March 2, 2026

ಕೃಷಿ ಯಂತ್ರೋಪಕರಣ ಹಾಗೂ ಸಣ್ಣ ನೀರಾವರಿ ಘಟಕದ ಸಲಕರಣೆ ವಿತರಣೆ

ಹೊನ್ನಾವರ: ತಾಲೂಕಿನ ರೈತರಿಗೆ ಕೃಷಿ ಇಲಾಖೆ ಮೂಲಕ ಸಹಾಯಧನದಿಂದ ಮಂಜೂರಾದ ಕೃಷಿ ಯಂತ್ರೋಪಕರಣ ಹಾಗೂ ಸಣ್ಣ ನೀರಾವರಿ ಘಟಕದ ಸಲಕರಣೆ ವಿತರಣೆಯನ್ನು ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚೀವರಾದ ಮಂಕಾಳ ವೈದ್ಯ ಬುಧವಾರ ವಿತರಿಸಿದರು. ಜಿ.ಪಂ. ಉತ್ತರ ಕನ್ನಡ, ತಾ.ಪಂ. ಹೊನ್ನಾವರ, ಕೃಷಿ ಇಲಾಖೆಯ ವತಿಯಿಂದ ತಾಲೂಕಿನ  ಫಲಾನುಭವಿ 25 ರೈತ ಕುಟುಂಬದವರಿಗೆ 16,23,573  ವೆಚ್ಚದ ಯಂತ್ರೋಪಕರಣಗಳಿಗೆ ಸರ್ಕಾರದಿಂದ  7,64,489 ವೆಚ್ಚದ ಸಹಾಯಧನ  ಅನುದಾನದಡಿ ಮಂಜೂರಾದ ಯಂತ್ರೋಪಕರಣಗಳನ್ನು ವಿತರಿಸಿದರು.

ನಂತರ ಮಾಧ್ಯಮವರನ್ನು ಉದ್ದೇಶಿಸಿ ಮಾತನಾಡಿ ಸರ್ಕಾರ ರೈತರಿಗೆ ಯಂತ್ರೋಪಕರಣ ರಿಯಾಯತಿ ದರದಲ್ಲಿ ವಿತರಣೆ ಮಾಡುವ ಜೊತೆ, ಬಿತ್ತನೆ ಬೀಜ, ರಸಗೊಬ್ಬರವನ್ನು ಸಕಾಲಕ್ಕೆ ನೀಡುವ ಮೂಲಕ ಪೊತ್ಸಾಹಿಸುತ್ತಿದೆ.   ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ರೈತರು ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಆದಾಯ ಗಳಿಸಬೇಕು. ಕೃಷಿ ಇಲಾಖೆಯಲ್ಲಿ ರೈತರಿಗೆ ಸಹಾಯಧನದಡಿ ಯಂತ್ರೋಪಕರಣ ಲಭ್ಯವಿದ್ದು, ರೈತರು ಕೃಷಿ ಇಲಾಖೆಯ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ಸಚಿವರು ಮನವಿ ಮಾಡಿದರು.

ಮೀನುಗಾರಿಕೆ ಇಲಾಖೆಯ ವತಿಯಿಂದ ಈ ಹಿಂದೆ ಸಮಯ ಸರಿಯಾಗಿ ಸಲಕರಣೆ ವಿತರಣೆಯಾಗುತ್ತಿರಲಿಲ್ಲ. ಸಚಿವನಾದ ಬಳಿಕ ವಿಶೇಷ ಮುತುವರ್ಜಿ ವಹಿಸಿ ಸಲಕರಣೆ ವಿತರಿಸುತ್ತಾ ಬಂದಿದ್ದು, ಇಂದು ತಾಲೂಕಿನ 107 ಮೀನುಗಾರರಿಗೆ ಲೈಪ್ ಜಾಕೆಟ್ ವಿತರಿಸಲಾಗಿದೆ. ರಾಜ್ಯದ ಪ್ರತಿ ತಾಲೂಕಿನಲ್ಲಿ 100 ಜಾಕೆಟ್ ವಿತರಿಸಿದ್ದು, ಇನ್ನು 10 ಸಾವಿರದಷ್ಟು‌ವಿತರಣೆ ಬಾಕಿ ಇದ್ದು, ಕೆಲ ದಿನದಲ್ಲಿ ಅದನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ  ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರಾದ ಪಾಂಡಪ್ಪ ಪಿ.ಲಂಬಾಣಿ, ಕೃಷಿ ಅಧಿಕಾರಿಗಳಾದ   ಪುನೀತಾ ಎಸ್.ಬಿ,  ಲಕ್ಷ್ಮಿ ದಳವಾಹಿ, ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ, ಮಹೇಶ ನಾಯ್ಕ, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಗೌಡ‌ ಆತ್ಮಸಿಬ್ಬಂದಿಗಳು, ಇಲಾಖೆಯ ಸಿಬ್ಬಂದಿಗಳು, ಇಸಿಲೈಪ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

error: Content is protected !!