June 24, 2026

ಚಿಪ್ಪೆಕಲ್ಲು ದುರಂತ ಸಂತ್ರಸ್ತರಿಗೆ ನೆರವಿನ ಹಸ್ತ: ವಿಜಯ ಚಾರಿಟೇಬಲ್ ಟ್ರಸ್ಟ್‌ನಿಂದ ದಿನಸಿ ಸಾಮಗ್ರಿ ವಿತರಣೆ

ಭಟ್ಕಳ: ತಾಲೂಕಿನ ಅಳ್ವೆಕೋಡಿ ಪ್ರದೇಶದಲ್ಲಿ ಚಿಪ್ಪೆಕಲ್ಲು ಸಂಗ್ರಹಿಸಲು ತೆರಳಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ವಿಜಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆಯಲಾಯಿತು.

ಶ್ರೀ ರೇಣುಕಾನಂದ ಸ್ವಾಮೀಜಿಗಳಿಂದ ಸಾಂತ್ವನ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೀರ್ಥಹಳ್ಳಿಯ ನಿಟ್ಟೂರಿನ ಶ್ರೀ ನಾರಾಯಣಗುರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಗಳು ಸಂತ್ರಸ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು, ಬಳಿಕ ಮಾತನಾಡಿದ ಅವರು: “ಸಂಕಷ್ಟದ ಸಂದರ್ಭದಲ್ಲಿ ಸಮಾಜವು ನೋವಿನಲ್ಲಿರುವ ಕುಟುಂಬಗಳ ಬೆನ್ನಿಗೆ ನಿಲ್ಲಬೇಕು. ದುರ್ಘಟನೆಯಿಂದ ಜೀವನ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಅಗತ್ಯ ನೆರವು ನಿರಂತರವಾಗಿ ದೊರೆಯುವಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು.”ಎಂದರು.

ನೊಂದ ಜೀವಗಳಿಗೆ ಆಸರೆಯಾದ ಟ್ರಸ್ಟ್

ವಿಜಯ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾದ ದೀಪಾ ನಾಯ್ಕ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ದುರಂತದಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ಕುಟುಂಬಗಳಿಗೆ ಜೀವನ ನಿರ್ವಹಣೆಗೆ ಆಸರೆಯಾಗುವ ನಿಟ್ಟಿನಲ್ಲಿ ಅಗತ್ಯ ದಿನಸಿ ಕಿಟ್‌ಗಳನ್ನು ವಿತರಿಸಿ, ಟ್ರಸ್ಟ್ ವತಿಯಿಂದ ಸಾಂತ್ವನ ಮತ್ತು ಬೆಂಬಲವನ್ನು ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಸತ್ಯಜಿತ್ ಸೂರತ್ಕಲ್, ಶ್ರೀಧರ್ ನಾಯ್ಕ, ಪದ್ಮ ನಾಯ್ಕ, ರಾಘವೇಂದ್ರ, ರಾಜು ನಾಯ್ಕ, ಸಂತೋಷ್ ನಾಯ್ಕ, ಮಂಜು ನಾಯ್ಕ, ಮೋಹನ ಸೇರಿದಂತೆ ಸಾರದಹೊಳೆ ನಾಮಧಾರಿ ಸಮಾಜದ ಅಧ್ಯಕ್ಷರು, ಪ್ರಮುಖರು ಹಾಗೂ ಸಮಾಜದ ಪ್ರಮುಖ ಸದಸ್ಯರು ಉಪಸ್ಥಿತರಿದ್ದು ಸಂತ್ರಸ್ತರಿಗೆ ಧೈರ್ಯ ತುಂಬಿದರು.

About The Author

error: Content is protected !!