December 23, 2025

ಡಿಜಿಟಲ್ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ -ಸಾಹಿತಿ ಶ್ರೀಧರ್ ಶೇಟ್ ಕಿವಿಮಾತು

ಭಟ್ಕಳ: ಇಂದಿನ ಜಗತ್ತು ಡಿಜಿಟಲ್ ಜಗತ್ತಾಗಿದ್ದು, ಒಂದು ಕಡೆ ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೆ, ಅಷ್ಟೇ ವೇಗದಲ್ಲಿ ವಂಚಕರು ಮೋಸ ಮಾಡುವ ವಿಧಾನಗಳನ್ನು ಕರಗತ ಮಾಡಿಕೊಂಡಿದ್ದು ಬಹಳ ಎಚ್ಚರಿಕೆಯಿಂದ ಡಿಜಿಟಲ್ ಸಾಧನಗಳನ್ನು ಬಳಸಬೇಕಾಗಿದೆ ಎಂದು ಸಾಹಿತಿ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಶಿರಾಲಿ ಗ್ರಾಮದ ಚಿತ್ರಾಪುರದಲ್ಲಿ ಮುರುಡೇಶ್ವರದ ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನವರು ಸಂಘಟಿಸಿದ್ದ ಎನ್‌ಎಸ್‌ಎಸ್ ವಿಶೇಷ ಶಿಬಿರದಲ್ಲಿ ‘ಡಿಜಿಟಲ್ ಭದ್ರತೆ ಮತ್ತು ಜಾಗೃತಿ’ ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು. ಇಂದು ಜಗತ್ತು ಮೊಬೈಲ್ ಮಯವಾಗಿದೆ. ಕಂಪ್ಯೂಟರ್, ಟ್ಯಾಬ್ ಇತ್ಯಾದಿ ಇಂಟರ್ನೆಟ್ಟಿಗೆ ಸಂಪರ್ಕ ಹೊಂದಿರುವ ಸಾಧನೆಗಳು ಎಷ್ಟು ಉಪಕಾರಿಯೋ, ಅಷ್ಟೇ ಅಪಾಯಕಾರಿಯೂ ಆಗಿವೆ. ಪ್ರತಿದಿನ ಲಕ್ಷಾಂತರ ಜನರ ಕೋಟ್ಯಾಂತರ ರೂಪಾಯಿಗಳನ್ನು ವಂಚಕರು ಕೊಳ್ಳೆ ಹೊಡೆಯುತ್ತಿದ್ದಾರೆ. ಸೂಕ್ತ ಭದ್ರತೆಯನ್ನು ಕಾಪಾಡಿಕೊಂಡು, ಯಾವುದೇ ಅಪರಿಚಿತ ಕರೆಗೆ ಬಲಿಯಾಗದೆ ವಿವೇಕ ಮತ್ತು ಪ್ರಜ್ಞೆಯಿಂದ ಬಳಸಬೇಕು. ಯಾರಿಗೂ ಊಹಿಸಲು ಸಾಧ್ಯವಾಗದ ಪಾಸ್ವರ್ಡ್ ಮತ್ತು ದ್ವಿ ಘಟಕ ದೃಢೀಕರಣ ಅಳವಡಿಸಿಕೊಳ್ಳಬೇಕು ಎಂದು ಹೇಳಿ ಡಿಜಿಟಲ್ ಸುರಕ್ಷತೆಯ ಬಗ್ಗೆ ಉದಾಹರಣೆಗಳೊಂದಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಉಪನ್ಯಾಸಕ ಅಶ್ವತ್ ಉಪ್ಪೂರು ಮಾತನಾಡಿ ಯುವಕರಲ್ಲಿ ಏಕಾಗ್ರತೆ ಮತ್ತು ತಾಳ್ಮೆ ಇದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯೆ ಡಾ. ಶಾಂತಶ್ರೀ ಹರಿದಾಸ ವಹಿಸಿದ್ದರು. ಅವರು ಮಾತನಾಡಿ ದೇಶವನ್ನು ಕಟ್ಟುವ ಶಕ್ತಿ ಯುವಕರಲ್ಲಿದ್ದು, ಯುವಕರು ಎನ್‌ಎಸ್‌ಎಸ್ ನಂತಹ ವಿಧಾಯಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿ ಶಿಬಿರದ ಯಶಸ್ಸಿಗೆ ಕಾರಣಕರ್ತರಾದವರಿಗೆ ಕೃತಜ್ಞತೆ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯಿಂಧ ಪುರಸ್ಕೃತರಾಗಿರುವ ಶ್ರೀಧರ್ ಶೇಟ್ ಶಿರಾಲಿ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಗಣಪತಿ ಕಾಯ್ಕಿಣಿ, ಮಮತಾ ಮರಾಠಿ, ಕಾಲೇಜಿನ ಉಪನ್ಯಾಸಕರು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.

About The Author

error: Content is protected !!