July 15, 2026

ನೀಲಗೋಡ ಯಕ್ಷಚೌಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಅಮವಾಸ್ಯೆ ವಿಶೇಷ ಪೂಜೆ: ಭಕ್ತರ ಕಷ್ಟ ಕಾರ್ಪಣ್ಯ ನೀಗಿಸುವ ಶಕ್ತಿ ಕ್ಷೇತ್ರ

ಹೊನ್ನಾವರ: ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಜಾಗೃತ ಶಕ್ತಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ, ತಾಲೂಕಿನ ನೀಲಗೋಡಿನ ಶ್ರೀ ಯಕ್ಷಚೌಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಅಮವಾಸ್ಯೆಯ ನಿಮಿತ್ತ ನವಚಂಡಿಕಾ ಹವನ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ವೈಭವದಿಂದ ನೆರವೇರಿದವು.
ಅಮವಾಸ್ಯೆಯ ಅಂಗವಾಗಿ ದೇವಿಗೆ ವಿವಿಧ ಬಗೆಯ ಪುಷ್ಪಗಳು ಹಾಗೂ ಹಣ್ಣು-ಹಂಪಲುಗಳಿಂದ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಕ್ಷೇತ್ರದ ಧರ್ಮದರ್ಶಿ ಹಾಗೂ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಅವರ ಮಾರ್ಗದರ್ಶನ ಹಾಗೂ ಮುಂದಾಳತ್ವದಲ್ಲಿ ವೈದಿಕರ ಮೂಲಕ ಲೋಕಕಲ್ಯಾಣಾರ್ಥವಾಗಿ ಬೃಹತ್ ನವಚಂಡಿಕಾ ಯಾಗ, ತೀರ್ಥಸ್ನಾನ ಮತ್ತು ವಿಶೇಷ ಪ್ರಾರ್ಥನೆಗಳು ಜರುಗಿದವು.

ಸಹಸ್ರಾರು ಭಕ್ತರಿಂದ ವಿವಿಧ ಸೇವೆ:

ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ದೇವಿಗೆ ಉಡಿಸೇವೆ, ತುಪ್ಪದ ದೀಪ ಸೇವೆ, ಹೂವಿನ ಅಲಂಕಾರ ಸೇವೆ, ಹಣ್ಣುಕಾಯಿ ಸೇವೆ, ನವಚಂಡಿಕಾ ಸೇವೆ ಹಾಗೂ ಅನ್ನದಾನ ಸೇವೆಗಳನ್ನು ಅರ್ಪಿಸಿದರು. ತದನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಿತು.

ಇಷ್ಟಾರ್ಥ ಸಿದ್ಧಿಗೆ ‘ಘಂಟೆ ಹಾಗೂ ಬಾಳೆಗೊನೆ’ ಹರಕೆ:

ಈ ಕ್ಷೇತ್ರದಲ್ಲಿ ನೆಲೆಸಿರುವ ಜಗನ್ಮಾತೆ ಯಕ್ಷಚೌಡೇಶ್ವರಿಯು ಭಕ್ತರ ಕಷ್ಟಗಳಿಗೆ ಸ್ಪಂದಿಸುವ ಸತ್ಯದೇವತೆಯಾಗಿದ್ದಾಳೆ. ತಮ್ಮ ಮನಸ್ಸಿನ ಇಷ್ಟಾರ್ಥಗಳು ನೆರವೇರಿದರೆ ದೇವಿಗೆ ಎರಡು ಘಂಟೆ (ಬೆಲ್) ಹಾಗೂ ಬಾಳೆಗೊನೆಯನ್ನು ಹರಕೆಯಾಗಿ ಒಪ್ಪಿಸುವುದು ಇಲ್ಲಿನ ವಿಶೇಷ. ಕ್ಷೇತ್ರದಲ್ಲಿ ತೂಗುಹಾಕಲಾಗಿರುವ ಸಾವಿರಾರು ಸಂಖ್ಯೆಯ ಘಂಟೆಗಳೇ ದೇವಿಯ ಅಪಾರ ಮಹಿಮೆ ಹಾಗೂ ಭಕ್ತರ ನಂಬಿಕೆಗೆ ಜೀವಂತ ಸಾಕ್ಷಿಯಾಗಿದೆ.

ಕ್ಷೇತ್ರದ ಧಾರ್ಮಿಕ ನಿಯಮಗಳು:

ದೇವಸ್ಥಾನದಲ್ಲಿ ಪ್ರತಿನಿತ್ಯವೂ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿಯ ಸನ್ನಿಧಿಯಲ್ಲಿ ದರ್ಶನ (ಅಭಯ ನುಡಿ) ಸೇವೆ ಇರುತ್ತದೆ. ದೇವಿಯ ಆಜ್ಞೆಯಂತೆ ಪ್ರತಿ ಅಮವಾಸ್ಯೆಯಂದು ಭಕ್ತರು ಇಲ್ಲಿಗೆ ಆಗಮಿಸಿ ಪವಿತ್ರ ತೀರ್ಥಸ್ನಾನ ಮಾಡಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೆ, ಪ್ರತಿ ಸಂಕಷ್ಟ ಚತುರ್ಥಿಯಂದು ಭಕ್ತರ ಸಂಕಷ್ಟ ನಿವಾರಣೆಗಾಗಿ ವಿಶೇಷ ಗಣಹೋಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಅರ್ಚಕ ಮಾದೇವ ಸ್ವಾಮಿ ಅವರು ತಿಳಿಸಿದ್ದಾರೆ.

About The Author

error: Content is protected !!