March 2, 2026

ಲಕ್ಷ್ಮೀನಾರಾಯಣ ದೇವಸ್ಥಾನದ  ಸಭಾಭವನದ ಲೋಕಾರ್ಪಣೆ,

ಹೊನ್ನಾವರ: ನಗರದ ದುರ್ಗಾಕೇರಿಯಲ್ಲಿರುವ ರಾಮಕ್ಷತ್ರಿಯ ಸಮಾಜದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಎರಡನೇ ಸಭಾಭವನದ ಲೋಕಾರ್ಪಣೆ, ರಜತ ಮಹಾದ್ವಾರದ ಅನಾವರಣ, ರಜತ ಪಲ್ಲಕ್ಕಿಯ ಸಮರ್ಪಣೆ ಕಾರ್ಯಕ್ರಮ ಫೆ.4 ರಂದು ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಮೋಹನ ಸಾಳೆಹಿತ್ತಲ ತಿಳಿಸಿದರು.

ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಶ್ರೀಗುರುಗಳ ಭಿಕ್ಷಾಸೇವೆ ನಡೆಯಲಿದೆ.  ಸಂಜೆ 3.30 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಮೀನುಗಾರಿಕೆ, ಬಂದರು, ಒಳನಾಡು  ಸಾರಿಗೆ ಸಚಿವ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ, ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಮೋಹನ ಸಾಳೆಹಿತ್ತಲ, ಭವಾನಿಶಂಕರ ಕಾಣಕೋಣಕರ ಮುಂಬೈ, ವೆಂಕಟೇಶ ಸಾಳೆಹಿತ್ತಲ, ಆರ್.ಎಫ್.ಒ. ರಾಜು ಅಣ್ಣಪ್ಪ ನಾಯ್ಕ, ಉಪಾಧ್ಯಕ್ಷ ಕೃಷ್ಣ ಗೋವಿಂದ ನಾಯ್ಕ, ಕೋಶಾಧ್ಯಕ್ಷ ನಾರಾಯಣ ಶಿವಾ ನಾಯ್ಕ, ಗೌರವ ಕಾರ್ಯದರ್ಶಿ ಮೋಹನ ಕೇಶವ ನಾಯ್ಕ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಕಟ್ಟಡ ನಿರ್ಮಾಣ ಸಮಿತಿಯ ಸದಸ್ಯರು ಯಧುವೀರ ಬ್ಯಾಂಕ್ ಅಧ್ಯಕ್ಷ  ಶ್ರೀಕಾಂತ ನಾಯ್ಕ ಮಾತನಾಡಿ ಸಮಾಜದ ಭವ್ಯ ಸಭಾಭವನ ಶ್ರೀಗಳಿಂದ ಲೋಕಾರ್ಪಣೆಯಾಗಲಿದೆ. ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ.ಸುರೇಶ ರಾಮನಾಥ ನಾಯ್ಕ, ಉರಗಪ್ರೇಮಿ ಸುನೀಲ ರಾಮಕೃಷ್ಣ ಹೊನ್ನಾವರ ಇವರಿಗೆ ವಿಶೇಷ ಸನ್ಮಾನ ಹಾಗೂ ಸಭಾಭವನ ನಿರ್ಮಾಣಕ್ಕೆ 25 ಸಾವಿರ ಹಾಗೂ ಹೆಚ್ಚಿನ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಪ್ರೇಮಕಾಂತ ನಾಯ್ಕ ಮಾತನಾಡಿ ಫೆ.3ರಂದು ಬೆಳಗ್ಗೆ ದೇವತಾನಾಂದಿ, ವಾಸ್ತುಹೋಮ, ಗಣಹವನ, ಮಹಾಪೂಜೆ, ತೀರ್ಥಪ್ರಸಾಧ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ದೇವಸ್ಥಾನದ ಆಡಳಿತ ಸಮಿತಿಯ ರಾಜೇಶ ಸಾಳೆಹಿತ್ತಲ ಮಾತನಾಡಿ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಫೆ.3ರಂದು ಸಂಜೆ ಕಡತೋಕಾದಲ್ಲಿರುವ ಸ್ವರ್ಣವಲ್ಲೀ ಮೂಲಮಠದಲ್ಲಿ ವಾಸ್ತವ್ಯ ಮಾಡುವರು. ಫೆ.4 ರಂದು ಬೆಳಗ್ಗೆ 11ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸುವರು. ಬಸ್ ನಿಲ್ದಾಣದ ಬಳಿಯ ಶ್ರೀ ಶನೈಶ್ಚರ ದೇವಸ್ಥಾನದ ಬಳಿಯಿಂದ ಮಂಗಳವಾದ್ಯ, ಪೂರ್ಣಕುಂಭ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ಕರೆತರಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೊಷ್ಠಿಯಲ್ಲಿ  ದೇವಸ್ಥಾನದ ಆಡಳಿತ ಸಮಿತಿಯ ಉಪಾಧ್ಯಕ್ಷ ಕೃಷ್ಣ ಗೋವಿಂದ ನಾಯ್ಕ, ಕೋಶಾಧ್ಯಕ್ಷ ಎನ್.ಎಸ್.ನಾಯ್ಕ, ಗೌರವ ಕಾರ್ಯದರ್ಶಿ ಮೋಹನ ಕೇಶವ ನಾಯ್ಕ, ಸದಸ್ಯರಾದ ಮಲ್ಲಿಕಾರ್ಜುನ ಡಿ.ನಾಯ್ಕ, ಪ್ರಕಾಶ ಶೇಷಗಿರಿ ನಾಯ್ಕ, ಲಕ್ಷ್ಮೀನಾರಾಯಣ ಸಾಳೆಹಿತ್ತಲ, ಯೋಗೇಶ ನಾಯ್ಕ, ರವೀಂದ್ರ ನಾಯ್ಕ, ಉಲ್ಲಾಸ ನಾಯ್ಕ, ಸುಧಾಕರ ನಾಯ್ಕ, ಸಂದೇಶ ನಾಯ್ಕ, ನಿತೇಶ ನಾಯ್ಕ, ಕಟ್ಟಡ ಸಮಿತಿಯ ಶ್ರೀಕಾಂತ ಹೆಗ್ಡೇಕರ, ವೆಂಕಟೇಶ ನಾಯ್ಕ, ಗಜಾನನ ನಾಯ್ಕ, ಅರ್ಚಕ ಚಂದ್ರಶೇಖರ ಭಟ್, ಮತ್ತಿತರರು ಉಪಸ್ಥಿತರಿದ್ದರು.

About The Author

error: Content is protected !!