June 23, 2026

ಶ್ರೀ ಸ್ವಾನಂದಾಶ್ರಮದಲ್ಲಿ ಹೊಯ್ಸಳ ಶೈಲಿಯ ಭವ್ಯ ಗಣಪತಿ ದೇವಾಲಯದ ಪ್ರಥಮ ಹಂತದ ಲೋಕಾರ್ಪಣೆ

ಬೆಂಗಳೂರು: ಸ್ವರ್ಣವಲ್ಲೀ ಶ್ರೀ ಮಠದ ಪ್ರಮುಖ ಅಂಗಸಂಸ್ಥೆಯಾದ, ಇಲ್ಲಿನ ಕನಕಪುರ ರಸ್ತೆಯ ಆಗರ ಗ್ರಾಮದಲ್ಲಿರುವ ಶ್ರೀ ಸ್ವಾನಂದಾಶ್ರಮ–ಗಣೇಶ ಸಂಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೊಯ್ಸಳ ಶೈಲಿಯ ಭವ್ಯ ದೇವಾಲಯದ ಪ್ರಥಮ ಹಂತದ ಲೋಕಾರ್ಪಣಾ ಮಹೋತ್ಸವವು ಅತ್ಯಂತ ವೈಭವದಿಂದ ಜರುಗಿತು.

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ‌ಸಂಸ್ಥಾನದ‌‌ ಮಠಾಧೀಶರಾದ ಶ್ರೀಮಜ್ಜಗದ್ಗುರು‌ ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌‌ಮಹಾ ಸ್ವಾಮಿಗಳವರು ದೇವಾಲಯದ ಪ್ರಥಮ ಹಂತದ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವದಿಸಿದರು.

ಶಾಸ್ತ್ರೋಕ್ತ ಧಾರ್ಮಿಕ ವಿಧಿವಿಧಾನಗಳು ಹಾಗೂ ಮೂರ್ತಿ ಪ್ರತಿಷ್ಠಾಪನೆ

ಈ ಐತಿಹಾಸಿಕ ಮಹೋತ್ಸವದ ಅಂಗವಾಗಿ ಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ವೈದಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ಶ್ರೀ ಏಕಾಕ್ಷರ ಮಹಾಗಣಪತಿಯ ಅಷ್ಟಬಂಧ ಪ್ರತಿಷ್ಠಾಪನೆ: ಮುಂಜಾನೆ ಕರ್ಕ ಲಗ್ನದ ಶುಭ ಮುಹೂರ್ತದಲ್ಲಿ ವೇದಘೋಷ, ಮಂತ್ರೋಚ್ಚಾರಣೆಗಳ ಮಧ್ಯೆ ದೇವಸ್ಥಾನದ ಪ್ರಮುಖ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಯುಗ ಹಾಗೂ ಪುರಾಣೋಕ್ತ ಗಣಪತಿಗಳ ಸಾನ್ನಿಧ್ಯ: ಮುದ್ಗಲ ಪುರಾಣದಲ್ಲಿ ಉಲ್ಲೇಖಿಸಲಾದ ೩೨ ಗಣಪತಿಗಳು ಹಾಗೂ ಗಣೇಶ ಪುರಾಣೋಕ್ತ ೪ ಯುಗ ಗಣಪತಿಗಳ ಭವ್ಯ ಮೂರ್ತಿಗಳನ್ನು ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು.

ಶ್ಲೋಕ ಸಮರ್ಪಣೆ: ಇದೇ ಅಪೂರ್ವ ಕ್ಷಣದಲ್ಲಿ ಶ್ರೀ ಸ್ವರ್ಣವಲ್ಲೀ ಶ್ರೀಗಳವರ ಶಿಷ್ಯರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರು ತಾವೇ ಸ್ವತಃ ರಚಿಸಿದ ಗಣಪತಿಯ ಸ್ತುತಿಯ ಅದ್ಭುತ ಶ್ಲೋಕಗಳನ್ನು ದೇವರಿಗೆ ಸಮರ್ಪಿಸಿದರು.

    “ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಶ್ರದ್ಧೆ, ಭಕ್ತಿ ಜಾಗೃತಗೊಳಿಸಿ” — ಶ್ರೀ ಸ್ವರ್ಣವಲ್ಲೀ ಸ್ವಾಮಿಗಳವರು

    ಆಶ್ರಮದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು, ಭಕ್ತಿ, ಧರ್ಮ ಹಾಗೂ ಭಾರತೀಯ ಶಿಲ್ಪಕಲೆಯ ಮಹತ್ವವನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದರು.


    “ಸುಮಾರು 800 ವರ್ಷಗಳ ಹಳೆಯ ಹೊಯ್ಸಳ ಶಿಲ್ಪಕಲಾ ಶೈಲಿಯಲ್ಲಿ ಪುನರುತ್ಥಾನಗೊಂಡಿರುವ ಈ ದೇವಾಲಯವು ಇಡೀ ಸಮಾಜಕ್ಕೆ ಶಾಂತಿ, ಸೌಹಾರ್ದ ಹಾಗೂ ಆಧ್ಯಾತ್ಮಿಕ ಚೈತನ್ಯವನ್ನು ನೀಡುವ ಮಹೋನ್ನತ ಕೇಂದ್ರವಾಗಲಿ. ಪ್ರಸ್ತುತ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಇಂತಹ ದೇವಸ್ಥಾನಗಳನ್ನು ತೋರಿಸಿ, ಚಿಕ್ಕಂದಿನಿಂದಲೇ ಅವರಲ್ಲಿ ದೇವರ ಬಗ್ಗೆ ಶ್ರದ್ಧೆ ಹಾಗೂ ಸಾಂಸ್ಕೃತಿಕ ಭಕ್ತಿ ಜಾಗೃತವಾಗುವಂತೆ ಮಾಡಬೇಕು. ಗಣೇಶ ವಿಗ್ರಹವನ್ನು ಕೆತ್ತುವ ಇಂದಿನ ತಲೆಮಾರಿನ ಶಿಲ್ಪಿಗಳಿಗೆ ಈ ದೇವಾಲಯದ ಕಲಾತ್ಮಕತೆ ಒಂದು ಆದರ್ಶ ಮಾದರಿಯಾಗಲಿದೆ,” ಎಂದು ಹಾರೈಸಿದರು.

    ಗಣ್ಯರ ಉಪಸ್ಥಿತಿ

    ಕಾರ್ಯಕ್ರಮದಲ್ಲಿ ಹರಿಹರಪುರದ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಶೀರ್ವಚನ ನೀಡಿದರು.


    ವೇದಿಕೆಯಲ್ಲಿ ಮೈಸೂರಿನ ಭಾರತೀಯ ಯೋಗಧಾಮದ ಅಧ್ಯಕ್ಷರಾದ ಡಾ. ಕೆ.ಎಲ್. ಶಂಕರನಾರಾಯಣ ಜೋಯಿಸ್, ಮಾಜಿ ಸಭಾಪತಿ ಹಾಗೂ ಹಾಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ನಾಡಿನ ಪ್ರಮುಖ ಸಾಂಸ್ಕೃತಿಕ, ಧಾರ್ಮಿಕ ಮುಖಂಡರು ಮತ್ತು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತಾದಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

    About The Author

    error: Content is protected !!