September 12, 2026

ಭಟ್ಕಳ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ₹1.30 ಕೋಟಿ ಲಾಭ: 60ನೇ ವಾರ್ಷಿಕ ಮಹಾಸಭೆ ಯಶಸ್ವಿ

ಭಟ್ಕಳ: ತಾಲೂಕಿನ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತವು 2025-26ನೇ ಸಾಲಿನಲ್ಲಿ ₹1.30 ಕೋಟಿಗೂ ಅಧಿಕ (₹1,30,59,607.88) ಭಾರಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಈರಪ್ಪ ನಾಯ್ಕ ಪ್ರಕಟಿಸಿದರು. ಪಟ್ಟಣದ ಶ್ರೀ ವೀರಾಂಜನೇಯ ಧರ್ಮಛತ್ರದಲ್ಲಿ ಶನಿವಾರ ನಡೆದ ಸಂಘದ 60ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ಶೇರು ಬಂಡವಾಳವು ₹561.05 ಲಕ್ಷಕ್ಕೇರಿದ್ದು, ಠೇವಣಿ ಮೊತ್ತ ₹8,412.79 ಲಕ್ಷಕ್ಕೆ ತಲುಪಿದೆ. ನಿಯಂತ್ರಿತ ಆಹಾರ ಧಾನ್ಯಗಳ ವಹಿವಾಟಿನಿಂದ ₹6.11 ಲಕ್ಷ ವ್ಯಾಪಾರಿ ಲಾಭ ಬಂದಿದೆ. ವರ್ಷದ ಅವಧಿಯಲ್ಲಿ ₹312.42 ಲಕ್ಷ ಕೃಷಿ ಸಾಲ ಹಾಗೂ ₹7,972 ಲಕ್ಷ ಕೃಷಿಯೇತರ ಸಾಲ ವಿತರಿಸಲಾಗಿದೆ.

ಸಂಘದಿಂದ ನೀಡಲಾದ ಸಾಲದಲ್ಲಿ ₹954.34 ಲಕ್ಷ ಸಾಲ ಕಟ್‌ಬಾಕಿಯಾಗಿದ್ದು, ಇದು ಆರ್ಥಿಕ ಪ್ರಗತಿಗೆ ತೊಡಕಾಗುವ ಮುನ್ನ ಸಾಲಗಾರ ಸದಸ್ಯರು ನಿಗದಿತ ಅವಧಿಯೊಳಗೆ ಮರುಪಾವತಿಸಬೇಕು ಎಂದು ಅಧ್ಯಕ್ಷರು ಕೋರಿದರು.

ನಾಲ್ಕು ಶಾಖೆಗಳ ಕೊಡುಗೆ: ಭಟ್ಕಳ ಪ್ರಧಾನ ಕಚೇರಿಯಿಂದ ₹76.98 ಲಕ್ಷ, ಪುರವರ್ಗ ಶಾಖೆಯಿಂದ ₹13.50 ಲಕ್ಷ, ಮುಂಡಳ್ಳಿ ಶಾಖೆಯಿಂದ ₹28.02 ಲಕ್ಷ ಹಾಗೂ ಮುಟ್ಟಳ್ಳಿ ಶಾಖೆಯಿಂದ ₹12.10 ಲಕ್ಷ ಲಾಭ ದಾಖಲಾಗಿದೆ.

ಮಹಾಸಭೆಯ ಸಂದರ್ಭದಲ್ಲಿ ಮುಟ್ಟಳ್ಳಿ, ತಲಾನ, ಮುಂಡಳ್ಳಿ ಸರ್ಕಾರಿ ಶಾಲೆಗಳಿಗೆ ಹಾಗೂ ಪುರವರ್ಗ ಅಂಗನವಾಡಿಗೆ ಡೆಸ್ಕ್ ಮತ್ತು ಬೆಂಚ್‌ಗಳನ್ನು ವಿತರಿಸಲಾಯಿತು. ಷೇರುದಾರ ಗೋವಿಂದ ನಾಯ್ಕ ಮಾತನಾಡಿ, ಅಧ್ಯಯನ ಪ್ರವಾಸದ ಅನುಭವಗಳನ್ನು ಸಂಸ್ಥೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ಹಾಗೂ ಪುರವರ್ಗ ಶಾಖೆಯ ಲಾಭಾಂಶ ಹೆಚ್ಚಿಸಲು ಸಲಹೆ ನೀಡಿದರು.

    ಮುಖ್ಯ ಕಾರ್ಯನಿರ್ವಾಹಕ ರಮೇಶ ನಾಯ್ಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ರಾಜೇಶ ನಾರಾಯಣ ದೇವಾಡಿಗ, ನಿರ್ದೇಶಕರಾದ ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

    About The Author

    error: Content is protected !!