April 16, 2026

ಭಕ್ತಿ-ಸಂಭ್ರಮದಿಂದ ಜರುಗಿದ ಶ್ರೀ ಲಕ್ಷ್ಮೀ ವೆಂಕಟೇಶ ದೇವರ ತೆಪ್ಪೋತ್ಸವ

ಹೊನ್ನಾವರ: ತಾಲೂಕಿನ ಹಳದಿಪುರದ ಕರಿಮೂಲೆ ಬಡಗಣಿ ನದಿಯಲ್ಲಿ ಬುಧವಾರ ಸಂಜೆ ಶ್ರೀ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀ ವೆಂಕಟೇಶ ದೇವರ ವೈಭವದ ತೆಪ್ಪೋತ್ಸವ ಕಾರ್ಯಕ್ರಮ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.

ವರ್ಷಪ್ರತಿಯಂತೆ ನಡೆಯುವ ಜಾತ್ರಾ ಮಹೋತ್ಸವದ ಮಾರನೇ ದಿನ ದೇವರ ಉತ್ಸವ ಮೂರ್ತಿಯನ್ನು ದೋಣಿಯಲ್ಲಿ ವಿರಾಜಮಾನಗೊಳಿಸಿ, ನದಿಯಲ್ಲಿ ಜಲವಿಹಾರ ಮಾಡಿಸುವುದು ಈ ಭಾಗದ ವಿಶೇಷ ಸಂಪ್ರದಾಯ. ಸಕಲ ವಾದ್ಯಗೋಷ್ಠಿಗಳೊಂದಿಗೆ ನಡೆದ ಈ ಜಲವಿಹಾರವನ್ನು ನೂರಾರು ಭಕ್ತಾದಿಗಳು ನದಿ ತೀರದಲ್ಲಿ ಸೇರಿ ಕಣ್ತುಂಬಿಕೊಂಡು ಪುನೀತರಾದರು.

ದಶಕಗಳಿಂದ ನಡೆದುಕೊಂಡು ಬಂದಿರುವ ಈ ಧಾರ್ಮಿಕ ಸೇವೆಯನ್ನು ಖಾರ್ವಿ ಸಮಾಜದ ಪಾಂಡು ಒಮಯ್ಯ ಖಾರ್ವಿ ಹಾಗೂ ಅಶೋಕ್ ದಾಮೋದರ ಖಾರ್ವಿ ಕುಟುಂಬದವರು ಅತ್ಯಂತ ಭಕ್ತಿಯಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿಯೂ ಸಹ ಕುಟುಂಬದ ಸದಸ್ಯರೆಲ್ಲರೂ ಸೇರಿ ಶಾಸ್ತ್ರೋಕ್ತವಾಗಿ ತೆಪ್ಪೋತ್ಸವವನ್ನು ನಡೆಸಿಕೊಟ್ಟರು.
ಪವಿತ್ರ ನದಿಯಲ್ಲಿ ದೀಪಾಲಂಕೃತ ದೋಣಿಯಲ್ಲಿ ಸಾಗಿದ ದೇವರ ದರ್ಶನ ಪಡೆಯಲು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವಕೃಪೆಗೆ ಪಾತ್ರರಾದರು.

About The Author

error: Content is protected !!