಂಸ್ಥೆ ಉತ್ತಮ ಮಟ್ಟಕ್ಕೆ ಬೆಳೆದಿದ್ದು, ಇದರ ಫಲವಾಗಿ ವಿದ್ಯಾರ್ಥಿಗಳು ಕಲಾಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು. ಕಲೆಯ ಆಸಕ್ತಿಯ ಜೊತೆಗೆ ವಿದ್ಯಾಭ್ಯಾಸದಲ್ಲೂ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಪಡೆದು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರ್ಯಾಂಕ್ ಗಳಿಸಿರುವ ಧನಲಕ್ಷ್ಮೀ ಸಮಾಜಕ್ಕೆ ಮಾದರಿ ಎಂದರು. ಕಲೆ ಮತ್ತು ಶಿಕ್ಷಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಬೀನಾವೈದ್ಯ ಶೈಕ್ಷಣಿಕ ಸಂಸ್ಥೆಯ ಆಡಳಿತ ನಿರ್ದೇಶಕಿ ಪುಷ್ಪಲತಾ ಮಂಕಾಳ ವೈದ್ಯ ಮಾತನಾಡಿ, ನೃತ್ಯಕಲೆ ತಪಸ್ಸಿನಂತದ್ದು; ಅದನ್ನು ಪ್ರೀತಿಯಿಂದಲೂ ಕರಾರುವಕ್ಕೆಯೂ ಬೋಧಿಸುವ ನೃತ್ಯಗುರು ವಿದುಷಿ ನಯನ ಪ್ರಸನ್ನ ಅವರ ಸೇವೆ ಶ್ಲಾಘನೀಯ ಎಂದರು. ವಿಧುಷಿ ಪಟ್ಟಕ್ಕೇರಿರುವುದು ಧನಲಕ್ಷ್ಮೀ ಅವರ ಸಾಧನೆಗೆ ಸಂದ ಗೌರವವಾಗಿದೆ ಎಂದು ಹೇಳಿದರು.
ವೇ.ಮೂ. ವಿನೋದ ಭಟ್ಟ ಅವರು ನಟರಾಜ ಪೂಜೆ ಹಾಗೂ ಗೆಜ್ಜೆಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವರು ಹಾಗೂ ಅವರ ಕುಟುಂಬದವರಿಗೆ ಸನ್ಮಾನಿಸಲಾಯಿತು. ರಂಗಪ್ರವೇಶ ಮಾಡಿದ ಕುಮಾರಿ ವಿದುಷಿ ಧನಲಕ್ಷ್ಮೀ ಮೊಗೇರ ಹಾಗೂ ವಾದ್ಯಗೋಷ್ಠಿ ಕಲಾವಿದರನ್ನು ಧನಲಕ್ಷ್ಮೀ ಅವರ ಪಾಲಕರಾದ ರಾಮಚಂದ್ರ–ಶಾರದಾ ದಂಪತಿ ಗೌರವಿಸಿದರು. ಗುರುವಂದನಾ ಕಾರ್ಯಕ್ರಮದಲ್ಲಿ ನೃತ್ಯಗುರು ವಿದುಷಿ ನಯನ ಪ್ರಸನ್ನ ಮತ್ತು ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಅವರನ್ನು ಸನ್ಮಾನಿಸಲಾಯಿತು. ರಾಜಾರಾಮ್ ಪ್ರಭು, ಬೀನಾ ವೈದ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಂತರ ನೃತ್ಯಗುರು ವಿದುಷಿ ನಯನ ಪ್ರಸನ್ನ ಅವರಿಂದ ಗೆಜ್ಜೆ ಕಟ್ಟಿಸಿಕೊಂಡು ಪುಷ್ಪಾಂಜಲಿಯೊಂದಿಗೆ ರಂಗಪ್ರವೇಶ ಮಾಡಿದ ಧನಲಕ್ಷ್ಮೀ, ಒಂದಾದ ಮೇಲೊಂದು ವಿವಿಧ ನೃತ್ಯ ಪ್ರಾಕಾರಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿದರು. ಕಾರ್ಯಕ್ರಮವನ್ನು ನೃತ್ಯ ವಿದುಷಿ ಪಲ್ಲವಿ ಗಾಯತ್ರಿ ನಿರೂಪಿಸಿ ವಂದನಾರ್ಪಣೆ ಮಾಡಿದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ