ಕಲೆಗೆ ಮತ್ತು ಕಲಾವಿದರಿಗೆ ಸಮಾಜ ಆಸರೆಯಾದಾಗ ಮಾತ್ರ ಕಲಾವಿದರ ಬದುಕು ಹಸನಾಗುತ್ತದೆ ಎಂದು ಉಪನ್ಯಾಸಕ ಪ್ರಶಾಂತ ಮೂಡಲಮನೆ ಅಭಿಪ್ರಾಯಪಟ್ಟರು.
ಹೊನ್ನಾವರ: ನೃತ್ಯ ಸಂವೇದನಾ ಟ್ರಸ್ಟ್(ರಿ.) ಹೊನ್ನಾವರ ಇವರು ಕೆರೆಮನೆ ಶಿವರಾಮ ಹೆಗಡೆ ರಂಗಮAದಿರ ಗುಣವಂತೆಯಲ್ಲಿ ಆಯೋಜಿಸಿದ ‘ನೃತ್ಯಪಲ್ಲವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರಿಗೆ ಸಂತೋಷವನ್ನು ಕೊಡುವುದೇ ನಿಜವಾದ ಈಶ್ವರ ಪೂಜೆ. ಹತ್ತಾರು ವರ್ಷಗಳ ಕಠಿಣ ಪರಿಶ್ರಮದಿಂದ ಕಲಾವಿದರಾಗಿ ರೂಪುಗೊಂಡು, ತನ್ನ ಕಲೆಯ ಮೂಲಕ ಜನಸಮುದಾಯಕ್ಕೆ ಆನಂದ ಕೊಡುವ ಕಲಾವಿದರ ಬದುಕು ಇಂದು ಕಷ್ಟದಲ್ಲಿದೆ. ನಾಡಿನ ತುಂಬಾ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿ 60 ಜನ ವಿದುಷಿಯರನ್ನು ಸಿದ್ಧಪಡಿಸಿದ ಡಾ. ಸಹನಾ ಭಟ್ಟರ ಸಾಧನೆ ದೊಡ್ಡದು. ಅವರ ಶಿಷ್ಯೆ ವಿದುಷಿ ಪೂಜಾ ಹೆಗಡೆ ತನ್ನ ಗುರುವಿನ ಹಾದಿಯಲ್ಲೇ ಮುನ್ನಡೆಯುತ್ತಿದ್ದಾರೆ. ತಾಲೂಕಿನ ನಾಲ್ಕಾರು ಕಡೆ ಭರತನಾಟ್ಯದ ಶಾಲೆ ತೆರೆದಿದ್ದಾರೆ. ಇಂಥವರ ಮೂಲಕ ನಮ್ಮ ಶ್ರೀಮಂತ ಕಲೆ ಸಂಸ್ಕೃತಿ ಪರಂಪರೆ ಉಳಿಯಲಿ ಎಂದರು.

ವಿದ್ವಾನ್ ಶಿವಾನಂದ ಭಟ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಗೆ ಕಲೆಯನ್ನು ಕಲಿತಾಗ ಅವರ ಸೃಜನಶೀಲತೆ ಅರಳುತ್ತದೆ ಎಂದರು. ನೃತ್ಯ ಸಂವೇದನಾ ಟ್ರಸ್ಟ್ ನ ಪರವಾಗಿ ಡಾ.ಸಹನಾ ಭಟ್ಟ ಮತ್ತು ಸಾಹಿತಿ ಪ್ರದೀಪ್ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಗುರುವಂದನೆ ಸ್ವೀಕರಿಸಿದ ಡಾ. ಸಹನಾ ಭಟ್ ಮಾತನಾಡಿ, ಶಿಷ್ಯರು ಗುರುವಾಗಿ ನಿಂತು ಮತ್ತಷ್ಟು ಶಿಷ್ಯರನ್ನು ಸಿದ್ಧಪಡಿಸುವುದನ್ನು ಕಣ್ತುಂಬಿಸಿಕೊಳ್ಳುವುದೇ ಒಬ್ಬ ಗುರುವಿಗೆ ನಿಜವಾದ ಸಾರ್ಥಕತೆ. ನನ್ನ ಶಿಷ್ಯಳಾದ ವಿದುಷಿ ಪೂಜಾ ಆ ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಸಹಕರಿಸುತ್ತಿರುವ ಕಲಾಪೋಷಕರಿಗೆ ನನ್ನ ಪರವಾಗಿ ಕೃತಜ್ಞತೆಗಳು ಎಂದರು. ನೃತ್ಯಗುರು ಪೂಜಾ ಹೆಗಡೆ, ಶ್ರೀಮತಿ ಪ್ರಿಯಾ ಪ್ರಭು, ಸಂಘಟಕ ಜೆ. ವಿ. ಪ್ರಸನ್ನ ಉಪಸ್ಥಿತರಿದ್ದರು. ಉಪನ್ಯಾಸಕಿ ಬಿಂದು ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಂತರ ನೃತ್ಯ ಸಂವೇದನಾ ಟ್ರಸ್ಟ್ ನ ಕಲಿಕಾ ವಿದ್ಯಾರ್ಥಿಗಳಿಂದ ಆಕರ್ಷಕವಾದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಹಾಡುಗಾರಿಕೆಯಲ್ಲಿ ವಿದುಷಿ ನವಮಿ ಉಪಾಧ್ಯಾಯ, ಮೃದಂಗದಲ್ಲಿ ವಿದ್ವಾನ್ ಪದ್ಮರಾಜ ಭಟ್ಟ, ಕೊಳಲಿನಲ್ಲಿ ರವೀಂದ್ರ ಭಟ್ಟ ಅಣ್ಣೆಮನೆ, ನಟ್ಟುವಾಂಗದಲ್ಲಿ ವಿದುಷಿ ಪೂಜಾ ಹೆಗಡೆ ಸಹಕರಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ


More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”