March 2, 2026

ನಿಚ್ಚಲಮಕ್ಕಿಯ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಜ.22ರಿಂದ 26ರವರೆಗೆ ಧಾರ್ಮಿಕ ಮಹೋತ್ಸವಗಳು


ಭಟ್ಕಳ: ನಿಚ್ಚಲಮಕ್ಕಿಯ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ೯ನೇ ವರ್ಷದ ಶ್ರೀ ದೇವರ ಪುನರ್‌ಪ್ರತಿಷ್ಠಾಪನೆ ವರ್ಧಂತಿ ಮಹೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಪಾಲಕಿ ಮಹೋತ್ಸವವನ್ನು ಜ.22ರಿಂದ 26ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಅರುಣ ನಾಯ್ಕ ತಿಳಿಸಿದ್ದಾರೆ.


ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.22ರಂದು ವಿಶ್ವಕ್ಸೇನಾರಾಧನೆ, ಮಹಾಸಂಕಲ್ಪ, ಪುಣ್ಯಹವಾಚನ, ವಾಸ್ತುಪೂಜೆ ಹಾಗೂ ವಾಸ್ತುಬಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಜ.24ರಂದು ಬೆಳಿಗ್ಗೆ 8.30ಕ್ಕೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ಅದೇ ದಿನ ಸಂಜೆ 7 ಗಂಟೆಗೆ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಆಗಮನ ನಡೆಯಲಿದೆ ಎಂದರು.


ಜ.25ರಂದು ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಶ್ರೀ ತಿರುಮಲ ವೆಂಕಟರಮಣ ದೇವರ ಪಾಲಕಿ ಮಹೋತ್ಸವವು ಭಕ್ತರ ಸಹಕಾರದೊಂದಿಗೆ ಭವ್ಯವಾಗಿ ನಡೆಯಲಿದೆ ಎಂದು ಅರುಣ ನಾಯ್ಕ ಹೇಳಿದರು.


ಜ.22ರಿಂದ 26ರವರೆಗೆ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ಗುರುಮಠದ ಗೌರವಾಧ್ಯಕ್ಷ ಕೃಷ್ಣಾ ನಾಯ್ಕ ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸವದ ಮಹತ್ವವನ್ನು ವಿವರಿಸಿ ಎಲ್ಲ ವರ್ಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ವಿಠ್ಠಲ ನಾಯ್ಕ, ಮಹೇಶ ನಾಯ್ಕ, ಪುಂಡಲೀಕ ನಾಯ್ಕ, ಪ್ರಕಾಶ ನಾಯ್ಕ (ತೆಂಗಿನಗುಂಡಿ), ಮಹಾಬಲೇಶ್ವರ ನಾಯ್ಕ, ಶಿವರಾಮ ನಾಯ್ಕ, ಉಪಾಧ್ಯಕ್ಷ ಎಂ.ಕೆ. ನಾಯ್ಕ ಹಾಗೂ ಕಾರ್ಯದರ್ಶಿ ಡಿ.ಎಲ್. ನಾಯ್ಕ ಉಪಸ್ಥಿತರಿದ್ದರು.

About The Author

error: Content is protected !!