ಭಟ್ಕಳ: ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಅಂಗವಾಗಿ ಶ್ರೀ ಕ್ಷೇತ್ರ ಬದರಿಯಿಂದ ಆರಂಭವಾದ ಶ್ರೀರಾಮ ದಿಗ್ವಿಜಯ ರಥಯಾತ್ರೆ ಅಯೋಧ್ಯಾ ತಲುಪಿದ್ದು, ಶ್ರೀರಾಮನ ಜನ್ಮಸ್ಥಳದಲ್ಲಿ ಭರ್ಜರಿ ಸ್ವಾಗತ ದೊರೆತಿದೆ.


ಅ.19ರಂದು ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಪೂಜೆಯೊಂದಿಗೆ ಬದರಿಯಲ್ಲಿ ಚಾಲನೆಗೊಂಡ ರಥಯಾತ್ರೆ, ದೆಹಲಿ ಮೂಲಕ ಅ.23ರಂದು ಅಯೋಧ್ಯಾಧಾಮ ಪ್ರವೇಶಿಸಿತು. ಅಯೋಧ್ಯೆಯಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಸ್ಥಳೀಯ ಶಾಸಕ ವೇದ ಪ್ರಕಾಶ ಗುಪ್ತಾ, ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಗೋಪಾಲ ಜಿ ಸೇರಿದಂತೆ ಗಣ್ಯರು ಅದ್ದೂರಿ ಸ್ವಾಗತ ನೀಡಿದರು.
ಮಠದ ಇತಿಹಾಸದಲ್ಲೇ ಮೊದಲ ಬಾರಿಗೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀರಾಮ ಮಂದಿರದ ರಾಮ ದರ್ಬಾರ ಹಾಲಿನಲ್ಲಿ ಆರಾಧ್ಯ ದೇವರಾದ ರಾಮದೇವ ವೀರವಿಠ್ಠಲ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಶ್ರೀರಾಮ ನಾಮ ತಾರಕ ಮಹಾಮಂತ್ರ ಜಪಾಭಿಯಾನ ಜರುಗಿತು. ಇದೇ ವೇಳೆ ಶ್ರೀಗಳು ಶ್ರೀರಾಮಲಲ್ಲಾನಿಗೆ ರಾಮದರ್ಬಾರದ ಚಿತ್ರ ಅಚ್ಚಿನ ಬಂಗಾರದ ಆಭರಣವನ್ನು ಅರ್ಪಿಸಿದರು.

ಈ ಮಹೋತ್ಸವಕ್ಕೆ ನೂರಾರು ಜಿಎಸ್ಬಿ ಸಮಾಜದ ಗಣ್ಯರು ಸಾಕ್ಷಿಯಾದರು. ಬಳಿಕ ರಥಯಾತ್ರೆ ಮಧ್ಯಪ್ರದೇಶದ ಜಬಲಪುರದ ಜಗದ್ಗುರು ಶಂಕರಾಚಾರ್ಯರ ಆಶ್ರಮಕ್ಕೆ ಭೇಟಿ ನೀಡಿ, ಸೋಮವಾರ ಸಂಜೆ ಮಹಾರಾಷ್ಟ್ರದ ಅಂಬಾದೇವಿ ಸಂಸ್ಥಾನ ತಲುಪಿದೆ.
ಅಯೋಧ್ಯಾದ ಶ್ರೀಗಳ ಮೊಕ್ಕಾಂನಲ್ಲಿ ಹಾಂಗ್ಯೋ ಐಸ್ಕ್ರೀಮ್ನ ದಿನೇಶ್ ಪೈ, ಯೋಗೇಶ್ ಕಾಮತ್, ಜಗದೀಶ ಪೈ, ಪವನ್ ಪ್ರಭು, ಸಂತೋಷ ಆಚಾರ್ಯ, ಸಂಜಯ ಭಟ್, ಪ್ರಸನ್ನಾ ಬಿಚ್ಚು (ಪುಣೆ) ಹಾಜರಿದ್ದರು. ರಥಯಾತ್ರೆಯೊಂದಿಗೆ ಭಟ್ಕಳದ ಗಿರಿಧರ ನಾಯಕ, ಶ್ರೀನಿವಾಸ ಕಾಮತ್, ಶರಣ ಆಚಾರ್ಯ, ಆನಂದ ಭಟ್ ಮುಂತಾದವರು ಭಾಗವಹಿಸಿದ್ದರು.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ