June 7, 2026

ವಡೇರ ಮಠದಲ್ಲಿ ಲಕ್ಷ ಕುಂಕುಮಾರ್ಚನೆ ಸಂಭ್ರಮ; 200ಕ್ಕೂ ಅಧಿಕ ಮಹಿಳೆಯರಿಂದ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ

ಭಟ್ಕಳ: ಪಟ್ಟಣದ ವಡೇರ ಮಠದಲ್ಲಿ ಜಿಎಸ್‌ಬಿ ಮಹಿಳಾ ಮಂಡಲದ ವತಿಯಿಂದ ಲಕ್ಷ ಕುಂಕುಮಾರ್ಚನೆ ಕಾರ್ಯಕ್ರಮವು ಶುಕ್ರವಾರ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಭಕ್ತಿ ಹಾಗೂ ಸಂಭ್ರಮದಿAದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಜಿಎಸ್‌ಬಿ ಮಹಿಳಾ ಮಂಡಲದ ಅಧ್ಯಕ್ಷೆ ಸುನೀತಾ ಪೈ ಹಾಗೂ ಸುಧಾಕರ ಪೈ ದಂಪತಿಗಳು ವಿಶೇಷ ಪೂಜೆ ನೆರವೇರಿಸಿದರು. ಬಳಿಕ 200ಕ್ಕೂ ಅಧಿಕ ಮಹಿಳೆಯರು ಸಾಮೂಹಿಕವಾಗಿ ಶ್ರೀ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಸಲ್ಲಿಸಿ ಕುಟುಂಬದ ಸುಖ-ಶಾಂತಿ, ಸಮಾಜದ ಅಭಿವೃದ್ಧಿ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಶ್ರೀ ಮಹಾಲಕ್ಷ್ಮೀ ದೇವಿಗೆ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ದೇವಿ ಆರಾಧನೆಯಿಂದ ಸೌಭಾಗ್ಯ, ಐಶ್ವರ್ಯ ಹಾಗೂ ಮನಶ್ಶಾಂತಿ ಲಭಿಸಲಿ ಎಂದು ದೇವಿಯ ಚರಣಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಸುಧಾಕರ ಪೈ ದಂಪತಿ ಹಾಗೂ ವಡೇರ ಮಠದ ಅಧ್ಯಕ್ಷ ನರೇಂದ್ರ ನಾಯಕರನ್ನು ಶ್ರೀಗಳು ಆಶೀರ್ವದಿಸಿ ಪ್ರಸಾದ ವಿತರಿಸಿದರು. ಧಾರ್ಮಿಕ ಶ್ರದ್ಧೆ, ಭಕ್ತಿ ಹಾಗೂ ಸಾಮೂಹಿಕ ದೇವಿ ಆರಾಧನೆಯಿಂದ ಕೂಡಿದ ಈ ಕಾರ್ಯಕ್ರಮದಲ್ಲಿ ಮಹಿಳೆಯರ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಮಠದ ವಾತಾವರಣ ಭಕ್ತಿಮಯವಾಗಿ ಕಂಗೊಳಿಸಿತು.

ಲಕ್ಷ ಕುಂಕುಮಾರ್ಚನೆಯ ಅಂಗವಾಗಿ ವಡೇರ ಮಠದ ರುಕ್ಮಿಣಿ ಸತ್ಯಭಾಮ ಸಮೇತ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕ ಕಿಶೋರ ಭಟ್ ಅವರ ನೇತೃತ್ವದಲ್ಲಿ ಕುಂಕುಮಾರ್ಚನೆ ಸೇವೆ ವಿಧಿವತ್ತಾಗಿ ನೆರವೇರಿತು.

About The Author

error: Content is protected !!