April 29, 2026

ಮುರ್ಡೇಶ್ವರ ದೇವಸ್ಥಾನದಲ್ಲಿ ಸರಗಳ್ಳತನ: ಅಂತರ ಜಿಲ್ಲಾ ಆರೋಪಿತಳ ಬಂಧನ

ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನದಲ್ಲಿ ನಡೆದ ಸರಗಳ್ಳತನ ಪ್ರಕರಣವನ್ನು ಪೊಲೀಸರು ಬೇಗನೇ ಪತ್ತೆಹಚ್ಚಿ, ಅಂತರ ಜಿಲ್ಲಾ ಆರೋಪಿತಳನ್ನು ಬಂಧಿಸಿದ್ದಾರೆ.
ಕೇರಳದ ಕನ್ನೂರು ಜಿಲ್ಲೆಯ ನಿವಾಸಿ ಜಯಂತ ಎ.ವಿ. ವೇಣುಗೋಪಾಲ (42) ಅವರು ನೀಡಿದ ದೂರಿನ ಮೇರೆಗೆ, ಅವರ ತಾಯಿಗೆ ಸೇರಿದ ಸುಮಾರು 36 ಗ್ರಾಂ ತೂಕದ ಬಂಗಾರದ ಸರ ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.


ತನಿಖೆ ನಡೆಸಿದ ಪಿಎಸ್‌ಐ ಲೋಕನಾಥ ರಾಥೋಡ ನೇತೃತ್ವದ ತಂಡ ಆರೋಪಿತಳನ್ನು ಪತ್ತೆಹಚ್ಚಿ, ಗದಗ ಜಿಲ್ಲೆಯ ಬೆಟಗೇರಿ ನಿವಾಸಿ ಗಂಗಮ್ಮ (65) ಅವರನ್ನು ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ.
ಬಂಧಿತಳಿಂದ ₹3.28 ಲಕ್ಷ ಮೌಲ್ಯದ 27.600 ಗ್ರಾಂ ತೂಕದ ಬಂಗಾರದ ಎರಡು ಗಟ್ಟಿಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎನ್ (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಗಿರೀಶ ಬಿ ಹಾಗೂ ಸಿಪಿಐ ಜಗದೀಶ ಹಂಚನಾಳ ಅವರ ಮಾರ್ಗದರ್ಶನದಲ್ಲಿ ನಡೆಯಿತು. ತನಿಖಾಧಿಕಾರಿ ಹಣಮಂತ ಬಿರಾದಾರ ಮತ್ತು ಪಿಎಸ್‌ಐ ಲೋಕನಾಥ ರಾಥೋಡ ನೇತೃತ್ವದಲ್ಲಿ ವನಿತಾ ನಾಯ್ಕ, ಮಂಜುನಾಥ ಲಕ್ಕಾಪುರ, ಸಿದ್ದಪ್ಪ ಕಾಂಬಳೆ, ವಿಜಯ ನಾಯ್ಕ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About The Author

error: Content is protected !!