November 19, 2025

ಡಿ.೬ಕ್ಕೆ ನಮ್ಮನೆ ಹಬ್ಬ, ಪ್ರಶಸ್ತಿ ಪ್ರದಾನ, ಚಿತ್ರನಟ ದೊಡ್ಡಣ್ಣ ಚಾಲನೆ. ‘ವಂದೇ ಗೋವಿಂದಮ್’ ಯಕ್ಷ ರೂಪಕ ಲೋಕಾರ್ಪಣೆ

ಶಿರಸಿ: ರಾಜ್ಯದಲ್ಲೇ ಗಮನ ಸೆಳೆದ ಅತಿ ವಿಶಿಷ್ಟ ಕಲ್ಪನೆಯ ನಮ್ಮನೆ ಹಬ್ಬ ಈ ಬಾರಿ ಡಿಸೆಂಬರ್ ೬ರ ಶನಿವಾರ ಸಂಜೆ ೫ರಿಂದ ಶಿರಸಿ ತಾಲೂಕಿನ ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ ನಡೆಯಲಿದೆ. ವಿಶ್ವಶಾಂತಿ ಸೇವಾ ಟ್ರಸ್ಟ್ ಆಯೋಜಿತ ಹಬ್ಬದಲ್ಲಿ ಪ್ರಸಿದ್ದ ಕಲಾವಿದರಿಂದ ಭಜನಾಮೃತ, ಯಕ್ಷ ರೂಪಕ, ಪ್ರಶಸ್ತಿ ಪ್ರದಾನ ಏರ್ಪಾಟಾಗಿದೆ. ಪ್ರಸಿದ್ಧ ಚಿತ್ರ ನಟ, ಕಲಾವಿದ ಎಸ್.ದೊಡ್ಡಣ್ಣ ನಮ್ಮನೆ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ೫ಕ್ಕೆ ಶ್ರೀಶ್ರೀಧರರ ಭಜನಾಮೃತ ಗಾಯನ ನಡೆಯಲಿದ್ದು ಪ್ರಸಿದ್ಧ ಗಾಯಕ ವಿಶ್ವೇಶ್ವರ ಖರ್ವಾ ಹಾಡಲಿದ್ದಾರೆ. ಗುರುರಾಜ ಆಡುಕಳ ತಬಲಾದಲ್ಲಿ, ಅಜಯ್ ವರ್ಗಾಸರ ಹಾರ್ಮೋನಿಯಂ ಸಹಕಾರ ನೀಡಲಿದ್ದಾರೆ.

ನೂತನ ರೂಪಕ ಲೋಕಾರ್ಪಣೆ:
ಸಂಜೆ ೬.೦೫ಕ್ಕೆ ಗೋವಿನ ಮಹತ್ವ ಸಾರುವ ವಿಶಿಷ್ಟ ಕಥಾಭಾಗ ಒಳಗೊಂಡ ವಿಶ್ವ ಶಾಂತಿ ಸರಣಿಯ ೧೧ನೇ ನೂತನ ಯಕ್ಷ ನೃತ್ಯ ರೂಪಕ ವಂದೇ ಗೋವಿಂದಮ್ ಪ್ರಥಮ ಪ್ರದರ್ಶನದ ಮೂಲಕ ಲೋಕಾರ್ಪಣೆ ಆಗಲಿದೆ. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಕಬ್ಬಿನಾಲೆ ವಸಂತ ಭಾರಧ್ವಾಜ ಅವರು ರಚಿಸಿದ ಈ ರೂಪಕವನ್ನು ಹಲವು ದಾಖಲೆಗೈದ ಯಕ್ಷಗಾನ ಯುವ ಕಲಾವಿದೆ ಕು. ತುಳಸಿ ಹೆಗಡೆ ಪ್ರಸ್ತುತಗೊಳಿಸಲಿದ್ದಾಳೆ. ಚಿಂತಕ ರಮೇಶ ಹೆಗಡೆ ಹಳೆಕಾನಗೋಡರ ಮೂಲ ಕಲ್ಪನೆಯ ರೂಪಕಕ್ಕೆ ನೃತ್ಯ ನಿರ್ದೇಶನವನ್ನು ಹಿರಿಯ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ ನೀಡಿದ್ದಾರೆ. ಗದ್ಯ ಸಾಹಿತ್ಯವನ್ನು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಒದಗಿಸಿದ್ದಾರೆ. ಹಿನ್ನೆಲೆ ಧ್ವನಿಯನ್ನು ಡಾ. ಶ್ರೀಪಾದ ಭಟ್ ನೀಡಿದ್ದಾರೆ. ತಾಳಾಭ್ಯಾಸ ನೆರವು ಜಿ.ಎಸ್.ಭಟ್, ಧ್ವನಿ ಗ್ರಹಣವನ್ನು ಉದಯ ಪೂಜಾರಿ ನೀಡಿದ್ದಾರೆ.

ರಂಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಲೃತ ಕೊಳಗಿ ಕೇಶವ ಹೆಗಡೆ ಭಾಗವತರಾಗಿ ಧ್ವನಿಯಾಗಲಿದ್ದಾರೆ. ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಲಿದ್ದಾರೆ.

ಪ್ರಶಸ್ತಿ ಪ್ರದಾನ:
ಸಂಜೆ ೭.೨೫ ನಮ್ಮನೆ ಹಬ್ಬದ ಉದ್ಘಾಟನೆ, ಪ್ರಶಸ್ತಿ ಪ್ರದಾನ, ದಿನದರ್ಶಿಕೆ ಬಿಡುಗಡೆ ನಡೆಯಲಿದೆ. ಚಿತ್ರನಟ ಎಸ್.ದೊಡ್ಡಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಂಗಭೂಮಿಯ ಹಿರಿಯ ಕಲಾವಿದೆ ಬಿ.ಜಯಶ್ರೀ, ವೈದ್ಯಕೀಯ ರಾಸಾಯನಿಕ ಕ್ಷೇತ್ರದಲ್ಲಿ ಅನುಪಮ ಕೊಡುಗೆ ನೀಡಿದ ರಾಮನಂದನ ಹೆಗಡೆ ಅವರಿಗೆ ನಮ್ಮನೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನಮ್ಮನೆ ಕಿಶೋರ ಪುರಸ್ಕಾರ ವನ್ನು ತೇಜಸ್ವಿ ಗಾಂವಕರರಿಗೆ ನೀಡಲಾಗುತ್ತಿದೆ. ಟ್ರಸ್ಟ್ ಅಧ್ಯಕ್ಷ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅಧ್ಯಕ್ಷತೆವಹಸಿಕೊಳ್ಳುವರು ಎಂದು ಟ್ರಸ್ಟಿನ ಕಾರ್ಯದರ್ಶಿ, ಕವಯಿತ್ರಿ ಗಾಯತ್ರೀ ರಾಘವೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಮ್ಮನೆ ಹಬ್ಬಕ್ಕೆ ೧೪ರ ಸಂಭ್ರಮ.  ಎಲ್ಲರೂ ಒಂದು ಮನೆ ಮಂದಿಯAತೆ ಸಾಂಸ್ಕೃತಿಕ ದಿಬ್ಬಣದಲ್ಲಿ ಭಾಗಿಯಾಗಬೇಕು ಎಂಬುದೇ ನಮ್ಮ ಆಸೆ ಮತ್ತು ಆಶಯ. ಆಗಮಿಸಿದ ಎಲ್ಲರಿಗೂ ಇದು ನಮ್ಮನೆ ಹಬ್ಬವೇ!. ಈ ಮೂಲಕ ಮನಸ್ಸು ಕಟ್ಟುವ ಕಾರ್ಯ ಇದು ಎಂಬುದು ನಮ್ಮ ನಂಬಿಕೆ.ಗಾಯತ್ರೀ ರಾಘವೇಂದ್ರ, ಕವಯತ್ರಿ, ಟ್ರಸ್ಟ್ ಕಾರ್ಯದರ್ಶಿ
ಈ ಬಾರಿ ವಿಶೇಷತೆ

*ಸಮಯಕ್ಕೆ ಮೊದಲಾದ್ಯತೆಯ ಹಬ್ಬ
*ಶ್ರೀ ಶ್ರೀಧರರ ಭಜನಾಮೃತ
*ತುಳಸಿ ಹೆಗಡೆ ಪ್ರಸ್ತುತಿಯ ನೂತನ ರೂಪಕ ಲೋಕಾರ್ಪಣೆ
*ದೊಡ್ಡಣ್ಣ, ಬಿ.ಜಯಶ್ರೀ ಇತರರು ಭಾಗಿ
*ಹಳ್ಳಿ ಮನೆ ಅಂಗಳದಲ್ಲಿ ಎಲ್ಲರಿಗೂ ನಮ್ಮನೆ ಹಬ್ಬ
*ನೆಲ ಮೂಲದ ಸಾಂಸ್ಕೃತಿಕ ದಿಬ್ಬಣ

About The Author

error: Content is protected !!