March 2, 2026

ಕಾಡು ಹಂದಿ ಅಡ್ಡ ಬಂದು ಆಟೋ ಪಲ್ಟಿ, ಚಾಲಕನಿಗೆ ಗಂಭೀರ ಗಾಯ

ಭಟ್ಕಳ ತಾಲೂಕಿನ ರಾಜ್ಯ ಹೆದ್ದಾರಿ–50ರಲ್ಲಿ ಅಜಾಗರೂಕ ಚಾಲನೆಯಿಂದ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ವರದಿಯಾಗಿದೆ. ದಿನದ ಬಾಡಿಗೆಯನ್ನೇ ನಂಬಿ ಜೀವನ ಸಾಗಿಸುವ ಆಟೋ ಚಾಲಕನ ಬದುಕಿಗೆ ಈ ಅಪಘಾತ ದೊಡ್ಡ ಹೊಡೆತ ನೀಡಿದೆ.


ಕೋಟಖಂಡ ಮಾರುಕೇರಿ ನಿವಾಸಿ ಹಾಗೂ ತರಕಾರಿ ವ್ಯಾಪಾರಿಯಾಗಿರುವ ಶ್ರೀಮತಿ ಪದ್ಮಾವತಿ ನೀಡಿದ ದೂರಿನ ಪ್ರಕಾರ, ಭಟ್ಕಳ–ಸಾಗರ ರಸ್ತೆಯ ಪುರಸಭೆ ಕಸ ಹಾಕುವ ಸ್ಥಳದ ಬಳಿ ಭಟ್ಕಳದಿಂದ ಮಾರುಕೇರಿ ಕೋಟಖಂಡದ ಕಡೆಗೆ ಸಾಗುತ್ತಿದ್ದ ಆಟೋಗೆ ಏಕಾಏಕಿ ಕಾಡು ಹಂದಿ ಅಡ್ಡ ಬಂದಿದ್ದು, ಚಾಲಕ ತುರ್ತು ಬ್ರೇಕ್ ಹಾಕಿದ ಪರಿಣಾಮ ಆಟೋ ಪಲ್ಟಿಯಾಗಿದೆ.


ಅಪಘಾತದಲ್ಲಿ ಆಟೋ ಚಾಲಕ ಶಶಿಕಾಂತ ತಂದೆ ರಾಮಚಂದ್ರ ಶೇಟ,ಆಸರಕೇರಿ ನಿವಾಸಿ ಅವರಿಗೆ ತಲೆಬಾಗ ಹಾಗೂ ಎರಡೂ ಕಾಲುಗಳಲ್ಲಿ ಭಾರೀ ಮುರಿತ ಉಂಟಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಆಟೋದಲ್ಲಿದ್ದ ಪ್ರಯಾಣಿಕೆಯಾಗಿದ್ದ ಪದ್ಮಾವತಿ ಅವರಿಗೆ ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕುಟುಂಬದ ಹೊಟ್ಟೆಪಾಡಿಗಾಗಿ ದಿನನಿತ್ಯ ದುಡಿಯುತ್ತಿದ್ದ ಆಟೋ ಚಾಲಕನಿಗೆ ಈ ಅಪಘಾತದಿಂದ ಜೀವನೋಪಾಯಕ್ಕೂ ಸಂಕಷ್ಟ ಎದುರಾಗಿದೆ. ಈ ಸಂಬಂಧ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!