June 24, 2026

ಪರಿಸರ ಸಂರಕ್ಷಣೆಗೆ ಅರಣ್ಯವಾಸಿಗಳ ಪಣ; ೧೩ ಗ್ರಾ.ಪಂ ವ್ಯಾಪ್ತಿಯಲ್ಲಿ ದಶಲಕ್ಷ ಗಿಡ ನೆಡುವ ಅಭಿಯಾನಕ್ಕೆ ಚಾಲನೆ

ಭಟ್ಕಳ: ಪರಿಸರ ಜಾಗೃತಿ ಮತ್ತು ಪ್ರಕೃತಿ ಸಂರಕ್ಷಣೆಯ ಮಹತ್ತರ ಉದ್ದೇಶದಿಂದ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ದಶ ಲಕ್ಷ ಗಿಡ ನೆಡುವ ಅಭಿಯಾನ’ಕ್ಕೆ ತಾಲೂಕಿನಾದ್ಯಂತ ಅತ್ಯಂತ ಯಶಸ್ವಿ ಚಾಲನೆ ನೀಡಲಾಗಿದೆ. ತಾಲೂಕಿನ ೧೩ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫೭ ವಿವಿಧ ಹಳ್ಳಿಗಳಲ್ಲಿ ಅರಣ್ಯವಾಸಿಗಳು ಅತ್ಯಂತ ಆಸಕ್ತಿಯಿಂದ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಕಟಣೆ ತಿಳಿಸಿದೆ.


ತಾಲೂಕಿನ ಮಾರುಕೇರಿ, ಯಲ್ಲೊಡಿಕಾರ್, ಮಾವಿನಕುರ್ವೆ, ಬಂದರ್, ಜಾಲಿ, ಹೆಬಳೆ, ಬೆಂಗ್ರೆ, ಕೋಣಾರ, ಬೆಳಕೆ, ಹಾಡುವಳ್ಳಿ, ಕೊಪ್ಪ, ಕಾಯ್ಕಿಣಿ ಹಾಗೂ ಮುಟ್ಟಳ್ಳಿ ಸೇರಿದಂತೆ ಒಟ್ಟು ೧೩ ಗ್ರಾಮ ಪಂಚಾಯತಿಗಳ ವಿವಿಧ ಗ್ರಾಮಗಳಲ್ಲಿ ಅರಣ್ಯವಾಸಿಗಳು ಏಕಕಾಲದಲ್ಲಿ ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.

ಅಭಿಯಾನದ ನೇತೃತ್ವ ವಹಿಸಿದ ಪ್ರಮುಖರು:

ವಿವಿಧ ಹಳ್ಳಿಗಳಲ್ಲಿ ನಡೆದ ಈ ಪರಿಸರ ಸ್ನೇಹಿ ಕಾರ್ಯಕ್ರಮದ ಯಶಸ್ವಿ ಮುನ್ನಡೆಗಾಗಿ ಪ್ರಮುಖರಾದ ಶಂಕರ ನಾಯ್ಕ ಹೆಬಳೆ, ಪಾಂಡುರಂಗ ನಾಯ್ಕ ಬೆಳಕೆ, ಮಂಜುನಾಥ ಮರಾಠಿ ಹಾಡುವಳ್ಳಿ, ಚಂದ್ರಹಾಸ ನಾಯ್ಕ ಮಾವಳ್ಳಿ, ವೆಂಕಟೇಶ, ವಿದ್ಯಾ ಬೆಳಕೆ, ವೆಂಕಟೇಶ ದೇವಡಿಗ, ಶಂಕರ ಮಂಜಪ್ಪ ನಾಯ್ಕ ಯಲ್ಲೊಡಿಕಾರ್, ಶಬ್ಬೀರ್ ಭಟ್ಕಳ, ಹೇಮಂತ, ನಾಗರಾಜ, ಶ್ರೀಧರ ಸೋಮಯ್ಯ ಗೊಂಡ ಕೋಣಾರ, ದಾನ ಶರೀಫ್ ಹೆಬಳೆ, ಲಕ್ಷ್ಮಿ ಮೊಗೇರ್ ಬೆಳಕೆ ಹಾಗೂ ಪಾರ್ವತಿ ನಾರಾಯಣ ನಾಯ್ಕ ಬೆಳಕೆ ಮುಂತಾದವರು ಮುಂಚೂಣಿಯಲ್ಲಿ ನಿಂತು ನೇತೃತ್ವ ವಹಿಸಿದ್ದರು.


ತಾಲೂಕಿನ ಹಸಿರು ವಲಯವನ್ನು ವೃದ್ಧಿಸುವ ಹಾಗೂ ಅರಣ್ಯ ಸಂರಕ್ಷಣೆಯ ಸಂದೇಶವನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಈ ಅಭಿಯಾನವು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

About The Author

error: Content is protected !!