ಹೋನ್ನಾವರ; ಲಲಿತಾ ಹೆಗಡೆಯವರು ನಮ್ಮ ತಾಲೂಕಿನ ಒಬ್ಬ ಉತ್ತಮ ಪ್ರತಿಭಾನ್ವಿತ ಶಿಕ್ಷಕಿ. ಅದಕ್ಕೆ ಪೂರಕವಾಗಿ ಲಲಿತಾ ಹೆಗಡೆಯವರು ತಮ್ಮ ಬೀಳ್ಕೊಡುವ ಸಂದರ್ಭದಲ್ಲಿ ಕೆರೆಕೋಣ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕಾಣಿಕೆ ಡಬ್ಬವನ್ನು ಕೊಡುವುದರ ಮೂಲಕ, ಮಕ್ಕಳಿಗೆ ಉಳಿತಾಯದ ಮನೋಭಾವವನ್ನು ಬೆಳೆಸುವ ವಿನೂತನ ಕಾರ್ಯ ಮಾಡಿರುತ್ತಾರೆ. ಇದು ಅತ್ಯಂತ ವಿಶೇಷವಾದದ್ದು ಮಾತ್ರವಲ್ಲ ಅವರ ಆಲೋಚನೆ ಮಹತ್ವವಾದದ್ದು ಎಂದು ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಹೇಳಿದರು.
ಅವರು ಕೆರೆಕೋಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಎಸ್.ಡಿ.ಎಂ.ಸಿ., ಸ್ಪಂದನ ಹಳೆ ವಿದ್ಯಾರ್ಥಿಗಳ ಸಂಘ , ಶಿಕ್ಷಕರು, ಪಾಲಕರು ಹಾಗೂ ಊರ ನಾಗರಿಕರು ಏರ್ಪಡಿಸಿದ 27 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ಸಿ.ಆರ್.ಪಿ.ಯಾಗಿ ವರ್ಗಾವಣೆಗೊಂಡ ಶಿಕ್ಷಕಿ ಲಲಿತಾ ಹೆಗಡೆಯವರ ಬೀಳ್ಕೊಡುಗೆ ಮತ್ತು CCTV ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೆರೆಕೋಣ ಶಾಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ CCTV ಅಳವಡಿಸಿರುವುದರ ಬಗ್ಗೆ ಮಾತನಾಡಿ, ಮೊದಲು ಸರ್ಕಾರಿ ಶಾಲೆಗಳಲ್ಲಿ CCTV ಅಳವಡಿಸುವ ಪರಿಕಲ್ಪನೆ ಇರಲಿಲ್ಲ ಯಾಕೆಂದರೆ ಸರ್ಕಾರಿ ಶಾಲೆಗಳಿಗೆ ಬಜೆಟ್ ಇರಲಿಲ್ಲ, ಆದರೆ ಖಾಸಗಿ ಶಾಲೆಯವರು CCTVಯನ್ನು ಅಳವಡಿಸಿದ್ದರು. ಇತ್ತೀಚಿನ ದಿನಗಳಲ್ಲಿ SSLC ಪರೀಕ್ಷೆ ನಡೆಯುವ ಸರ್ಕಾರಿ ಶಾಲೆಗಳಲ್ಲೂ, ವಿದ್ಯಾರ್ಥಿಗಳು ನಕಲು ಮಾಡುವುದನ್ನು ತಪ್ಪಿಸಲು CCTV ಅಳವಡಿಸುತ್ತಾರೆ. ಆದರೆ ಕೆರೆಕೋಣ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಈ ಕಾರ್ಯ ಮಾಡಿದೆ, ಶ್ಲಾಘನೀಯ ಎಂದು ಹೇಳಿ ಈಗ CCTV ಅವಶ್ಯಕತೆ ಎಲ್ಲಾ ಶಾಲೆಗೂ ಇದೆ ಮತ್ತು ಇಂದಿನ ದಿನಗಳಲ್ಲಿ ಶಾಲೆ ಮತ್ತು ಮಕ್ಕಳ ಸುರಕ್ಷತೆಗೆ CCTV ಅನಿವಾರ್ಯ ಮತ್ತು ಪ್ರಸ್ತುತವೂ ಹೌದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಮುಂದುವರಿದು ಇಲ್ಲಿಯ ಹಳೆ ವಿದ್ಯಾರ್ಥಿಗಳ ಸಂಘ ಅತ್ಯಂತ ಕ್ರಿಯಾಶೀಲವಾಗಿದೆ, ಇಷ್ಟೊಂದು ಕ್ರಿಯಾಶೀಲವಾದ ಹಳೆ ವಿದ್ಯಾರ್ಥಿ ಸಂಘ ಇಡೀ ತಾಲೂಕಿನಲ್ಲಿ ಇಲ್ಲ ಎಂದರು.
ಇದೇ ಸಂದರ್ಭದಲ್ಲಿ ಸನ್ಮಾನಿತರಾದ ನಿವೃತ್ತ ಶಿಕ್ಷಕ ಉಮೇಶ ನಾಯ್ಕ ಬರ್ಗಿ ಕುರಿತು ಮಾತನಾಡಿ, ಉಮೇಶ ನಾಯ್ಕರವರು. ಕೆರೆಕೋಣ ಶಾಲೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ ಶಾಲೆಯ ಉನ್ನತಿಗೆ ಕಾರಣರಾಗಿದ್ದರು ಎಂದರು.
ಕೆರೆಕೋಣ ಹಳೆ ವಿದ್ಯಾರ್ಥಿಗಳ ಸಂಘ ದಾನಿಗಳ ಸಹಾಯದಿಂದ ಶಾಲೆಗೆ ಕೊಡುಗೆಯಾಗಿ ನೀಡಿದ CCTV ಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಜನಾರ್ಧನ ಕಾಣಕೋಣಕರ್ ಮತ್ತು ನಿವೃತ್ತ ಶಿಕ್ಷಕ ಉಮೇಶ ನಾಯ್ಕ ಬರ್ಗಿ ಜಂಟಿಯಾಗಿ ಉದ್ಘಾಟಿಸಿದರು.
ನಂತರ ಮಾತನಾಡಿದ ಉಮೇಶ ನಾಯ್ಕ, ವರ್ಗಾವಣೆಗೊಂಡ ಲಲಿತಾ ಹೆಗಡೆಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, CCTV ಉದ್ಘಾಟನೆಗೆ ಬಂದಿದ್ದ ನನಗೆ ಸನ್ಮಾನಿಸಿ ಪ್ರೀತಿ ತೋರಿಸಿದ್ದೀರಿ ಎಂದು ಹೇಳಿ ಈ ಶಾಲೆಯಲ್ಲಿ ವೃತ್ತಿ ಮಾಡಿದ ಅನುಭವ ಅವಿಸ್ಮರಣೀಯ ವಾದುದು ಎಂದರು. ಈ ಶಾಲೆಯಿಂದ ಬೀಳ್ಕೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಲಲಿತಾ ಹೆಗಡೆ, ಕೆರೆಕೋಣ ಶಾಲೆಯ ಮಕ್ಕಳು, ಪಾಲಕರು, ಎಸ್ ಡಿ ಎಂ ಸಿ, ಹಳೆ ವಿದ್ಯಾರ್ಥಿಗಳ ಸಂಘ ನನಗೆ ನೀಡಿದ ಸಹಕಾರವನ್ನು ನೆನೆಸಿಕೊಳ್ಳಲೇಬೇಕು ಇದು ಅವಿಸ್ಮರಣೆಯ ಎಂದು ಹೇಳಿ ಭಾವುಕರಾದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ.ಆರ್.ಪಿ. ವೀಣಾ ಭಂಡಾರಿ, ಸಾಲ್ಕೋಡ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ರಾಮ ಭಂಡಾರಿ ವೇದಿಕೆ ಮೇಲೆ ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕಿ ಗಾಯತ್ರಿ ನಾಯ್ಕ, ಶ್ರೀಧರ ಹೆಗಡೆ, ಗಣೇಶ ಭಂಡಾರಿ, ಮಂಜುನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಶಂಕರ ಭಟ್ಟ ಮತ್ತು ವಿದ್ಯಾರ್ಥಿಗಳಾದ ಶ್ರೇಯಸ್, ಸ್ನೇಹಾ, ಮಯೂರ, ಅಕುಲ್ ಮತ್ತು ಸಮರ್ಥ ತಮ್ಮ ನೆಚ್ಚಿನ ಶಿಕ್ಷಕಿ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರೆಕೋಣ ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ ಅರ್ಚನಾ ಭಾಸ್ಕರ್ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ನೆನಪಿಗಾಗಿ ಶಿಕ್ಷಕಿ ಲಲಿತಾ ಹೆಗಡೆಯವರು ಶಾಲೆಗೆ ಕೊಡುಗೆಯಾಗಿ ಕಪಾಟು, ಪ್ರೆಷರ್ ಕುಕ್ಕರ್, 2 ಸಾವಿರ ರೂಪಾಯಿ ಠೇವಣಿ ಹಣ ಮತ್ತು ಎಲ್ಲಾ ಮಕ್ಕಳಿಗೆ ಕಾಣಿಕೆ ಡಬ್ಬದ ಜೊತೆಗೆ ಹಣ ಉಳಿತಾಯದ ಮನೋಭಾವ ಬೆಳೆಸಲು ಹಣವನ್ನು ಹಾಕಿ ಕೊಟ್ಟರು.
ಮುಖ್ಯಾಧ್ಯಾಪಕ ಗಣೇಶ ಭಾಗ್ವತ ಸ್ವಾಗತಿಸಿದರು, ಕೆರೆಕೋಣ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

More Stories
ಮಾಳ್ಕೋಡ ಶಾಲೆ ಶತಮಾನೋತ್ಸವ ಅಂಗವಾಗಿ ಪೂರ್ವ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನಕ್ಕೆ ಚಾಲನೆ
ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಹೊನ್ನಾವರ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸುಧೀಶ ನಾಯ್ಕ ಆಯ್ಕೆ