ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
ಭಟ್ಕಳ: ಇಲ್ಲಿನ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ಸುಪ್ರಸಿದ್ಧ ಶೇಡಬರಿ ಜಟಕ ಮಹಾಸತಿ ದೇವಿ ಜಾತ್ರೆಗೆ ದೇವಸ್ಥಾನದ ಸುತ್ತಮುತ್ತಲಿನ ಗಡಿ ದೇವರಿಗೆ ಪೂಜೆ ಸಲ್ಲಿಸಿ ಗುರುವಾರ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.
‘ಶೇಡಿ’ ಎಂದರೆ ಮಣ್ಣಿನಿಂದ ಕೂಡಿರುವುದು, ‘ಬರಿ’ ಎಂದರೆ ಇಳಿಜಾರು ಪ್ರದೇಶ. ಈ ಭೌಗೋಳಿಕ ಹಿನ್ನೆಲೆಯಲ್ಲೇ ಪ್ರತಿಷ್ಠಾಪಿತ ದೇವಿಯನ್ನು ಶೇಡಬರಿ ಮಹಾಸತಿ ದೇವಿ ಎಂದು ಕರೆಯಲಾಗುತ್ತದೆ. ಜಾತ್ರೆಯ ಆರಂಭದ ಅಂಗವಾಗಿ ಮುಂಜಾನೆಯಿಂದಲೇ ಸಾವಿರಾರು ಭಕ್ತಾಧಿಗಳು ಜಟಕ ಮಹಾಸತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಕ್ಕಳಾಗದವರು ಹಾಗೂ ಸಂಕಷ್ಟ ನಿವಾರಣೆಗೆ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ನಂತರ ಶೇಡಬರಿ ಮರ ಏರಿ ಒಂದು ಸುತ್ತು ತಿರುಗಿಸಿ ಹರಕೆಯನ್ನು ಒಪ್ಪಿಸುವುದು ಇಲ್ಲಿನ ವಿಶಿಷ್ಟ ಆಚರಣೆ. ಬೆಳಗ್ಗೆಯಿಂದಲೇ ಭಕ್ತರು ತಮ್ಮ ಸೇವೆಗಳನ್ನು ಸಮರ್ಪಿಸಿದರು.
ಸುಮಾರು 100 ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಈ ದೇವಸ್ಥಾನದ ಜಾತ್ರೆಗೆ ಅನೇಕ ವೈಶಿಷ್ಟ್ಯಗಳಿವೆ. ಜಾತ್ರೆಗೆ ಏಳು ದಿನಗಳ ಮುನ್ನವೇ ದೇವಸ್ಥಾನದ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಗಡಿ ದೇವರಿಗೆ ‘ಚರು’ ಹಾಕಿ ಎಲ್ಲ ದೇವರನ್ನು ಸಂತುಷ್ಟಗೊಳಿಸಿ ಜಾತ್ರೆಯನ್ನು ಆರಂಭಿಸುವುದು ಪರಂಪರೆ. ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರ ಮಹಾಪೂರವೇ ಆಗಮಿಸಿ ಸರತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಜಾತ್ರಾ ಮಹೋತ್ಸವವನ್ನು ಶೇಡಬರಿ ಜಟಕ ಮಹಾಸತಿ ದೇವಿ ದೇವಸ್ಥಾನದ ಆಡಳಿತ ಮಂಡಳಿಯ ನೇತೃತ್ವದಲ್ಲಿ ಹಿರಿಯ ಟ್ರಸ್ಟಿಗಳು ಹಾಗೂ ಸಲಹಾ ಮಂಡಳಿಯ ನೂರಾರು ಕಾರ್ಯಕರ್ತರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಶುಕ್ರವಾರವೂ ಜಾತ್ರೆ ಮುಂದುವರಿಯಲಿದ್ದು, ಈ ಸಂದರ್ಭ ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಎಫ್.ಕೆ. ಮೊಗೇರ, ಪರಮೇಶ್ವರ ದೇವಡಿಗ, ಶ್ರೀಧರ ನಾಯ್ಕ, ಸುಬ್ರಾಯ ದೇವಡಿಗ, ಶಿವರಾಮ ದೇವಡಿಗ, ಈರಪ್ಪ ನಾಯ್ಕ, ನಾಗರಾಜ ನಾಯ್ಕ ಸೇರಿದಂತೆ ಇತರ ಸದಸ್ಯರು ಜಾತ್ರಾ ಸ್ಥಳದಲ್ಲಿದ್ದು, ಭಕ್ತರಿಗೆ ಶ್ರೀ ದೇವರ ದರ್ಶನಕ್ಕೆ ಸಹಕಾರ ನೀಡಿದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ