ಭಟ್ಕಳ: ಪಟ್ಟಣದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ಯುವಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿವರ : ಬಂಧಿತ ಆರೋಪಿಗಳನ್ನು ಹನೀಫಾಬಾದ್ ನಿವಾಸಿ ಸೈಯದ್ ಮೂಸಾ (28), ಹನೀಫಾಬಾದ್ ಹೆಬ್ಬೆ ನಿವಾಸಿ ಮುರ್ತುಜಾ ಅಲಿ (31) ಹಾಗೂ ಮುಗ್ಗದಂ ಕಾಲೋನಿಯ ನಿವಾಸಿ ಜಾಫರ್ ಸಾಧಿಕ್ ಶೇಖ್ (24) ಎಂದು ಗುರುತಿಸಲಾಗಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಸತ್ಯಾಂಶ ಬಹಿರಂಗ
ಪಟ್ಟಣದ ಸಂಶುದ್ದೀನ್ ಸರ್ಕಲ್, ನೂರಪಳ್ಳಿ ಹಾಗೂ ಮುಗ್ಗದಂ ಕಾಲೋನಿ ಕ್ರಾಸ್ ಸಮೀಪದ ಸಾರ್ವಜನಿಕ ಸ್ಥಳಗಳಲ್ಲಿ ಈ ಯುವಕರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಇವರನ್ನು ವಶಕ್ಕೆ ಪಡೆದು, ಗಾಂಜಾ ಸೇವನೆ ಮಾಡಿರುವ ಶಂಕೆಯ ಮೇರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಪ್ರಸ್ತುತ ಬಂದಿರುವ ವೈದ್ಯಕೀಯ ವರದಿಯಲ್ಲಿ ಮೂವರೂ ಗಾಂಜಾ ಸೇವಿಸಿರುವುದು ಅಧಿಕೃತವಾಗಿ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಭಟ್ಕಳ ನಗರ ಠಾಣೆಯ ಪಿಎಸ್ಐ ರವಿ ಎನ್. ಗಾಂಜೇಕರ್ ಹಾಗೂ ಪಿಎಸ್ಐ ತಿಮ್ಮಪ್ಪ ಎಸ್. ಅವರು ಆರೋಪಿಗಳ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

More Stories
ಕಾಲೇಜು ಶುಲ್ಕದ ಹಣ ವಾಪಸ್ ಸಿಗದೆ ಮನನೊಂದ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ
ಯುಜಿಡಿ ಸೋರಿಕೆಯಿಂದ 50ಕ್ಕೂ ಹೆಚ್ಚು ಬಾವಿ ನೀರು ಕಲುಷಿತ; ಜೂನ್ 15ಕ್ಕೆ ಹೆದ್ದಾರಿ ತಡೆ ಎಚ್ಚರಿಕೆ
ಭಟ್ಕಳದಲ್ಲಿ ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ: 16 ಅಂಗಡಿಗಳ ಪರಿಶೀಲನೆ