ಭಟ್ಕಳ: ತಲಾಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ (ಪುರವರ್ಗ) ಸಂಯುಕ್ತ ಆಶ್ರಯದಲ್ಲಿ ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-2025-26 ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗಾರಿಸಲಾಗಿತ್ತು. ವಿದ್ಯಾರ್ಥಿಗಳು ಛದ್ಮವೇಷ, ಕ್ಲೇ ಮಾಡೆಲಿಂಗ್, ಆಶುಭಾಷಣ, ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವುದು, ಚಿತ್ರಕಲೆ, ಬಣ್ಣ ಹಚ್ಚುವಿಕೆ, ಅಭಿನಯ ಗೀತೆ, ಭಕ್ತಿಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ತಮಗಿರುವ ಕೌಶಲ್ಯ ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಟ್ಟಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಜಿನಿ ನಾಯ್ಕ, ಮಕ್ಕಳಲ್ಲಿರುವ ಗುಪ್ತ ಪ್ರತಿಭೆಗಳನ್ನು ಅರಳಿಸಲು ಪ್ರತಿಭಾ ಕಾರಂಜಿ ಮಹತ್ತರ ವೇದಿಕೆ ಎಂದು ಹೇಳಿದರು. ಬಾಲ್ಯದಲ್ಲೇ ಪ್ರತಿಭೆ ಗುರುತಿಸಿದರೆ ಭವಿಷ್ಯದಲ್ಲಿ ಉತ್ತಮ ಕಲಾವಿದರು ಬೆಳೆದು ಬರುತ್ತಾರೆ ಎಂದರು.
ಯಲ್ವಡಿಕವೂರ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಗೊಂಡ ಮಾತನಾಡಿ, ಮಕ್ಕಳ ಪ್ರತಿಭೆಗಳು ಕಾರಂಜಿಯ ಬಾವಿಯಿಂದ ಹೊರಚಿಮ್ಮುವ ನೀರಿನಂತೆ ನಿರಂತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಸ್ಪರ್ಧೆಗಳು ಮಕ್ಕಳ ಸಾಮರ್ಥ್ಯ ವಿಕಸನಕ್ಕೆ ಉತ್ತೇಜನ ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗೇಶ ಹೆಬ್ಬಾರ, ಉಪಾಧ್ಯಕ್ಷೆ ಲಕ್ಷ್ಮೀ ಗೊಂಡ, ಸದಸ್ಯರಾದ ದೇವಯ್ಯ ನಾಯ್ಕ, ಗಣಪತಿ ನಾಯ್ಕ, ಜಯಶ್ರೀ ನಾಯ್ಕ, ಶೇಷಗಿರಿ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಪೊಣಿಮಾ ಮೊಗೇರ್, ಕಟ್ಟೇವಿರ ಯುವಕ ಸಂಘ ಅಧ್ಯಕ್ಷ ಜಗದೀಶ್ ನಾಯ್ಕ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜು ಸಂಕಪ್ಪ ನಾಯ್ಕ, ಮೋಹನ ಗೊಂಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬಿಆರ್ಸಿ ಜಯಶ್ರೀ ಆಚಾರ್ಯ ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಬೇಬಿ ದೇವಡಿಗ ವಂದನೆ ಸಲ್ಲಿಸಿದರು. ಶಿಕ್ಷಕ ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ