March 6, 2026

ಕುದುರೆ ಬಿರಪ್ಪ ಸಭಾಭವನದಲ್ಲಿ ಬ್ರಹತ್ ರಕ್ತದಾನ ಶಿಬಿರ: 55 ಮಂದಿ ಸ್ವಯಂಪ್ರೇರಿತ ರಕ್ತದಾನ


ಭಟ್ಕಳ: ತಾಲೂಕಿನ ಕುದುರೆ ಬಿರಪ್ಪ ಸಭಾಭವನದಲ್ಲಿ ಶ್ರೀ ಕುದುರೆ ಬಿರಪ್ಪ ಹಾಗೂ ಮುಖ್ಯಪ್ರಾಣ ಹನುಮಂತ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್, ಶ್ರೀ ಕುದುರೆ ಬೀರಪ್ಪ ಯುವಕ ಸಂಘ, ಶ್ರೀ ಕುದುರೆ ಬಿರಪ್ಪ ಮಹಿಳಾ ಮಂಡಳ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ಹಾಗೂ ತಾಲೂಕಾ ಆಸ್ಪತ್ರೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬ್ರಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮವನ್ನು ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಉದ್ಘಾಟಿಸಿ ಮಾತನಾಡಿ, “ರಕ್ತದಾನ ಮಹಾದಾನ. ಮನುಷ್ಯನ ದೇಹದ ಹೊರಗೆ ಒಂದು ಹನಿ ರಕ್ತವನ್ನೂ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ; ಒಬ್ಬರು ದಾನ ಮಾಡಿದಾಗ ಮಾತ್ರ ಮತ್ತೊಬ್ಬರಿಗೆ ಜೀವ ಉಳಿಯುತ್ತದೆ,” ಎಂದು ಹೇಳಿದರು. ರಕ್ತದಾನದ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ವೈದ್ಯರು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.


ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅರುಣ್ ಕುಮಾರ ಮಾತನಾಡಿ, ರಕ್ತದಾನದಿಂದ ಹೃದ್ರೋಗ, ಪಾರ್ಶ್ವವಾಯು ಸೇರಿದಂತೆ ಹಲವು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಸಾರ್ವಜನಿಕರು ಇಂತಹ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಅನೇಕ ಜೀವಗಳನ್ನು ರಕ್ಷಿಸಲು ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಅಭಿವೃದ್ಧಿ ಸಂಘದ ಅಧ್ಯಕ್ಷ ಶಂಕರ ನಾಯ್ಕ, ರಕ್ತದಾನ ಶಿಬಿರ ಆಯೋಜಿಸುವುದು ಪುಣ್ಯದ ಕಾರ್ಯವಾಗಿದ್ದು, ಬಡ ರೋಗಿಗಳಿಗೆ ಜೀವದಾನ ನೀಡುವ ಮಹತ್ತರ ಸೇವೆಯಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ಒಟ್ಟು 55 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.


ಈ ಸಂದರ್ಭದಲ್ಲಿ ಭಟ್ಕಳ ನಾಮಧಾರಿ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಎಂ.ಆರ್. ನಾಯ್ಕ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ವೈದ್ಯಾಧಿಕಾರಿ ಡಾ. ಮೀನಾ ಕುಮಾರಿ, ವೆಂಕಟೇಶ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಯುವಕ ಸಂಘದ ಅಧ್ಯಕ್ಷ ಜೀವನ ನಾಯ್ಕ, ಮಹಿಳಾ ಮಂಡಳದ ಅಧ್ಯಕ್ಷೆ ಶೀತಲಾ ಮುಕುಂದ ನಾಯ್ಕ, ಕುಂದಾಪುರ ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!