June 23, 2026

ಉತ್ತರ ಕನ್ನಡದ 4 ಸರ್ಕಾರಿ ಪ್ರೌಢಶಾಲೆಗಳಿಗೆ ಸಂಸ್ಕೃತ ಶಿಕ್ಷಕರ ಹುದ್ದೆ ಮಂಜೂರಾತಿ: ಕರ್ನಾಟಕ ಸಂಸ್ಕೃತ ಪರಿಷತ್ ಅಭಿನಂದನೆ

* ಕಾರವಾರ ಶೈಕ್ಷಣಿಕ ಜಿಲ್ಲೆಯ 1 ಹಾಗೂ ಸಿರ್ಸಿ ಶೈಕ್ಷಣಿಕ ಜಿಲ್ಲೆಯ 3 ಶಾಲೆಗಳಿಗೆ ಹುದ್ದೆ ಭಾಗ್ಯ

* ಮಾದನಗೇರಿ ಕೆಪಿಎಸ್ ಶಾಲೆಗೂ ಹುದ್ದೆ ಮಂಜೂರಿಸಲು ಪರಿಷತ್ ಮನವಿ

ಕುಮಟಾ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯ ಒಟ್ಟು ನಾಲ್ಕು ಸರ್ಕಾರಿ ಪ್ರೌಢಶಾಲೆಗಳಿಗೆ ಹೊಸದಾಗಿ ಸಂಸ್ಕೃತ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಧಾರವಾಡ ಆಯುಕ್ತಾಲಯದ ವ್ಯಾಪ್ತಿಯ ಸಿರ್ಸಿ ಶೈಕ್ಷಣಿಕ ಜಿಲ್ಲೆಯ ಮೂರು ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯ ಒಂದು ಸರ್ಕಾರಿ ಪ್ರೌಢಶಾಲೆಗೆ ಈ ಹುದ್ದೆಗಳು ಮಂಜೂರಾಗಿವೆ.

ಹುದ್ದೆ ಮಂಜೂರಾದ ಶಾಲೆಗಳ ವಿವರ:

  • ಸಿರ್ಸಿ ಶೈಕ್ಷಣಿಕ ಜಿಲ್ಲೆ: ಸಿರ್ಸಿ ತಾಲೂಕಿನ ಇಸಳೂರು ಹಾಗೂ ಕೋಲ್ ಸಿರ್ಸಿ ಸರ್ಕಾರಿ ಪ್ರೌಢಶಾಲೆಗಳು ಮತ್ತು ಸಿದ್ದಾಪುರ ತಾಲೂಕಿನ ಮನ್ಮನೆ ಸರ್ಕಾರಿ ಪ್ರೌಢಶಾಲೆ.
  • ಕಾರವಾರ ಶೈಕ್ಷಣಿಕ ಜಿಲ್ಲೆ: ಕುಮಟಾ ತಾಲೂಕಿನ ಸಂತೆಗುಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS).

ಸರ್ಕಾರದ ಆದೇಶ:                              ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರೌಢ ಅಧೀನ ಕಾರ್ಯದರ್ಶಿಗಳಾದ ಎಸ್. ಪ್ರಕಾಶ್ ಅವರು ಜೂನ್ 16, 2026 ರಂದು ಅಧಿಕೃತ ಆದೇಶ (ಸಂಖ್ಯೆ: ಇಪಿ – 133 – ಎಸ್ ಓ ಎಚ್ – 2023) ಹೊರಡಿಸಿದ್ದಾರೆ. ಈ ಆದೇಶದಲ್ಲಿ ಪ್ರಮುಖವಾಗಿ ಸಂಸ್ಕೃತ ಭಾಷೆಯನ್ನು ಉಳಿಸಿ, ಬೆಳೆಸುವ ಸರ್ಕಾರದ ಆಶಯ ಹಾಗೂ ಉದ್ದೇಶವನ್ನು ಪ್ರಸ್ತಾಪಿಸಲಾಗಿದೆ.

ಕರ್ನಾಟಕ ಸಂಸ್ಕೃತ ಪರಿಷತ್ ಧನ್ಯವಾದ:

ಉತ್ತರ ಕನ್ನಡ ಜಿಲ್ಲೆಗೆ ನಾಲ್ಕು ಹೊಸ ಸಂಸ್ಕೃತ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿದ ಸರ್ಕಾರ ಹಾಗೂ ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಕರ್ನಾಟಕ ಸಂಸ್ಕೃತ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ ಭಟ್ ಅವರು ಪ್ರಕಟಣೆಯ ಮೂಲಕ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ಮಾದನಗೇರಿ ಶಾಲೆಗೂ ಹುದ್ದೆಗೆ ಆಗ್ರಹ:
ಇದೇ ಸಂದರ್ಭದಲ್ಲಿ, ಕುಮಟಾ ತಾಲೂಕಿನ ಮಾದನಗೇರಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ನಲ್ಲೂ ಸಂಸ್ಕೃತಾಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಆ ಶಾಲೆಗೂ ಆದಷ್ಟು ಬೇಗ ಒಂದು ಸಂಸ್ಕೃತ ಶಿಕ್ಷಕರ ಹುದ್ದೆಯನ್ನು ಮಂಜೂರು ಮಾಡಿಕೊಡಬೇಕು ಎಂದು ಪರಿಷತ್ತಿನ ಪದಾಧಿಕಾರಿಗಳು ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಿದ್ದಾರೆ.

About The Author

error: Content is protected !!