July 15, 2026

ರೊಟೇರಿಯನ್ ಮ್ಯುಸಿಷಿಯನ್ ಐಡಲ್: ಅರುಣ್ ನಾಯಕ್ ಹಾಗೂ ರಾಘವೇಂದ್ರ ಸಕಲಾತಿ ಸಾಧನೆ

ಶಿರಸಿ: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳನ್ನೊಳಗೊಂಡ ಅಂತರರಾಷ್ಟ್ರೀಯ ರೋಟರಿ ವಲಯ ೫ ಮತ್ತು ೭ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ‘ಇಂಟರ್ ನ್ಯಾಷನಲ್ ಫೆಲೋಶಿಪ್ ಆಫ್ ರೊಟೇರಿಯನ್ ಮ್ಯುಸಿಷಿಯನ್ ಐಡಲ್’ ವಲಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಶಿರಸಿ ಮಧುರ ಸ್ವರ ತಂಡದ ಇಂ. ಅರುಣ ಎಂ. ನಾಯಕ ಮತ್ತು ರಾಘವೇಂದ್ರ ಟಿ. ಸಕಲಾತಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಗ್ಲೋಬಲ್ IFORM ಚೇರ್ಮನ್ ಪ್ಯಾಡಿ ಐಯ್ಯರ್ ಬಹುಮಾನ ವಿತರಿಸಿದರು.

​ದಕ್ಷಿಣ ವಲಯದ ಹನ್ನೊಂದು ಘಟಕಗಳಿಂದ ಒಟ್ಟೂ ೪೦ ಜನ ಹಾಡುಗಾರರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮೊದಲ ಸುತ್ತಿನಲ್ಲಿ ೨೦ ಜನರನ್ನು ಆಯ್ಕೆ ಮಾಡಿದರೆ, ಸೆಮಿಫೈನಲ್ ಸುತ್ತಿನಲ್ಲಿ ೧೦ ಜನ ಆಯ್ಕೆಯಾಗಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು. ಸೆಮಿಫೈನಲ್ ಸುತ್ತಿನಲ್ಲಿ ಶಿರಸಿಯ ಐವರೂ ಹಾಡುಗಾರರು ಆಯ್ಕೆಯಾದುದು ವಿಶೇಷವಾಗಿತ್ತು. ಆ ಪೈಕಿ ವಿಜೇತರಿಬ್ಬರ ಹೊರತಾಗಿ ಮಧುರ ಸ್ವರ ತಂಡದ ಡಾ. ಸುಮನ್ ದಿನೇಶ್, ರೇಖಾ ಸತೀಶ್ ಭಟ್ ನಾಡಗುಳಿ ಹಾಗೂ ಪ್ರವೀಣ್ ಕಾಮತ ಹಾಡಿದ್ದರು. ಉಳಿದಂತೆ ಚೇರ್ಮನ್ ಗಣೇಶ ಕುರ್ಸೆ, ಗಣೀಶ ಹೆಗಡೆ ಮತ್ತು ಆಕಾಶ್ ಅರುಣ ನಾಯಕ ಪಾಲ್ಗೊಂಡಿದ್ದರು.

​ಮೊದಲ ಸುತ್ತಿಗೆ ನಿರ್ಣಾಯಕರಾಗಿ ಖ್ಯಾತ ಹಿನ್ನೆಲೆ ಗಾಯಕರಾದ ಅಜಯ್ ವಾರಿಯರ್ ಮತ್ತು ರಘುಪತಿ ಝಾ ಹಾಗೂ ಸೆಮಿಫೈನಲ್ ಮತ್ತು ಫೈನಲ್ ಸುತ್ತಿಗೆ ಶಾಸ್ತ್ರೀಯ ಸಂಗೀತ ತಜ್ಞರಾದ ಶೀಲು ಮೆಹ್ತಾ, ಐಶ್ವರ್ಯ ಕಾಶಿನಾಥನ್ ಮತ್ತು ಕುಮಾರನ್ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.

​ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ಆರಾಧನಾ ತಂಡದ ವೆಂಕಟ್ರಮಣ ಅಣ್ಢವರಪು ಬಾಚಿಕೊಂಡರೆ, ‘ರೈಸಿಂಗ್ ಸ್ಟಾರ್’ ಪ್ರೋತ್ಸಾಹಕ ಬಹುಮಾನವನ್ನು ದಾವಣಗೆರೆ ಗಾನಮಂಜರಿ ತಂಡದ ಜಗದೀಶ್ ಬೆತ್ತೂರು ಮತ್ತು ಮದ್ರಾಸ್ ಮೆಟ್ಟು ತಂಡದ ಕಾರ್ತಿಕೇಯನ್ ಪಡೆದರು ಎಂದು ಶಿರಸಿ ರೋಟರಿ ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿ ಹೆಗಡೆ ಗಡಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

error: Content is protected !!