June 23, 2026

ದಾಂಡೇಲಿ: ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ತೀವ್ರ ವಿರೋಧ; ಹೆಸ್ಕಾಂ ಮೂಲಕ ಕೆಇಆರ್‌ಸಿಗೆ ಆಕ್ಷೇಪಣಾ ಅರ್ಜಿ ಸಲ್ಲಿಕೆ

ದಾಂಡೇಲಿ: ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿ ದಾಂಡೇಲಿಯ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ, ವಿವಿಧ ಸ್ಥಳೀಯ ಸಂಘ-ಸಂಸ್ಥೆಗಳು, ನಿವೃತ್ತ ಪಿಂಚಣಿದಾರರು ಹಾಗೂ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಹೆಸ್ಕಾಂ (HESCOM) ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ಪ್ರತಿಭಟನಾಕಾರರು ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪುರುಷೋತ್ತಮ ಮಲ್ಯ ಅವರಿಗೆ ಆಕ್ಷೇಪಣಾ ಅರ್ಜಿಯನ್ನು ನೀಡಿ, ಅದನ್ನು ತಕ್ಷಣವೇ ಬೆಂಗಳೂರಿನ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ರವಾನಿಸುವಂತೆ ಮನವಿ ಮಾಡಿದರು.

ಖಾಸಗೀಕರಣದ ವಿರುದ್ಧ ಒಗ್ಗಟ್ಟಿನ ಹೋರಾಟ

ಸರ್ಕಾರದ ಖಾಸಗೀಕರಣ ನೀತಿಯಿಂದ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಭಾರಿ ಅನ್ಯಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಈ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರಿಂದ ಆಕ್ಷೇಪಣಾ ಅರ್ಜಿಯನ್ನು ಸ್ವೀಕರಿಸಿದ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪುರುಷೋತ್ತಮ ಮಲ್ಯ ಅವರು, ಇದನ್ನು ಮೇಲಧಿಕಾರಿಗಳ ಹಾಗೂ ಸಂಬಂಧಿತ ಆಯೋಗದ ಗಮನಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ದಾಂಡೇಲಿ ಸಮಗ್ರ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಮ್ ಖಾನ್, ಉಪಾಧ್ಯಕ್ಷ ಅಶೋಕ್ ಪಾಟೀಲ್, ಪ್ರಮುಖರಾದ ಮಹಮ್ಮದ್ ಗೌಸ್ ಬೆಟಗೇರಿ, ರಾಘವೇಂದ್ರ ಗಡಪ್ಪನವರ್, ಸಮೀರ್ ಶೇಕ್, ಫಾರೂಕ್ ಶೇಖ್ ಭಾಗವಹಿಸಿದ್ದರು.

ಕಾರ್ಮಿಕ ಸಂಘಟನೆಯ ಮುಖಂಡ ರಾಜೇಸಾಬ್ ಕೇಸ್ನೂರ್, ದಲಿತ ಮುಖಂಡ ಚಂದ್ರಕಾಂತ್ ನಡೆಗೇರ್, ಮದಾರ್ ಸಾಬ್ ಬೂದಿಹಾಳ, ಕಾಂಗ್ರೆಸ್ ಪಕ್ಷದ ಮುಖಂಡ ರಫೀಕ್ ಖಾನ್ ಜೋಯಿಡಾ, ತಾಲೂಕಿನ ವ್ಯಾಪಾರಿ ಸಂಘದ ಮುಖಂಡ ರಫೀಕ್ ಖಾಜಿ ಸೇರಿದಂತೆ ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು ಹಾಗೂ ನೂರಾರು ಸದಸ್ಯರು ಪಾಲ್ಗೊಂಡಿದ್ದರು.

ಹೆಸ್ಕಾಂ ಅಧಿಕಾರಿಗಳ ಉಪಸ್ಥಿತಿ

ಈ ಸಂದರ್ಭದಲ್ಲಿ ಹೆಸ್ಕಾಂ ಲೆಕ್ಕಾಧಿಕಾರಿ ಕಿರಣ್ ಬಿ. ಆಚಾರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದೀಪಕ್ ನಾಯಕ, ಅಧಿಕಾರಿಗಳಾದ ಪರಶುರಾಮ ಉಪ್ಪಾರ, ಸಹಾಯಕ ಇಂಜಿನಿಯರ್ ಉದಯ ಕುಮಾರ್, ಸಹಾಯಕ ಲೆಕ್ಕಾಧಿಕಾರಿ ಸಚಿನ್ ನಾಡಕರ್ಣಿ ಉಪಸ್ಥಿತರಿದ್ದರು. ಅಲ್ಲದೆ ಕೇಂದ್ರ ಸಮಿತಿಯ ಸದಸ್ಯ ಜಹೀರುದ್ದೀನ್ ರೋಣ, ಸ್ಥಳೀಯ ಸಮಿತಿಯ ಅಧ್ಯಕ್ಷ ಸುಭಾಷ್ ಗೌಡ, ಕಾರ್ಯದರ್ಶಿ ಕುಮಾರ್ ಕರಗಯ್ಯ ಸೇರಿದಂತೆ ಹೆಸ್ಕಾಂ ಇಲಾಖೆಯ ನೌಕರರು ಉಪಸ್ಥಿತರಿದ್ದರು.

About The Author

error: Content is protected !!