March 1, 2026

ಮುರುಡೇಶ್ವರ ಜಾತ್ರೆ—ಸಂಚಾರ ಹಾಗೂ ಭದ್ರತೆ ಕುರಿತು ಸಮನ್ವಯ ಸಭೆ

ಭಟ್ಕಳ:ಪ್ರಸಿದ್ಧ ಮುರುಡೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ, ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರ ಸಂಘ ಹಾಗೂ ದೇವಸ್ಥಾನ ಆಡಳಿತದ ಸಹಯೋಗದಲ್ಲಿ ಸಮನ್ವಯ ಸಭೆ ನಡೆಯಿತು.
ಜಾತ್ರೆ ಅವಧಿಯಲ್ಲಿ ಭಕ್ತರು ಮತ್ತು ಪ್ರವಾಸಿಗರಿಗೆ ಯಾವುದೇ ಅಸೌಕರ್ಯ ಉಂಟಾಗದಂತೆ ಸಂಚಾರ ನಿಯಂತ್ರಣ, ವಾಹನ ನಿಲುಗಡೆ ವ್ಯವಸ್ಥೆ, ಜನಸಂದಣಿ ನಿಯಂತ್ರಣ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಪೊಲೀಸರು ವಿವರವಾಗಿ ಮಾಹಿತಿ ನೀಡಿದರು. ನಿಗದಿತ ಮಾರ್ಗಗಳನ್ನು ಕಡ್ಡಾಯವಾಗಿ ಅನುಸರಿಸಿ, ಪೊಲೀಸ್ ಸೂಚನೆಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಆಟೋ ಚಾಲಕರಿಗೆ ಮನವಿ ಮಾಡಲಾಯಿತು.


ದೇವಸ್ಥಾನ ಆಡಳಿತ ಮಂಡಳಿ ಜಾತ್ರೆಯನ್ನು ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ನಡೆಸಲು ಪೊಲೀಸ್ ಇಲಾಖೆ ಮತ್ತು ಸಾರಿಗೆ ವಲಯದೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿತು. ಸಭೆಯ ಅಂತ್ಯದಲ್ಲಿ ಜಾತ್ರೆ ಯಶಸ್ವಿಯಾಗಿ ನೆರವೇರಲು ಎಲ್ಲರ ಸಹಕಾರ ಅಗತ್ಯವೆಂದು ಪೊಲೀಸ್ ಇಲಾಖೆ ಮನವಿ ಮಾಡಿತು.


ಸಭೆಯಲ್ಲಿ ಸಿಪಿಐ ಜಗದೀಶ ಹಂಚನಾಳ, ಪಿಎಸೈ ಹನುಮಂತ ಬೀರಾದರ್, ಮಾವಳ್ಳಿ ಪಂಚಾಯತ್ ಅಧ್ಯಕ್ಷೆ ನಯನಾ ನಾಯ್ಕ, ಮುರುಡೇಶ್ವರ ದೇವಸ್ಥಾನದ ಧರ್ಮದರ್ಶಿ ಮಂಜುನಾಥ ಶೆಟ್ಟಿ, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶ್ರೀಧರ್ ನಾಯ್ಕ, ಹಿರಿಯರಾದ ಎಸ್.ಎಸ್. ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!