June 23, 2026

ಒಗ್ಗಟ್ಟಿನ ಶಕ್ತಿ: ಸಿದ್ದಾಪುರದ ಹಂಗಾರಖಂಡದಲ್ಲಿ ಹಳ್ಳಿಗರಿಂದಲೇ ಮಾದರಿ ಮಾನ್ಸೂನ್ ಶ್ರಮದಾನ, ವನಮಹೋತ್ಸವ!

ಸಿದ್ದಾಪುರ: ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆಗಳ ಬದಿ ಕಾಡು ಬೆಳೆದು, ಚರಂಡಿ ಮುಚ್ಚಿ ಸಾರ್ವಜನಿಕರು ಪರದಾಡುವುದು ಸಾಮಾನ್ಯ. ಆದರೆ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತ್ಯಾಗಲಿ ಪಂಚಾಯತ್ ವ್ಯಾಪ್ತಿಯ ಹಂಗಾರಖಂಡ ಗ್ರಾಮಸ್ಥರು ಮಾತ್ರ ಸರ್ಕಾರದ ನೆರವಿಗೆ ಕಾಯದೇ, ತಾವೇ ಖುದ್ದಾಗಿ ರಸ್ತೆಗಿಳಿದು ಇಡೀ ತಾಲೂಕಿಗೆ ಮಾದರಿಯಾಗುವಂತಹ ಬೃಹತ್ ಶ್ರಮದಾನ ನಡೆಸಿದ್ದಾರೆ.


ಶ್ರೀ ನಾಗ ಚೌಡೇಶ್ವರಿ ಸೇವಾ ಸಮಿತಿ (ಹಂಗಾರಖಂಡ) ನೇತೃತ್ವದಲ್ಲಿ ಜೂನ್ 21ರ ಭಾನುವಾರ ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ ಊರಿನ ಸಾರ್ವಜನಿಕರು ಒಮ್ಮತದಿಂದ ಸೇರಿ ವಾರ್ಷಿಕ ರಸ್ತೆ ಕೆಲಸ ಹಾಗೂ ಮಾನ್ಸೂನ್ ಶ್ರಮದಾನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು.

ಸಮರೋಪಾದಿಯಲ್ಲಿ ನಡೆದ ರಸ್ತೆ, ಚರಂಡಿ ಸ್ವಚ್ಛತೆ

ಊರಿನ ಸುಮಾರು 40ಕ್ಕೂ ಹೆಚ್ಚು ಪ್ರಜ್ಞಾವಂತ ನಾಗರಿಕರು ಹಾರೆ, ಪಿಕಾಸಿ, ಕತ್ತಿ ಹಿಡಿದು ಒಟ್ಟಾಗಿ ಒಡ್ಡಿಕೊಂಡಿದ್ದರಿಂದ ಇಡೀ ರಸ್ತೆ ಸಂಪೂರ್ಣ ಕಾಯಕಲ್ಪ ಪಡೆದಿದೆ.

ಶಿರಸಿ – ಸಿದ್ದಾಪುರ ಮುಖ್ಯ ರಸ್ತೆಯ ತ್ಯಾಗಲಿ ತಂಗುದಾಣದಿಂದ ಹಂಗಾರಖಂಡದ ವರೆಗೆ, ಸಾಸ್ಮೆಕಟ್ಟೆ ರಸ್ತೆ (ಗವಿನಗುಡ್ಡ – ಹಂಗಾರಖಂಡ ಪ್ರಾಥಮಿಕ ಶಾಲೆ) ಹಾಗೂ ಇಡುಕೈ ವರೆಗಿನ ರಸ್ತೆಯ ಅಕ್ಕಪಕ್ಕದ ಪೊದೆಗಳನ್ನು ಸವರಿ ಸ್ವಚ್ಛಗೊಳಿಸಲಾಯಿತು.

ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹರಿಯದಂತೆ ಪಕ್ಕದ ಚರಂಡಿಗಳನ್ನು ಹೂಳೆತ್ತಿ ಸರಿಪಡಿಸಲಾಯಿತು.

ಚಾಲ್ತಿಯಲ್ಲಿರುವ (ಲೈವ್) ಕರೆಂಟ್ ಲೈನ್‌ಗಳಿಗೆ ತಾಗಿ ಅಪಾಯ ತಂದೊಡ್ಡುವಂತಿದ್ದ ಗಿಡ-ಮರಗಳ ಟೊಂಗೆಗಳನ್ನು ಅತ್ಯಂತ ಜಾಗರೂಕತೆಯಿಂದ ಕತ್ತರಿಸಿ ಮುನ್ನೆಚ್ಚರಿಕೆ ವಹಿಸಲಾಯಿತು.

    ಹಸಿರು ಉಸಿರು: ವನಮಹೋತ್ಸವದ ಸಂಕಲ್ಪ

    ಕೇವಲ ರಸ್ತೆ ಸ್ವಚ್ಛಗೊಳಿಸುವುದಷ್ಟೇ ಅಲ್ಲದೇ, ಪ್ರಕೃತಿಯನ್ನು ರಕ್ಷಿಸುವ ಉದ್ದೇಶದಿಂದ ಊರಿನ ವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

    ದಿನವಿಡೀ ಕಷ್ಟಪಟ್ಟು ದುಡಿದ ಗ್ರಾಮಸ್ಥರಿಗೆ ಸಮಿತಿಯ ವತಿಯಿಂದಲೇ ಬೆಳಗಿನ ತಿಂಡಿ, ಚಹಾ ಹಾಗೂ ತಂಪು ಪಾನೀಯಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

    ಹತ್ತು ಹಳ್ಳಿಗಳಿಗೆ ಹಂಗಾರಖಂಡವೇ ಮಾದರಿ!

    ಶ್ರೀ ನಾಗ ಚೌಡೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದರು. ಊರಿನ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಕೈಜೋಡಿಸಿದ ಹಂಗಾರಖಂಡದ ಸಾರ್ವಜನಿಕರ ಈ ಒಗ್ಗಟ್ಟು ಸುತ್ತಮುತ್ತಲಿನ ಹತ್ತು ಗ್ರಾಮಗಳಿಗೆ ಮಾತ್ರವಲ್ಲದೇ ಇಡೀ ತಾಲೂಕಿಗೆ ಹೆಮ್ಮೆ ತರುವಂತದ್ದಾಗಿದೆ.

    About The Author

    error: Content is protected !!