April 4, 2026

ಅತ್ಯುತ್ತಮ ಸೇವೆ: ನವೀನ್ ನಾಯ್ಕರಿಗೆ ಮುಖ್ಯಮಂತ್ರಿ ಪದಕ ಪ್ರದಾನ

ಭಟ್ಕಳ: ನಗರದ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ನಾಯ್ಕ ಅವರಿಗೆ ಅತ್ಯುತ್ತಮ ಸೇವೆಗಾಗಿ ಬೆಂಗಳೂರಿನಲ್ಲಿ ನಡೆದ ‘ಪೊಲೀಸ್ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿದರು.


ನವೀನ್ ನಾಯ್ಕ ಅವರು 2015ರ ಅಕ್ಟೋಬರ್‌ನಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಸೇರ್ಪಡೆಯಾಗಿ ಒಂದು ವರ್ಷ ತರಬೇತಿ ಪಡೆದರು. ನಂತರ ಭಟ್ಕಳ ಹಾಗೂ ಯಲ್ಲಾಪುರ ಪೊಲೀಸ್ ಠಾಣೆಗಳಲ್ಲಿ ಪ್ರಾಯೋಗಿಕ ತರಬೇತಿ ಪಡೆದು, 2017ರಲ್ಲಿ ಕಾರವಾರ ಟೌನ್ ಪೊಲೀಸ್ ಠಾಣೆಗೆ ನಿಯೋಜನೆಗೊಂಡರು.
ಸೇವಾ ಅವಧಿಯಲ್ಲಿ ಗೋಕರ್ಣ, ಅಂಕೋಲಾ, ಕುಮಟಾ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಹಲವು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಅವರು ಪಾತ್ರವಹಿಸಿದ್ದಾರೆ. 2024ರಿಂದ ಭಟ್ಕಳ ನಗರ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು, ಗಾಂಜಾ ಹಾಗೂ ಇಲೆಕ್ಟ್ರಾನಿಕ್ ಸಿಗರೇಟ್ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.


ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದ ಆವರಣದಲ್ಲಿ ನಡೆದ ಜಾನುವಾರು ಕಳವು, ಮುಗ್ಧಮ್ ಕಾಲೋನಿಯಲ್ಲಿ ಜಾನುವಾರು ವಧೆ, ತರಕಾರಿ ವ್ಯಾಪಾರಿಗೆ ಬೆದರಿಕೆ ಹಾಗೂ ಕಳಿ ಹನುಮಂತ ದೇವಸ್ಥಾನ ಸಮೀಪ ಮನೆಯಲ್ಲಿಯೇ ನಡೆದ ಚಿನ್ನಾಭರಣ ದೋಚಿದ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಅವರು ಶ್ರಮಿಸಿದ್ದಾರೆ.
ಇತ್ತೀಚೆಗೆ ಭಟ್ಕಳದಲ್ಲಿ ಬೆಳಕಿಗೆ ಬಂದ ಗ್ಲೋಬಲ್ ಎಂಟರ್‌ಪ್ರೈಸೆಸ್ ವಂಚನೆ ಪ್ರಕರಣದ ತನಿಖೆ ನಡೆಸಿ ತಮಿಳುನಾಡು ಮೂಲದ ಆರೋಪಿಗಳನ್ನು ಬಂಧಿಸಿ ಕರೆತರುವಲ್ಲಿ ಅವರ ಪಾತ್ರ ಗಮನಾರ್ಹವಾಗಿದೆ.


ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ ಸಲೀಂ, ಡಿಜಿಪಿಗಳಾದ ಪ್ರಣಬ್ ಮೊಹಾಂತಿ, ಅರುಣ್ ಚಕ್ರವರ್ತಿ, ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ 153 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

About The Author

error: Content is protected !!