ಭಟ್ಕಳ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ
ಸಾಹಿತಿ, ಜನಾನುರಾಗಿ ವೈದ್ಯ, ಸಮಾಜ ಸೇವಕ ಡಾ. ಆರ್. ವಿ. ಸರಾಫ್ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ ಮಾತನಾಡಿ ತಮ್ಮ ವೃತ್ತಿ ಜೀವನಕ್ಕೆ ಮತ್ತು ಸಾಹಿತ್ಯಕ ಕಾರ್ಯಗಳಿಗೆ ಮಾರ್ಗದರ್ಶಿಯಾಗಿ ನಿಂತ ಬಗೆಯನ್ನು ಸ್ಮರಿಸಿದರಲ್ಲದೇ ತಾವು ಕಲಿಸುತ್ತಿದ್ದ ಶಾಲಾ ಮಕ್ಕಳ ಬಿಸಿಯೂಟಕ್ಕೆ ತರಕಾರಿಯನ್ನು ಸ್ವತಃ ಸರಾಫ್ ರವರೇ ತಂದುಕೊಡುತ್ತಿದ್ದ ಸಂದರ್ಭವನ್ನು ಸ್ಮರಿಸಿದರು. ಅವರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಯ ಅವಧಿಯಲ್ಲಿ ತಾಲೂಕಾ ಸಾಹಿತ್ಯ ಸಮ್ಮೇಳನದ ಗೌರವ ದೊರೆತಿರುವುದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ ಎಂದು ನುಡಿದರು.

ಕಸಾಪ ತಾಲೂಕಧ್ಯಕ್ಷ ಗಂಗಾಧರ್ ನಾಯ್ಕ ಮಾತನಾಡಿ ವೈದ್ಯರಾಗಿ ಕೈಯಲ್ಲಿ ಚಿಕಿತ್ಸೆ, ಮನಸಿನಲ್ಲಿ ಕರುಣೆ, ಮಾತಿನಲ್ಲಿ ಸಾಂತ್ವನವನ್ನು ನೀಡಿದ ಡಾ. ಸರಾಫ್ ಅವರು
ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಿಗೆ ಅವಿಸ್ಮರಣೀಯ ಕೊಡುಗೆ ನೀಡಿದರು. ಸಾಹಿತ್ಯ ಪರಿಷತ್ತನ್ನು ನಡೆಸಿಕೊಂಡು ಬರುವಲ್ಲಿ ಡಾ. ಸರಾಫ್ ಅವರ ಮಾರ್ಗದರ್ಶನವನ್ನು ಸ್ಮರಿಸಿದರಲ್ಲದೆ ಪ್ರತಿವರ್ಷ ಶಿಕ್ಷಣ, ವೈದ್ಯಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆಯನ್ನು ಸಲ್ಲಿಸಿರುವ ಓರ್ವರಿಗೆ ಡಾ ಆರ್. ವಿ. ಸರಾಫ್ ಹೆಸರಿನ ಪ್ರಶಸ್ತಿಯನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾಗುವುದೆಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನತಾ ವಿದ್ಯಾಲಯದ ಪ್ರಾoಶುಪಾಲ ಜಿ. ಎಸ್. ಹೆಗಡೆ ಮಾತನಾಡಿ ವೈದ್ಯಕೀಯ ವೃತ್ತಿಯನ್ನು ಸೇವೆಯಾಗಿ ಸ್ವೀಕರಿಸಿದ ಡಾ. ಸರಾಫ್ ರವರು ಜನತಾ ವಿದ್ಯಾಲಯದ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಾಲೆಯ ಪ್ರಗತಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಮಾನಾಸುತ ಶಂಭು ಹೆಗಡೆ, ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕಿ ಆಶಾ ಕಲ್ಮನೆ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ. ಎನ್.ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಕೆರೆಕಟ್ಟೆ, ಸಾಹಿತಿ ಪೂರ್ಣಿಮಾ ಕರ್ಕಿಕರ್, ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ಸಂಘಟನಾ ಕಾರ್ಯದರ್ಶಿ ಸಂತೋಷ್ ಆಚಾರ್ಯ ಕಾರ್ಯಕಾರಿ ಸಮಿತಿಯ ಪೂರ್ಣಿಮಾ ಕರ್ಕಿಕರ್, ಕೃಷ್ಣ ಮೊಗೇರ್ ಡಾಕ್ಟರ್ ಸರ್ ಅಫ್ ಅವರ ಒಡನಾಟದ ಅವಿಸ್ಮರಣೀಯ ಕ್ಷಣಗಳನ್ನು ಸ್ಮರಿಸಿಕೊಂಡರು.

ಸಾಹಿತಿ ಶ್ರೀಧರ್ ಶೇಟ್ ಡಾಕ್ಟರ್ ಸರಾಫ್ ಅವರ ಸಾಹಿತ್ಯಕ, ಸಾಮಾಜಿಕ, ಧಾರ್ಮಿಕ, ಪತ್ರಿಕಾ ಕ್ಷೇತ್ರ ಹೀಗೆ ಹಲವು ಕ್ಷೇತ್ರದ ಸಾಧನೆಗಳನ್ನು ಸ್ಮರಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಡಾ. ಆರ್. ವಿ. ಸರಾಫ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಹಾಗೂ ಇತ್ತೀಚಿಗೆ ಶಿರಾಲಿಯ ಚಿಪ್ಪೇಕಲ್ಲು ಆಯುವ ಸಂದರ್ಭದಲ್ಲಿನ ದುರಂತದಲ್ಲಿ ಅಗಲಿದ ಚೇತನಗಳಿಗೆ ಮೌನಚಾರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

More Stories
ಕುಳವಾಡಿ ಅರಣ್ಯದಲ್ಲಿ ಕೋಳಿ ಅಂಕ ಜೂಜಾಟಕ್ಕೆ ಪೊಲೀಸ್ ದಾಳಿ: ಆರು ಮಂದಿ ಬಂಧನ
ಗಾಂಜಾ ಸೇವನೆ ದೃಢ: ಯುವಕನ ವಿರುದ್ಧ ಪ್ರಕರಣ
ಹಂಗಾರಖಂಡದಲ್ಲಿ ಅದ್ದೂರಿ ವನಮಹೋತ್ಸವ: ನದಿ ಅಂಚಿನಲ್ಲಿ ಹಸಿರು ಕ್ರಾಂತಿ, ಪ್ರಕೃತಿ ರಕ್ಷಣೆಗೆ ಕರೆ