March 1, 2026

ಭಟ್ಕಳದಲ್ಲಿ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ: ಅಮನ್ ಶೇಖ್‌ಗೆ ‘ಮಿಸ್ಟರ್ ಭಟ್ಕಳ 2026’ ಪಟ್ಟ

ಭಟ್ಕಳ: ಯುವಶಕ್ತಿಯ ಬಲ, ಶಿಸ್ತಿನ ಪ್ರದರ್ಶನ ಮತ್ತು ಕಠಿಣ ಪರಿಶ್ರಮದ ಪ್ರತಿಬಿಂಬವಾಗಿ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ ಇಲ್ಲಿನ ಆನಂದಾಶ್ರಮ ಕಾನ್ವೆಂಟ್ ಆವರಣದಲ್ಲಿ ಜರುಗಿತು. ರಾಜ್ಯದ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡು ಕ್ರೀಡಾಭಿಮಾನಿಗಳ ಮೆಚ್ಚುಗೆ ಪಡೆದರು.


ಭಟ್ಕಳ ತಾಲೂಕು ಬಾಡಿ ಬಿಲ್ಡಿಂಗ್ ಅಸೋಶಿಯೇಶನ್, ಉತ್ತರಕನ್ನಡ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಶಿಯೇಶನ್, ಕರ್ನಾಟಕ ಬಾಡಿ ಬಿಲ್ಡಿಂಗ್ ಅಸೋಶಿಯೇಶನ್ ಹಾಗೂ ಭಟ್ಕಳ ಬ್ರದರ್ಸ್ ತಂಡ ಆಶ್ರಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕಾರವಾರದ ಅಮನ್ ಶೇಖ್ ‘ಮಿಸ್ಟರ್ ಭಟ್ಕಳ 2026’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.


ಜಿಳೆಗಾವಿಯ ಪ್ರಶಾಂತ್ ರನ್ನರ್‌ಅಪ್ ಸ್ಥಾನ ಪಡೆದರೆ, ಉಡುಪಿ ಜಿಲ್ಲೆಯ ಬೈಂದೂರಿನ ಬಾಬು ಪೂಜಾರಿ ‘ಬೆಸ್ಟ್ ಪೋಸರ್’ ಪ್ರಶಸ್ತಿಗೆ ಭಾಜನರಾದರು. ಒಟ್ಟು 8 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಮೈಕಟ್ಟು, ವೇದಿಕೆಯ ಮೇಲಿನ ಆತ್ಮವಿಶ್ವಾಸ ಮತ್ತು ನಿಖರ ಪೋಸಿಂಗ್ ಗಮನ ಸೆಳೆಯಿತು.
ಹೈಕೋರ್ಟ್ ಹಿರಿಯ ನ್ಯಾಯವಾದಿ ನಾಗೇಂದ್ರ ನಾಯ್ಕ ಸ್ಪರ್ಧೆಯನ್ನು ಉದ್ಘಾಟಿಸಿದರು. ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅರುಣ ನಾಯ್ಕ, ಜಾಲಿ ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಮಂಜಪ್ಪ ನಾಯ್ಕ, ಅಸೋಶಿಯೇಶನ್ ಅಧ್ಯಕ್ಷ ಅಝೀಜುರೆಹ್ಮಾನ್, ಗೌರವಾಧ್ಯಕ್ಷ ನಸೀರ್ ಕಾಶೀಮ್ ಜಿ., ಚೆಟ್ಟಿನಾಡ್ ಸಿಮೆಂಟ್ಸ್ ಪ್ರಾದೇಶಿಕ ಮುಖ್ಯಸ್ಥ ಸಂಜೀವಕುಮಾರ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶೈಲೇಂದ್ರ ಗೌಡ, ಅಂಬೆ ಇಲೆಕ್ಟ್ರಿಕಲ್ಸ್‌ನ ನೇನ್‌ಸಿಂಗ್, ಶ್ರೀರಾಮ್ ಫೈನಾನ್ಸ್ ವ್ಯವಸ್ಥಾಪಕ ಜೀವನ ನಾಯ್ಕ, ಕುಲ್‌ಸುಮ್ ಜ್ಯುವೆಲರ್ ಮಾಲೀಕ ಶೈಬಾಜ್ ದಾವ್ವಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಅಸೋಶಿಯೇಶನ್ ಪ್ರಧಾನ ಕಾರ್ಯದರ್ಶಿ ಹಾಗೂ ಭಟ್ಕಳ ಫ್ರೆಂಡ್ಸ್ ಜಿಮ್ ಮಾಲೀಕ ವೆಂಕಟೇಶ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ ಭಟ್ಕಳದ ಸಂಘಟನೆಗಳ ಕಾರ್ಯಕ್ಕೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

About The Author

error: Content is protected !!