ಕೆ.ಆರ್.ಪೇಟೆ : ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಪಟ್ಟಣದಲ್ಲಿರುವ ಇನ್ ಫೆoಟ್ ಜೀಸಸ್ ಕಾಟೇಜ್ ಸ್ಕೂಲ್ ಹಾಗೂ ಆಶೀರ್ವಾದ್ ಕನ್ನಡ ಮಾಧ್ಯಮ ಶಾಲೆಯ ಬಳಿಯಿರುವ ಬಾಲುಯೇಸು ದೇವಾಲಯದ ಪ್ರಾರ್ಥನಾ ಮಂದಿರಕ್ಕೆ ಆಗಮಿಸಿ ರೆವರೆಂಡ್ ಫಾದರ್ ಪೌಲ್ವಿಸ್ ಥಾಮಸ್ ಅವರಿಗೆ 50 ಸಾವಿರ ರೂಪಾಯಿಗಳ ಚೆಕ್ ನೀಡುವ ಮೂಲಕ ಬಾಲಯೇಸು ದೇವಾಲಯದ ಜೀರ್ಣೋದ್ಧಾರಕ್ಕೆ ಆರ್ಥಿಕ ಸಹಾಯ ಮಾಡಿದರು.
ರೆವರೆಂಡ್ ಫಾದರ್ ಪೌಲ್ವಿಸ್ ಥಾಮಸ್ ಅವರು ಬಾಲಯೇಸು ದೇವಾಲಯದ ಪರವಾಗಿ ಆರ್.ಟಿ.ಓ ಮಲ್ಲಿಕಾರ್ಜುನ್ ಅವರನ್ನು ಅಭಿನಂದಿಸಿ ಮಾತನಾಡಿ ಆರ್.ಟಿ.ಓ ಸಂಘದ ರಾಜ್ಯಾದ್ಯಕ್ಷರಾಗಿ ದಕ್ಷತೆಯಿಂದ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ್ ನಮ್ಮ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿರುವ ಹಾಗೂ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯನ್ನು ಮಾಡುತ್ತಾ, ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ, ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹ, ಕ್ರೀಡಾ ಪಟುಗಳಿಗೆ ಆರ್ಥಿಕ ಸಹಾಯ, ದೇವಾಲಯಗಳ ಜೀರ್ಣೋದ್ಧಾರಕ್ಕೆ ಧನ ಸಹಾಯ, ಶಬರಿಮಲೆ ಅಯ್ಯಪ್ಪ ಮಾಲಾಧಾರಿಗಳಿಗೆ ಸಹಾಯ ಹಸ್ತ ಸೇರಿದಂತೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಅವರಿಗೆ ದೇವರು ಇನ್ನಷ್ಟು ಸೇವೆ ಮಾಡಲು ಶಕ್ತಿ ನೀಡಲಿ ಹಾಗೂ ತಾಲ್ಲೂಕಿನ ಶಾಸಕರಾಗಲಿ ಎಂದು ಯೇಸು ಕ್ರಿಸ್ತನಲ್ಲಿ ಬೇಡುತ್ತೇನೆ ಎಂದರು.
ಅಭಿನಂದನೆ ಸ್ವೀಕರಿಸಿದ ಆರ್. ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ ದೇವನೊಬ್ಬ ನಾಮ ಹಲವು ಎನ್ನುವoತೆ ಶ್ರೀ ರಾಮ, ಮಹಮದ್ ಪೈಗಂಬರ್, ಯೇಸು ಸೇರಿದಂತೆ ಎಲ್ಲವೂ ಭಗವಂತನ ಅವತಾರಗಳಾಗಿವೆ. ನಾವು ಪ್ರಕೃತಿಯಲ್ಲಿ ದೇವರನ್ನು ಕಾಣುತ್ತಿದ್ದೇವೆ. ನಮ್ಮ ದೇಶದಲ್ಲಿ ಎಲ್ಲಾ ಜಾತಿ ಹಾಗೂ ಎಲ್ಲಾ ಧರ್ಮದವರು ಅನ್ಯೋನ್ಯತೆಯಿಂದ ವಾಸಿಸುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟವಾಗಿದೆ.ಅದರಲ್ಲೂ ನಮ್ಮ ತಾಲ್ಲೂಕಿನಲ್ಲಿ ಎಲ್ಲಾ ಧರ್ಮದ ಜನರು ಅಣ್ಣ ತಮ್ಮಂದಿರoತೆ ಹಾಗೂ ಅಕ್ಕತಂಗಿಯರoತೆ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಈ ಭಾವಣೆಯು ಜೀವನದುದ್ದಕ್ಕೂ ಮುಂದುವರಿಯಲಿ ಎಂದು ಆಶಿಸುತ್ತೇನೆ. ನಾಗರಿಕ ಸಮಾಜದಲ್ಲಿ ವಾಸಮಾಡುವ ಎಲ್ಲರೂ ಪರಸ್ಥಿತಿ ಪ್ರೀತಿ ವಿಶ್ವಾಸ ಹಾಗೂ ಭಾವೈಕ್ಯತೆಯಿಂದ ಬದುಕಬೇಕು. ನಮ್ಮ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಖಾಸಗೀ ಶಾಲೆಗಳಿಗಿಂತಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ಸರ್ಕಾರಿ ನೌಕರನಾಗಿ ಇಲಾಖೆಗೆ ಸೇರಿದ ನಂತರ ನನ್ನ ಹುಟ್ಟೂರು ಸೇರಿದಂತೆ ನನಗೆ ಜನ್ಮ ನೀಡಿದ ತಾಲ್ಲೂಕಿನ ಜನರಿಗೆ ಏನಾದರೂ ಸೇವೆ ಮಾಡುವ ಹಂಬಲ, ಕಳಕಳಿಯು ಮೊದಲಿನಿಂದಲೂ ಗುಪ್ತವಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದೇನೆ. ನನ್ನ ಜೀವನದ ಕೊನೆಯ ಉಸಿರಿನವರೆಗೆ ತಾಲ್ಲೂಕಿನ ಜನರ ಸೇವೆಯನ್ನು ಬದ್ಧತೆಯಿಂದ ಮಾಡುತ್ತೇನೆ ಎಂದು ಮಲ್ಲಿಕಾರ್ಜುನ ತಿಳಿಸಿದರು.
ಈ ಸಂದರ್ಭದಲ್ಲಿ ಕಾಟೇಜ್ ಶಾಲೆಯ ಮುಖ್ಯಶಿಕ್ಷಕಿ ಎಮಿಲ್ಡಾ ಕ್ವಾಡ್ರಸ್ ಪಿಂಟೋ, ಸಿಸ್ಟರ್ ಜೋಶ್ಲಿನ್ ಕ್ರಸ್ಟಾ, ಪತ್ರಿಕಾ ಹಿರಿಯ ವರದಿಗಾರರಾದ ಕೆ.ಆರ್.ನೀಲಕಂಠ, ಹರಿಚರಣ್ ತಿಲಕ್, ಹೊಸಹೊಳಲು ರಘು, ಸೈಯ್ಯದ್ ಕಲೀಲ್, ಗಂಜಿಗೆರೆ ಮಹೇಶ್, ಕಾಮನಹಳ್ಳಿ ಮಂಜುನಾಥ್ ಸೇರಿದಂತೆ ಕ್ರೈಸ್ತ ಸಮಾಜದ ಬಂಧುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ವಿದ್ಯಾರ್ಥಿಗಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಗಣಿತ ಹಾಗೂ ವಿಜ್ಞಾನ ಶಿಕ್ಷಣವು ದಾರಿ ದೀಪವಾಗಿದೆ. ಮುಖ್ಯ ಶಿಕ್ಷಕಿ ನಾಗರತ್ನ.
ಸದೃಢ, ಸಶಕ್ತ ರಾಷ್ಟ್ರದ ನಿರ್ಮಾಣಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಮಲ್ಲಿಕಾರ್ಜುನ
ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕರಾದ ಶೀಳನೆರೆ ಅಂಬರೀಶ್ ಅವರಿಗೆ ಹೃದಯಸ್ಪರ್ಶಿ ಸನ್ಮಾನ,