June 24, 2026

ತಂತ್ರಜ್ಞಾನ ಎಷ್ಟೇ ಬೆಳೆದರೂ ಜನರು ಬದುಕಲು ರೈತರು ಬೆಳೆದ ಬೆಳೆಯೇ ಬೇಕು; ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಕುಮಟಾ: “ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರವು ಕಡೆಗಣನೆಗೆ ಒಳಗಾಗುತ್ತಿದೆ. ಆದರೆ, ಐಟಿ-ಸಾಫ್ಟ್‌ವೇರ್ ಕಂಪನಿಗಳು ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಾವೆಲ್ಲರೂ ಊಟ ಮಾಡಲು ಕೊನೆಗೆ ರೈತರು ಬೆಳೆದ ಬೆಳೆಯೇ ಬೇಕು” ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದರು.
ಬಿಜೆಪಿ ರೈತಮೋರ್ಚಾ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಕುಮಟಾದ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಅವರ ಕಡಸಾಲಗದ್ದೆಯ ತೋಟದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನೈಸರ್ಗಿಕ ಕೃಷಿ ಕಾರ್ಯಾಗಾರ ಹಾಗೂ ಕೃಷಿ ಸಾಧಕರಿಗೆ ಸನ್ಮಾನ’ ಕಾರ್ಯಕ್ರಮವನ್ನು ಕಾಳುಮೆಣಸಿನ ಗಿಡಕ್ಕೆ ರಸಸಾರ ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಹಿತ ಕಾಯಲು ಕೇಂದ್ರದ ನಾನಾ ಯೋಜನೆಗಳು

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದ ಕಾಗೇರಿ, “ಕೇಂದ್ರ ಸರ್ಕಾರವು ‘ಕಿಸಾನ್ ಸಮ್ಮಾನ್ ನಿಧಿ’ಯ ಮೂಲಕ ವರ್ಷಕ್ಕೆ 6,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿದೆ. ಮಣ್ಣಿನ ಪರೀಕ್ಷೆ ನಡೆಸಿ ರೈತರಿಗೆ ‘ಸಾಯಿಲ್ ಹೆಲ್ತ್ ಕಾರ್ಡ್’ (ಮಣ್ಣಿನ ಆರೋಗ್ಯ ಕಾರ್ಡ್) ವಿತರಿಸಲಾಗಿದ್ದು, ಪ್ರತಿಯೊಬ್ಬ ರೈತರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರದ ‘ಪಿ.ಎಂ ಪ್ರಣಾಮ್’ ಯೋಜನೆ ಹಾಗೂ ‘ಖೇತ್ ಬಚಾವೋ’ (ಹೊಲ ಉಳಿಸಿ) ಅಭಿಯಾನದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಕೃಷಿಯಲ್ಲಿ ಸಾಧನೆ ಸಾಧ್ಯ: ಶಾಸಕ ದಿನಕರ ಶೆಟ್ಟಿ

ಶಾಸಕ ದಿನಕರ ಶೆಟ್ಟಿ ಮಾತನಾಡಿ, “ಅಂತ್ರವಳ್ಳಿಯಲ್ಲಿ ಎನ್.ಡಿ. ಹೆಗಡೆಯವರು 18 ರಿಂದ 20 ಎಕರೆ ಜಾಗದಲ್ಲಿ ಅತ್ಯುತ್ತಮವಾಗಿ ಕಾಳುಮೆಣಸು ಮತ್ತು ಅಡಿಕೆಯನ್ನು ಬೆಳೆದು ಕೃಷಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಈಗ ಎಲ್ಲೆಡೆ ರಾಸಾಯನಿಕಗಳ ಬಳಕೆ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಾಸಾಯನಿಕ ಮುಕ್ತ ಸಾವಯವ ಕೃಷಿಯ ಮೂಲಕವೇ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ” ಎಂದರು.

ನೈಸರ್ಗಿಕ ಕಾಳುಮೆಣಸಿಗೆ ಜಾಗತಿಕ ಬೇಡಿಕೆ

ಅನುಭವ ಹಂಚಿಕೊಂಡ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ, “ನಾವು 40 ರಿಂದ 50 ಎಕರೆಯಲ್ಲಿ ನೈಸರ್ಗಿಕ ವಿಧಾನದಿಂದ ಸುಮಾರು 500 ಕ್ವಿಂಟಾಲ್ ಕಾಳುಮೆಣಸು ಬೆಳೆದಿದ್ದೇವೆ. ಕೆಲ ತಿಂಗಳ ಹಿಂದೆ ನಮ್ಮ ತೋಟಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರತಿನಿಧಿಗಳು, ರಾಸಾಯನಿಕ ಮುಕ್ತವಾದ, ಬೆಟ್ಟದ ಸಾಲಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಳುಮೆಣಸನ್ನು ಒದಗಿಸಲು ಸಾಧ್ಯವೇ ಎಂದು ಕೇಳಿದ್ದರು. ಹಿಂದೆ ಹೇಗೆ ವಿದೇಶಿಗರು ಕಾಳುಮೆಣಸನ್ನು ಹುಡುಕಿಕೊಂಡು ಭಾರತಕ್ಕೆ ಬರುತ್ತಿದ್ದರೋ, ಅಂತಹ ವಾತಾವರಣ ಮತ್ತೆ ನಿರ್ಮಾಣವಾಗಬೇಕಿದೆ” ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಸಾವಯವ ಕೃಷಿ ಪದ್ಧತಿಯನ್ನು ಬಳಸಿ ಯಾವ ರೀತಿ ಉತ್ತಮ ಬೆಳೆ ತೆಗೆಯಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಡುವ ಹಾಗೂ ಅವರನ್ನು ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ರಾಸಾಯನಿಕ ಕೃಷಿಯಿಂದ ಹೆಚ್ಚಿದ ರೋಗದ ಭೀತಿ

ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, “ಹಿಂದೆ ನಮ್ಮ ಹಿರಿಯರ ಕಾಲದಲ್ಲಿ ‘ಕೃಷಿ ಉತ್ತಮ’ ಎನ್ನುವ ಮನೋಭಾವ ಇತ್ತು. ಆದರೆ ಈಗ ಕಾಲ ಬದಲಾಗಿ ಕೃಷಿಕರಿಗೆ ಹೆಣ್ಣು ಸಿಗುತ್ತಿಲ್ಲ, ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ನಾವು ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಬಿಟ್ಟು ರಾಸಾಯನಿಕ ಕೃಷಿಗೆ ಮೊರೆ ಹೋದಾಗಿನಿಂದ ಈ ಹಿನ್ನಡೆ ಆರಂಭವಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾದಂತೆ ನಾವು ತಿನ್ನುವ ಆಹಾರವೆಲ್ಲವೂ ವಿಷಮುಕ್ತವಾಗಿರದೆ ರೋಗಕಾರಕವಾಗುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.

ವಿವಿಧ ಕೃಷಿ ಸಾಧಕರಿಗೆ ಗೌರವ ಸನ್ಮಾನ

ಇದೇ ಸಂದರ್ಭದಲ್ಲಿ ವಿವಿಧ ಕೃಷಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು:

  • ನಾಗು ಗೌಡ ಕಡ್ನೀರು (ಪ್ರಗತಿಪರ ಕೃಷಿಕ)
  • ಸಂತೋಷ ಹೆಗಡೆ ಶಿರಸಿ (ಜೇನು ಕೃಷಿ ಸಾಧಕ)
  • ವಿಷ್ಣು ಜಟ್ಟು ಗೌಡ ಮೂರುರೂ (ಕೃಷಿ ಸಾಧಕ)
  • ಲಕ್ಷ್ಮೀನಾರಾಯಣ ಹೆಗಡೆ ಕಲ್ಲಬ್ಬೆ (ಕೃಷಿ ಸಾಧಕ)
  • ಮಂಜುನಾಥ ಬೀರಾ ಗೌಡ ಕಂದೊಳ್ಳಿ (ಕೃಷಿ ಸಾಧಕ)
  • ಎನ್.ಡಿ. ಹೆಗಡೆ ಅಂತ್ರವಳ್ಳಿ (ಪ್ರಗತಿಪರ ಕೃಷಿಕ)
  • ನಾಗರಾಜ ನಾಯ್ಕ ಕಾಗಲ (ಭತ್ತದ ವೈವಿಧ್ಯಮಯ ತಳಿ ಬೆಳೆದ ಸಾಧಕ

  • ವೇದಿಕೆಯಲ್ಲಿ ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾದ ಗಣಪತಿ ಹೆಗಡೆ, ಕುಮಾರ ಭಟ್, ಮಾಜಿ ಜಿ.ಪಂ. ಸದಸ್ಯ ಗಜಾನನ ಪೈ, ಡಾ. ಜಿ.ಜಿ. ಹೆಗಡೆ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಎಲ್ಲಾ ತಾಲೂಕಿನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಷ್ಣ್ಣುಮೂರ್ತಿ ಹೆಗಡೆ ಕೊನೆಯಲ್ಲಿ ವಂದಿಸಿದರು.

ರೈತಮೋರ್ಚಾ ಕಾರ್ಯಕ್ರಮಕ್ಕೆ ಸಂಸದ ಕಾಗೇರಿ ಶ್ಲಾಘನೆ
“ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಘಟಕವು ಇಂತಹ ಉತ್ತಮ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ. ಸಾವಯವ ಕೃಷಿಯಲ್ಲಿ ಅದ್ಭುತ ಇಳುವರಿ ಪಡೆದು ಸಾಧನೆ ಮಾಡಿದ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆಯವರನ್ನು ಹಾಗೂ ಜಿಲ್ಲೆಯ ವಿವಿಧ ಕೃಷಿ ಸಾಧಕರನ್ನು ಸನ್ಮಾನಿಸಿ ಗೌರವಿಸಿರುವುದು ಇತರ ರೈತರಿಗೆ ದೊಡ್ಡ ಮಾದರಿಯಾಗಿದೆ.”
ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು

ಊಟದಿಂದ ಬಂತು ರೋಗ, ಮಾತಿನಿಂದ ಬಂತು ಜಗಳ!
“ನಾವು ಸೇವಿಸುವ ಇಂದಿನ ಆಹಾರ ಪದ್ಧತಿಯಿಂದಲೇ ಬಹುತೇಕ ಆರೋಗ್ಯ ಸಮಸ್ಯೆಗಳು ಬರುತ್ತಿವೆ. ರಾಸಾಯನಿಕಯುಕ್ತ ಆಹಾರದಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿದ್ದು, ಕ್ಯಾನ್ಸರ್‌ನಂತಹ ಹೆಮ್ಮಾರಿ ರೋಗಗಳು ಹೆಚ್ಚಾಗಲು ಕಾರಣವಾಗಿದೆ. ದೇಶದ ಪ್ರಧಾನಮಂತ್ರಿಯವರ ಕರೆಯಂತೆ ರೈತರು ನೈಸರ್ಗಿಕ ಹಾಗೂ ಸಾವಯವ ಕೃಷಿ ವಿಧಾನವನ್ನು ಅಳವಡಿಸಿಕೊಳ್ಳಲಿ ಎಂಬ ಆಶಯದಿಂದ ಈ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.”
ಅನಂತಮೂರ್ತಿ ಹೆಗಡೆ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರು

About The Author

error: Content is protected !!