March 2, 2026

ಜೆ.ಸಿ.ಟಿ.ಯು ನೇತೃತ್ವದಲ್ಲಿ ಪ್ರತಿಭಟನಾ ಸಭೆ ಮತ್ತು ಮೆರವಣಿಗೆ

ಹೊನ್ನಾವರ : ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಗುರುವಾರ ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ಕೊಟ್ಟ ಕರೆಯ ಹಿನ್ನಲೆಯಲ್ಲಿ ಜಿಲ್ಲಾ ಜೆ.ಸಿ.ಟಿ.ಯು ನೇತೃತ್ವದಲ್ಲಿ ಪ್ರತಿಭಟನಾ ಸಭೆ ಮತ್ತು ಮೆರವಣಿಗೆ ನಡೆಯಿತು.
ಶರಾವತಿ ವೃತ್ತದ ಬಳಿ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಸಧಸ್ಯರು ಭಾಗವಹಿಸಿದರು.


ಜಿ.ಸಿ.ಟಿ.ಯು ಜಿಲ್ಲಾ ಸಂಚಾಲಕ ತಿಲಕ್ ಗೌಡ, ತಾಲೂಕಾ ಸಂಚಾಲಕ ತಿಮ್ಮಪ್ಪ ಗೌಡ, ಅಂಗನವಾಡಿ ಸಂಘಟನೆ ಗೀತಾ ನಾಯ್ಕ, ಅಕ್ಷರ ದಾಸೋಹ ಸಮಿತಿಯ ಶ್ರೀಮತಿ ನಾಯ್ಕ, ಬ್ಯಾಂಕ್ ಉದ್ಯೋಗಿಗಳ ಸಂಘಟನೆಯ ಶ್ರೀಧರ ಹೆಗಡೆ ಹಾಗೂ ಇತರರು, ಕಟ್ಟಡ ಕಾರ್ಮಿಕ ಸಂಘಟನೆಯ ಕೃಷ್ಣ ಪ್ಯಾರಾ ಗೌಡ ಹಾಗೂ ಮಾಲಿನಿ ಅಂಬಿಗ, ಮಂಜುನಾಥ ಗೌಡ, ರೈತ ಸಂಘಟನೆಯ ಪದಾಧಿಕಾರಿಗಳು ಸಭೆ ಮತ್ತು ಮೆರವಣಿಗೆಯ ನೇತೃತ್ವ ವಹಿಸಿದ್ದರು.


ಕಾರ್ಮಿಕ ಮುಖಂಡ ತಿಲಕ್ ಗೌಡ ಮಾತನಾಡಿ ಕೇಂದ್ರ ಸರ್ಕಾರದ ಕಾರ್ಮಿಕ ನೀತಿ, ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ, ಮಾಲಿಕರು ಕಾರ್ಮಿಕರನ್ನು ಜೀತದಾಳಾಗಿ ದುಡಿಸಿಕೊಳ್ಳುವ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಕೈಗಾರಿಕಾ ಕಾಯ್ದೆಯಲ್ಲಿ, ವೇತನ ಕಾಯ್ದೆಗೆ ತಿದ್ದುಪಡಿ ಬೋನಸ್ ಕಾಯ್ದೆಗೆ ತಿದ್ದುಪಡಿ ಕಾರ್ಮಿಕರ ಸುರಕ್ಷತ ಕಾಯ್ದೆಗೆ ತಿದ್ದುಪಡಿ ಕಾರ್ಮಿಕರಿಗೆ ಸಂಘ ಕಟ್ಟಿಕೊಳ್ಳುವ ಹಕ್ಕುಗಳನ್ನು ಮೊಟಕುಗೊಳಿಸಿರುವುದು, ಕಟ್ಟಡ ಕಾರ್ಮಿಕರ ಸೆಸ್ ಕಾಯ್ದೆಗೆ ತಿದ್ದುಪಡಿಯನ್ನು ತಂದಿದ್ದು ಜೊತೆಗೆ ಕಲ್ಯಾಣ ಮಂಡಳಿಯನ್ನು ಕೇಂದ್ರ ಸರ್ಕಾರದ ಒಡೆತನದಲ್ಲಿ ಇಟ್ಟುಕೊಳ್ಳುವಂತ ಅಂಶಗಳನ್ನು ಒಳಗೊಂಡಿದೆ ಎಂದು ಆಪಾದಿಸಿದರು.


ತಿಮ್ಮಪ್ಪ ಗೌಡ ಮಾತನಾಡಿ ಮಾಲಕರ ಅನುಕೂಲಕ್ಕಾಗಿ ಕಾರ್ಮಿಕರು ದಿನದಲ್ಲಿ ೮ ಗಂಟೆಗಳ ಬದಲು ೧೨ ಗಂಟೆಗಳ ಕಾಲ ದುಡಿಯಬೇಕಿದೆ. ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳೆಯದಲ್ಲಿ ದುಡಿಸಿಕೊಳ್ಳುವಂತೆ ಮಾಡಿದೆ. ಇದರಿಂದ ಮಹಿಳೆಯರ ಆರೋಗ್ಯಕ್ಕೆ, ಭದ್ರತೆಗೆ, ಸುರಕ್ಷತೆಗೆ, ಕುಟುಂಬಕ್ಕೆ ಅಪಾಯಕಾರಿಯಾಗಿದೆ ಎಂದರು.


ರೈತರಿಗೆ ಮಾರಕವಾಗಿರುವ ಭೂ ಮಾಲಕರಿಗೆ, ಮತ್ತು ಕಾರ್ಪೂರೆಟರ್ ಕುಳಗಳಿಗೆ ಅನುಕೂಲ ಮಾಡುವ ಭೂ ಸ್ವ್ವಾದಿನ ಕಾಯ್ದೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಆಪಾಧಿಸಿದರು.
ಪ್ರತಿಭಟನಾ ಸಭೆಯ ನಂತರ ಬ್ರಹತ್ ಸಂಖ್ಯೆಯಲ್ಲಿ ಹೊನ್ನಾವರದ ಶರಾವತಿ ವೃತ್ತದಿಂದ ರೈತರು, ಕಾರ್ಮಿಕರು ಮೆರವಣಿಗೆ ನಡೆಸಿ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು.

ವರದಿ: ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!