ಸಿರಸಿ: “ನಾವೀನ್ಯತೆಗಳು ಹಾಗೂ ಆಧುನಿಕ ತಂತ್ರಜ್ಞಾನವು ರೋಗನಿರ್ಣಯ ಪ್ರಕ್ರಿಯೆಯನ್ನು ಸುಧಾರಿಸಿವೆ. ಇವು ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ದೂರದ ಪ್ರದೇಶಗಳಿಗೂ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ತಲುಪಿಸಲು ಸಹಕಾರಿಯಾಗಿವೆ” ಎಂದು ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕರಾದ ಶ್ರೀ ಉದಯಶಂಕರ ಭಂಡಾರಿ ತಿಳಿಸಿದರು.
ಅವರು ಇಲ್ಲಿನ ದೀವಗಿ ಟಾರ್ಕ್ ಟ್ರಾನ್ಸ್ಫರ್ ಸಿಸ್ಟಮ್ಸ್ ಲಿಮಿಟೆಡ್ ಕಂಪನಿಯಲ್ಲಿ 100 ದಿನಗಳ ಕ್ಷಯರೋಗ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ತಂತ್ರಜ್ಞಾನ ಹಾಗೂ ಆರೋಗ್ಯ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕ್ಷಯರೋಗ (ಟಿ.ಬಿ.) ಪತ್ತೆಗಾಗಿ ಇಂದು ‘ಸಿಬಿನಾಟ್’ ಕಫ ಪರೀಕ್ಷೆ ಲಭ್ಯವಿದೆ. ಇದರೊಂದಿಗೆ ಮೊಬೈಲ್ ಹ್ಯಾಂಡ್ಹೆಲ್ಡ್ ಎಕ್ಸ್ರೇ ತಂತ್ರಜ್ಞಾನವು ಅತ್ಯಂತ ಆಧುನಿಕ ಮತ್ತು ನಿಖರವಾದ ಪರೀಕ್ಷಾ ವಿಧಾನವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆರಂಭಿಕ ಪತ್ತೆಯೇ ಆರೋಗ್ಯಕ್ಕೆ ಸೂತ್ರ:
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದೀವಗಿ ಕಂಪನಿಯ ಹೆಚ್.ಆರ್. ಮ್ಯಾನೇಜರ್ ಮಂಜುನಾಥ ಕೆ.ಎನ್. ಮಾತನಾಡಿ, “ಯಾವುದೇ ರೀತಿಯ ರೋಗಲಕ್ಷಣಗಳು ಕಂಡುಬಂದರೂ ಜನರು ನಿರ್ಲಕ್ಷಿಸಬಾರದು. ಆರಂಭಿಕ ಹಂತದಲ್ಲೇ ವೈದ್ಯರ ಸಲಹೆ ಪಡೆದು ಆರೋಗ್ಯ ಸಮಸ್ಯೆಗಳನ್ನು ಬೇಗ ಪತ್ತೆಹಚ್ಚಿ ಪರಿಹರಿಸಿಕೊಳ್ಳಬೇಕು,” ಎಂದರು.
ಕಂಪನಿಯ ಮುಖ್ಯ ವ್ಯವಸ್ಥಾಪಕರಾದ ಮುರುಳಿಧರ ನಾಗರಕಟ್ಟೆ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ವೈಯಕ್ತಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
150ಕ್ಕೂ ಅಧಿಕ ಜನರಿಗೆ ಎ.ಐ. ತಂತ್ರಜ್ಞಾನದ ಎಕ್ಸ್ರೇ ತಪಾಸಣೆ:
ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ ಲಕ್ಷ್ಮಣ ಹಾಗೂ ಜಿಲ್ಲಾ ಪಿ.ಪಿ.ಎಂ. ಸಂಯೋಜಕ ಪ್ರಜ್ವಲ ಠಾಣೆಕರ್ ಅವರು ಸಾರ್ವಜನಿಕರ ಕ್ಷಕಿರಣ (ಎಕ್ಸ್ರೇ) ತಪಾಸಣೆ ನಡೆಸಿದರು. ಶಿಬಿರದಲ್ಲಿ ಕಂಪನಿಯ 150ಕ್ಕೂ ಅಧಿಕ ಜನರಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧಾರಿತ ಎಕ್ಸ್ರೇ ತಪಾಸಣೆ
ಹೆಚ್.ಆರ್. ಮ್ಯಾನೇಜರ್ ಮಂಜುನಾಥ ಕೆ.ಎನ್. ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶ್ರೀಮತಿ ಲಕ್ಷ್ಮಿ ಮಾಳಪುರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರಮೇಶ್ವರ ಮಡಿವಾಳ ಅವರು ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.
ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿಗಳು ಹಾಗೂ ದೀವಗಿ ಕಂಪನಿಯ 400ಕ್ಕೂ ಅಧಿಕ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

More Stories
ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅಕ್ರಮ ಸಾರಾಯಿ, ಗಾಂಜಾ ಹಾವಳಿ ತಡೆಗೆ ಆಗ್ರಹ: ಜೂನ್ 16ಕ್ಕೆ ಭಾರಿ ಪ್ರತಿಭಟನೆ
ಕ್ಷಯ ರೋಗವು ಶ್ವಾಸಕೋಶವನ್ನು ಬಾಧಿಸುತ್ತದೆ. – ಡಾ. ಸೌಮ್ಯಾ
ಪೂರ್ಣಿಮಾ ಹೆಗಡೆಗೆ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ