March 2, 2026

ಪ್ರಯಾಣಿಕರ ವಿಚಾರಕ್ಕೆ ಜಗಳ: ಆಟೋ ಚಾಲಕನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ

ಭಟ್ಕಳ: ಪಟ್ಟಣದ ಶಂಶುದ್ದಿನ ಸರ್ಕಲ್ ಸಮೀಪದ ಬಂದರ್ ರಸ್ತೆ ಆಟೋ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸುವ ವಿಚಾರಕ್ಕೆ ಇಬ್ಬರು ಆಟೋ ಚಾಲಕರ ನಡುವೆ ಗಲಾಟೆ ನಡೆದು, ಚಾಲಕನೊಬ್ಬನಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ.

ತಲಗೋಡ ನಿವಾಸಿ ಆಟೋ ಚಾಲಕ ಹನುಮಂತ ಸುಬ್ರಾಯ ನಾಯ್ಕ (50) ಹಲ್ಲೆಗೆ ಒಳಗಾದವರು. ಅವರು ತಮ್ಮ ರಿಕ್ಷಾವನ್ನು ನಿಲ್ದಾಣದಲ್ಲಿ ನಿಲ್ಲಿಸಿಕೊಂಡಿದ್ದ ವೇಳೆ, ಇನ್ನೊಬ್ಬ ಆಟೋ ಚಾಲಕ ರಾಮ ಮಂಜಪ್ಪ ನಾಯ್ಕ ಅವರು ನಿಯಮ ಮೀರಿ ಹೆಚ್ಚುವರಿ ಪ್ರಯಾಣಿಕರನ್ನು ಹತ್ತಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಕಾರಣಕ್ಕೆ ಸಿಟ್ಟಾದ ಆರೋಪಿತನು ಅಶ್ಲೀಲವಾಗಿ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿ, ಬಳಿಕ ತನ್ನ ಆಟೋದಲ್ಲಿದ್ದ ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ತೀವ್ರ ರಕ್ತಗಾಯಗೊಂಡ ಹನುಮಂತ ನಾಯ್ಕ ನೆಲಕ್ಕುರುಳಿದ್ದು, ಈ ವೇಳೆ ಮತ್ತೆ ಪ್ರಶ್ನಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಆರೋಪಿತನು ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ.


ಘಟನೆ ಕುರಿತು ಗಾಯಾಳುವಿನ ಪತ್ನಿ ಪದ್ಮಾ ಹನುಮಂತ ನಾಯ್ಕ ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!