ಭಟ್ಕಳ: ಯಕ್ಷಗಾನವು ನೃತ್ಯ, ವೇಷ–ಭೂಷಣ, ಚಿತ್ರಕಲೆ ಹಾಗೂ ಸಂಗೀತಗಳ ಸಮನ್ವಯದಿಂದ ರೂಪುಗೊಂಡ ಪರಿಪೂರ್ಣ ಶಾಸ್ತ್ರೀಯ–ಧಾರ್ಮಿಕ ಹಿನ್ನೆಲೆಯ ಶ್ರೇಷ್ಠ ಕಲೆ ಎಂದು ವೇ. ಮೂ. ಗಜು ಭಟ್ಟ ಖರ್ವಾ ಹೇಳಿದರು.
ಅವರು ಮುರುಡೇಶ್ವರ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರಭಾರತೀ ಹವ್ಯಕ ಸಭಾಭವನದಲ್ಲಿ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಗಾನ ಪ್ರತಿಷ್ಠಾನ, ಪೂರ್ಣಚಂದ್ರ ಯಕ್ಷಗಾನ ಮಂಡಳಿ ಇವರ ಆಶ್ರಯದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಪಾದ ಹೆಗಡೆ ಹಡಿನಬಾಳ ವೇದಿಕೆಯಲ್ಲಿ ಆಯೋಜಿಸಿದ್ದ ೧೨ನೇ ವರ್ಷದ ಪೌರಾಣಿಕ ಯಕ್ಷಗಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ, ಯಕ್ಷಗಾನಕ್ಕೆ ಅಪಾರ ಆಕರ್ಷಣೆಯ ಶಕ್ತಿ ಇದ್ದರೂ ಯುವಜನತೆಗೆ ತಲುಪಿಸುವಲ್ಲಿ ಇನ್ನಷ್ಟು ಪ್ರಯತ್ನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಮುರ್ಡೇಶ್ವರ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಸ್. ಕಾಮತ್, ಹನ್ನೆರಡು ವರ್ಷಗಳಿಂದ ಸತತವಾಗಿ ಸಪ್ತಾಹ ನಡೆಸುತ್ತಿರುವ ನಾಗರಾಜ ಮಧ್ಯಸ್ಥ ಅವರ ಶ್ರದ್ಧಾಭಿಮಾನದಿಂದ ಈ ಪರಂಪರೆ ಮುಂದುವರಿಯಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ವಿಶ್ವಾನಾಥ ಭಟ್ಟ ಖರ್ವಾ, ಎಲ್ಲರ ಸಹಕಾರ ದೊರೆತರೆ ಸಪ್ತಾಹವನ್ನು ನಿರಂತರವಾಗಿ ನಡೆಸಬಹುದು; ಬ್ಯಾಂಕ್ ವತಿಯಿಂದ ಸಹಾಯ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿ ಗಣಪತಿ ಹೆಗಡೆ ತೋಟಿಮನೆ, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಸಹಕರಿಸುವಂತೆ ಮನವಿ ಮಾಡಿದರು.
ಯಕ್ಷಗಾನ ಸಪ್ತಾಹದ ಗೌರವಾಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಮುರ್ಡೇಶ್ವರದ ಪ್ರಮುಖ ನಾಗರಾಜ ಭಟ್ಟ ಬೇಂಗ್ರೆ ಉಪಸ್ಥಿತರಿದ್ದರು.
ವೇದಘೋಷದೊಂದಿಗೆ ಸಭೆ ಆರಂಭವಾಗಿದ್ದು, ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಐ. ವಿ. ಹೆಗಡೆ ನಿರೂಪಿಸಿದರು. ಸಪ್ತಾಹದ ಅಧ್ಯಕ್ಷ ನಾಗರಾಜ ಮಧ್ಯಸ್ಥ ವಂದಿಸಿದರು. ಬಳಿಕ ಪ್ರದರ್ಶಿಸಲಾದ ‘ಮೀನಾಕ್ಷಿ ಕಲ್ಯಾಣ’ ಆಖ್ಯಾನವು ಯಕ್ಷಪ್ರಿಯರ ಮನಗೆಲ್ಲಿತು. ಫೆ. ೮ರಂದು ಸಂಜೆ ೬ರಿಂದ ರಾಮಾಂಜನೇಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ